ಸಿಐಡಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ
ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸೂಚನೆ
ಬೆಂಗಳೂರು: 16.06.2026
ಅಪರಾಧ ತನಿಖಾ ಇಲಾಖೆಯ (ಸಿಐಡಿ) ಪ್ರಸ್ತುತ ಕಾರ್ಯವೈಖರಿ ಹಾಗೂ ಇಲಾಖೆಯ ಮುಂದಿರುವ ಹೊಸ ಸವಾಲುಗಳ ಕುರಿತು ಮಾನ್ಯ ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಇಂದು ಸಿಐಡಿ ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಹಾಗೂ ಇಲಾಖೆಯ ಇತರೆ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಪರಾಮರ್ಶನಾ ಸಭೆ ನಡೆಸಿದರು.
ಸಭೆಯಲ್ಲಿ ಸಚಿವರು, ಸಿಐಡಿ ಇಲಾಖೆಯು ನಿರ್ವಹಿಸುತ್ತಿರುವ ಅಪರಾಧ ತನಿಖೆಗಳು, ಆರ್ಥಿಕ ಅಪರಾಧಗಳು, ಸೈಬರ್ ಅಪರಾಧ, ಮಾದಕ ದ್ರವ್ಯ (ನಾರ್ಕೋಟಿಕ್ಸ್) ತಡೆ, ಹಣಕಾಸು ವಂಚನೆ ಹಾಗೂ ಇಂಟೆಲಿಜೆನ್ಸ್ ಆಧಾರಿತ ಪೊಲೀಸಿಂಗ್ ಸೇರಿದಂತೆ ಹತ್ತು ಹಲವು ಪ್ರಮುಖ ಜವಾಬ್ದಾರಿಗಳ ಕುರಿತು ವಿಸ್ತೃತವಾಗಿ ಚರ್ಚಿಸಿದರು.
ದಿನೇ ದಿನೇ ಬದಲಾಗುತ್ತಿರುವ ಮತ್ತು ಅತ್ಯಾಧುನಿಕವಾಗುತ್ತಿರುವ ಅಪರಾಧ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ತನಿಖಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದು, ವಿವಿಧ ವಿಭಾಗಗಳ ನಡುವೆ ಪರಸ್ಪರ ಸಮನ್ವಯತೆಯನ್ನು ಉತ್ತಮಪಡಿಸುವುದು ಹಾಗೂ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತು ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಇಲಾಖೆಯ ಒಟ್ಟಾರೆ ಕಾರ್ಯವೈಖರಿ ಮತ್ತು ಬಾಕಿ ಇರುವ ಪ್ರಕರಣಗಳ ಪ್ರಗತಿ ಪರಿಶೀಲನೆ, ಆರ್ಥಿಕ ವಂಚನೆ ಮತ್ತು ಸೈಬರ್ ಅಪರಾಧಗಳನ್ನು ತಡೆಯಲು ತಾಂತ್ರಿಕ ಸಜ್ಜುಗೊಳಿಸುವಿಕೆ ಹಾಗೂ ಇಂಟೆಲಿಜೆನ್ಸ್ ಆಧಾರಿತ ತನಿಖಾ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುವುದು ಸೇರಿದಂತೆ ಕ್ರಮ ಕುರಿತಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಿಐಡಿ ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಪ್ರಣಬ್ ಮೊಹಂತಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.



