ಮಳೆಗಾಗಿ ಕೆರಕಲಮಟ್ಟಿಯಲ್ಲಿ ‘ಗುರ್ಜಿ ಪೂಜೆ’
ಬಾದಾಮಿ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲ್ಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಮಹಿಳೆಯರು ಮಳೆಗಾಗಿ ಪ್ರಾರ್ಥಿಸಿ ಸಾಂಪ್ರದಾಯಿಕ ‘ಗುರ್ಜಿ ಪೂಜೆ’ ನೆರವೇರಿಸಿದರು.
ರೊಟ್ಟಿ ಮಾಡುವ ಹಚ್ಚಿನ ಮೇಲೆ ‘ಗುರ್ಜಿ’ ಆಕೃತಿ ಇಟ್ಟುಕೊಂಡ ಮಹಿಳೆಯರು, ಹಾಡುತ್ತ–ಕುಣಿಯುತ್ತ ಮನೆ ಮನೆಗೆ ತೆರಳಿದರು. ಗುರ್ಜಿಗೆ ನೀರು ಹಾಕುವ ಮೂಲಕ ಮಳೆರಾಯನನ್ನು ಆಹ್ವಾನಿಸುವ ಸಂಪ್ರದಾಯವನ್ನು ಆಚರಿಸಿದರು.
‘ಬಾರೆ ಬಾರೆ ಮಳೆರಾಜ ನೀನು ಬಾರೆ, ಬಿಳಿ ಕುದುರೆ ಏರಿ ಬಾರೋ ಮಳೆರಾಜ ಬಾರೋ’ ಎಂದು ಜನಪದ ಹಾಡು ಹಾಡುತ್ತ ಗ್ರಾಮದಲ್ಲಿ ಸಂಚರಿಸಿ ಮಳೆಗಾಗಿ ಪ್ರಾರ್ಥಿಸಿದರು.
ಬಳಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ನಡೆಸಲಾಯಿತು. ‘ಗುರ್ಜಿ ಪೂಜೆ ಮಾಡಿದರೆ ಮಳೆ ಬರುತ್ತದೆ’ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.
ಮಳೆಗಾಗಿ ಗುರ್ಜಿ ಪೂಜೆ ನಡೆಸುವ ಪದ್ಧತಿ ಗ್ರಾಮೀಣ ಭಾಗದಲ್ಲಿ ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಜನಪದ ಸಂಪ್ರದಾಯಗಳಲ್ಲಿ ಒಂದಾಗಿದೆ.



