ಪ್ರಾಮಾಣಿಕತೆ ಕೊಡವರ ಡಿಎನ್ಎಯಲ್ಲಿಯೇ ಇದೆ: ಬಸವರಾಜ ಬೊಮ್ಮಾಯಿ
ಕೊಡವರ ಸಂಸ್ಕಾರ ಮತ್ತು ಸಂಸ್ಕೃತಿ ಜಗತ್ತು ಮೆಚ್ಚುವಂತಹದು:ಬಸವರಾಜ ಬೊಮ್ಮಾಯಿ
ಮಡಿಕೇರಿ: ಕೊಡಗಿನ ಜನರು ವೀರರು, ಧೀರರು, ಶೂರರು ಸಮರ್ಥರು ಅಷ್ಟೇ ಅಲ್ಲದೇ ಪ್ರಾಮಾಣಿಕರು. ಕೊಡವರ ಡಿಎನ್ಎಯಲ್ಲಿಯೇ ಪ್ರಾಮಾಣಿಕತೆ ಇದೆ. ನಿಮ್ಮ ಸಂಸ್ಕಾರ ಮತ್ತು ಸಂಸ್ಕೃತಿ ಜಗತ್ತು ಮೆಚ್ಚುವಂತಹದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಕೊಡಗಿನ ಮಾದಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಸಮಯದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ನಮಗೆ ಶಾಸಕ, ಮಂತ್ರಿ, ಸಿಎಂ ಸ್ಥಾನವನ್ನು ಕೊಟ್ಟವರು ನೀವು, ಆ ಸ್ಥಾನದಲ್ಲಿ ಕೂಡಿಸಿದವರು ನೀವು. ನಿಮ್ಮದನ್ನು ನಿಮಗೆ ಕೊಟ್ಟು ಪುಣ್ಯವನ್ನು ಪಡೆಯುತ್ತಿರುವವರು ನಾವು. ಅದಕ್ಕಾಗಿ ನಿಮಗೆ ಕೃತಜ್ಞತೆ ಹೇಳಬೇಕು. ಎರಡನೆಯದಾಗಿ ಯಾರಾದರೂ ಸಹಾಯ ಮಾಡಿದರೆ ಸ್ಮರಣೆ ಮಾಡುವುದು ಮನುಷ್ಯನ ಅತ್ಯಂತ ಶ್ರೇಷ್ಠ ಗುಣ. ಸಣ್ಣ ಕೆಲಸ ಮಾಡಿದರೂ ಕೂಡ ನೀವು ಬಹಳ ದೊಡ್ಡದಾಗಿ ಸ್ಮರಣೆ ಮಾಡಿದ್ದೀರಿ. ನಾವು ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡಿರುತ್ತೇವೆ. ಎಲ್ಲವನ್ನು ನೆನಪಿಟ್ಟು ಸ್ಮರಣೆ ಮಾಡಿದ್ದಕ್ಕೆ ದೊಡ್ಡವರಾಗಿದ್ದೀರಿ ಎಂದು ಹೇಳಿದರು.
ಕೊಡವರು ಪ್ರಾಮಾಣಿಕರು
ಕೊಡಗಿನ ಜನರು ವೀರರು, ಧೀರರು ಶೂರರು ಸಮರ್ಥರು ಜೊತೆಗೆ ಪ್ರಾಮಾಣಿಕರು ಜಗತ್ತಿನಲ್ಲಿ ಏನಾದರೂ ಅತ್ಯಂತ ಕಡಿಮೆ ಇರುವುದು ಪ್ರಾಮಾಣಿಕತೆ. ನಿಮ್ಮ ಡಿಎನ್ಎಯಲ್ಲಿಯೇ ಪ್ರಾಮಾಣಿಕತೆ ಇದೆ. ಇದ್ದದ್ದನ್ನು ಇದ್ದ ಹಾಗೆ ಹೇಳುತ್ತೀರಿ, ನೇರ ನುಡಿ ಪ್ರಾಮಾಣಿಕತೆ ಕೊಡವರಲ್ಲಿ ಇದೆ. ನಿಮ್ಮ ಸಂಸ್ಕಾರ ಮತ್ತು ಸಂಸ್ಕೃತಿ ಜಗತ್ತು ಮೆಚ್ಚುವಂತಹದು. ನಾಗರಿಕತೆ ಮತ್ತು ಸಂಸ್ಕೃತಿ ನಡುವಿನ ವ್ಯತ್ಯಾಸ ಬಹಳ ಜನರಿಗೆ ಗೊತ್ತಿಲ್ಲ. ನಾವು ಏನು ಹೊಂದಿದ್ದೇವೆ ಅದು ನಾಗರಿಕತೆ. ಮೊದಲು ಒಣಕೆ ಇತ್ತು. ಬೀಸಿಕಲ್ಲು ಇತ್ತು ಈಗ ಮಿಕ್ಕಿ ಬಂದಿದೆ. ಫ್ಯಾನ್, ಕಾರ್, ಏರೋಪ್ಲೇನ್ ಬಂದಿದೆ. ಇದು ನಾಗರಿಕತೆಯ ಬೆಳವಣಿಗೆ. ಇದು ಒಂದು ಭಾಗ ಅದರ ಜೊತೆಗೆ ನಾವೇನಾಗಿದ್ದೇವೆ ಎನ್ನುವುದು ನಮ್ಮ ಸಂಸ್ಕೃತಿ. ಆದರೆ, ಕೊಡಗಿನಲ್ಲಿ ನಿಮ್ಮ ಸಂಸ್ಕೃತಿ ಬಹಳ ದೊಡ್ಡದಾಗಿದೆ. ಇದು ಒಂದು ಸಮುದಾಯದ ಜೊತೆಗೆ ಬೆರೆತಿದೆ. ಇದು ದೇಶದ ಸಂಸ್ಕೃತಿಯಾದರೆ ಆ ದೇಶದ ಹೆಸರು ವಿಶ್ವ ವ್ಯಾಪ್ತಿಯಾಗುತ್ತದೆ. ಅದಕ್ಕೆ ನಮ್ಮ ಪಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿ ಮತ್ತು ಪರಂಪರೆ ಎರಡನ್ನೂ ಬೆಳೆಸಬೇಕು ಎಂದು ಹೇಳುತ್ತಾರೆ. ಇವತ್ತು ಪರಂಪರೆಯನ್ನು ಉಳಿಸುವುದು ಬಹಳ ಕಷ್ಟ ಆ ಪರಂಪರೆ ಉಳಿಸಿಕೊಂಡು ಹೋಗುವ ಕೆಲಸವನ್ನು ನಿಮ್ಮ ಹಿರಿಯರು, ಯುವಕರು ಮಾಡಿಕೊಂಡು ಹೋಗುತ್ತಿದ್ದೀರಿ ಹೀಗಾಗಿ ನಿಮ್ಮ ಪರಂಪರೆ ಬಗ್ಗೆ ಅಭಿಮಾನ, ಗೌರವ ಇದೆ. ಅದಕ್ಕೆ ಘನತೆ ತಂದು ಕೊಟ್ಟು ನೀವು ಬಹಳ ದೊಡ್ಡ ಸೇವೆ ಮಾಡಿದ್ದೀರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೈಸೂರು-ಕೊಡಗು ಸಂಸದ ಯದುವೀರ ಒಡೆಯರ್ , ಮಾಜಿ ಸಚಿವ ಅಪ್ಪಚ್ಚು ರಂಜನ್ , ಮಾದಾಪುರ ಕೊಡವ ಸಮಾಜದ ಅಧ್ಯಕ್ಷ ಮಂಡೆಪಂಡ ಮನು ಮೇದಪ್ಪ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.



