ಒಳ್ಳೆಯತನ ಎಂಬ ಈರುಳ್ಳಿ.
ನಾವು ಸಾಮಾನ್ಯವಾಗಿ ಜಗತ್ತನ್ನು ಎರಡು ಭಾಗಗಳಾಗಿ ವಿಂಗಡಿಸುತ್ತೇವೆ ಒಳ್ಳೆಯವರು ಮತ್ತು ಕೆಟ್ಟವರು ಅಂತ.
ಆದರೆ ಜಗತ್ತು ಅಷ್ಟು ಸರಳವಾಗಿ ವಿಂಗಡನೆ ಆಗಲ್ಲ.
ರಾಮಾಯಣದಲ್ಲಿ ರಾವಣನನ್ನು ಬಹಳ ಜನ ಖಳನಾಯಕನಾಗಿ ನೋಡುತ್ತಾರೆ. ಆದರೆ ಕೆಲವರು ಅವನನ್ನು ಮಹಾನ್ ಶಿವಭಕ್ತ, ಪಂಡಿತ ಮತ್ತು ಶೂರ ರಾಜ ಎಂದು ಪೂಜಿಸುತ್ತಾರೆ.
ಮಹಾಭಾರತದಲ್ಲಿ ಕರ್ಣನು ಪಾಂಡವರಿಗೆ ವಿರೋಧಿಯಾಗಿದ್ದ. ಆದರೆ ದುರ್ಯೋಧನನಿಗೆ ಅವನು ಅತ್ಯಂತ ನಿಷ್ಠಾವಂತ ಸ್ನೇಹಿತ. ಪಾಂಡವರ ದೃಷ್ಟಿಯಿಂದ ನೋಡಿದರೆ ಅವನು ಅಧರ್ಮಿ , ಶತ್ರು; ದುರ್ಯೋಧನನ ದೃಷ್ಟಿಯಲ್ಲಿ ಅವನು ಆದರ್ಶ ಮಿತ್ರ .
ದುರ್ಯೋಧನನು ಪಾಂಡವರಿಗೆ ಅನ್ಯಾಯ ಮಾಡಿದ. ಆದರೆ ಅವನ ಬೆಂಬಲಿಗರಿಗೆ ಅವನು ತನ್ನ ಸ್ನೇಹಿತರಿಗಾಗಿ ಕೊನೆಯವರೆಗೂ ಹೋರಾಡಿದ ವ್ಯಕ್ತಿ.
ಇದಕ್ಕೊಂದು ಬಗೆಯ ಈರುಳ್ಳಿ ಸಿಪ್ಪೆ ಬಿಡಿಸಿದ ಹಾಗೇ ಕೋರ್ ಅಂದರೆ ಮಧ್ಯಭಾಗದ ತಿರುಳಿನಲ್ಲಿ ಏನೋ ಇದೆ ಇನ್ನೂ ಇದೆ ಅಂತಬಿಡಿಸುತ್ತಾ ಬಿಡಿಸುತ್ತಾ ಹೋಗಿ ಕೊನೆಗೆ ಏನೂ ಇರದ ಸ್ಥಿತಿ. ನನ್ನ ಒಳ್ಳೆಯತನ ಇನ್ನೊಬ್ಬರಿಗೆ ಕೆಟ್ಟದಾಗೀ ಕಾಣಬಹುದು..
ಇತರರು ಕೊಡುವ ಲೇಬಲ್ಗಳು ಯಾವಾಗಲೂ ಪೂರ್ತಿ ಸತ್ಯವಾಗಿರುವುದಿಲ್ಲ. ಅಥವಾ ಹೆಚ್ಚು ಜನ ಒಪ್ಪಿಲ್ಲ ಎಂದಾಗ ಒಳ್ಳೆಯತನ ಕೆಟ್ಟದಾಗಿಬಿಡುವುದಿಲ್ಲ.
ನನ್ನ ಪ್ರಕಾರ ಒಳ್ಳೆಯತನ ಮತ್ತು ಕೆಟ್ಟತನವನ್ನು ಅಳೆಯುವ ಕೆಲವು ಪ್ರಶ್ನೆಗಳು ಇವೆ:
👉ನನ್ನ ಕ್ರಿಯೆಗಳು ಕಾರಣವಿಲ್ಲದೆ , ಅಕಾರಣ ಇನ್ನೊಬ್ಬರಿಗೆ ನೋವುಂಟು ( ದೈಹಿಕ ಹಾಗು ಮಾನಸಿಕ) ಮಾಡುತ್ತಿವೆಯೇ?
👉ನನ್ನ ನಿರ್ಧಾರಗಳ ಹಿಂದೆ ಪ್ರತೀಕಾರ, ಅಸೂಯೆ, ಅಹಂಕಾರ ಅಥವಾ ಅಭದ್ರತೆಯಿದೆಯೇ?
👉ನನಗೆ ಲಾಭವಾಗಲು ನಾನು ಇನ್ನೊಬ್ಬರ ಹಿತವನ್ನು ಬಲಿಕೊಡುತ್ತಿದ್ದೀನೆಯೇ?
👉ನನ್ನ ವರ್ತನೆಯನ್ನು ನಾನು ಜಸ್ಟಿಫೈ ಮಾಡ್ತಿದ್ದೀನಾ , ಅಥವಾ ಪ್ರಾಮಾಣಿಕವಾಗಿ ಪರಿಶೀಲಿಸುತ್ತಿದ್ದೇನೆಯೇ?
👉ನಾವು ನಮ್ಮನ್ನು ನಾವು ಮೋಸಗೊಳಿಸುವುದು ತುಂಬಾ ಸುಲಭ. ನಿಜ ಹೇಳಬೇಕೆಂದರೆ ಪ್ರತಿಯೊಬ್ಬ ಖಳನಾಯಕನೂ ತನ್ನ ಕಥೆಯಲ್ಲಿ ನಾಯಕನೇ ಆಗಿರುತ್ತಾನೆ.
ಆದ್ದರಿಂದ
ನಮ್ಮ ಆತ್ಮಸಾಕ್ಷಿಯ ಮುಂದೆ ನಿಲ್ಲುವ ಧೈರ್ಯವೇ ಒಳ್ಳೆಯತನದ ಮೊದಲ ಹೆಜ್ಜೆ ಅಂತ ನನ್ನ ಅಭಿಪ್ರಾಯ, ನೀವೇನು ಹೇಳ್ತೀರಾ?
ಬರಹ: ಡಾ. ರೂಪಾ ರಾವ್ , ಖ್ಯಾತ ಮನೋ ತಜ್ಞರು



