ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ; ಸಚಿವ ಸಂಪುಟದ ಬಗ್ಗೆ ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ: ಸಿಎಂ ಡಿ ಕೆ ಶಿವಕುಮಾರ್
ಸಚಿವ ಸ್ಥಾನ ಖಾಲಿ ಬಿಡಲು ಇಷ್ಟವಿಲ್ಲ, ಅದರಲ್ಲಿ ಅರ್ಥವೂ ಇಲ್ಲ
ಮಂಗಳವಾರ ನಿಗದಿಯಾಗಿದ್ದ ಸಭೆ ನಡೆಯಲಿಲ್ಲ
ವಿದ್ಯಾರ್ಥಿಗಳ ಭಾವನೆಗೆ ಕಾಂಗ್ರೆಸ್ ಸ್ಪಂದಿಸಿದೆ
ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು; ವಿದ್ಯಾರ್ಥಿಗಳಿಗೆ ನ್ಯಾಯ ಕೊಡಬೇಕು
ಪ್ರಾಣಿಗಳಿಗಿಂತ ಕೀಳಾಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ
ಮಹಿಳಾ ಸಂಸದರನ್ನು ಅಸಭ್ಯವಾಗಿ ನಡೆಸಿಕೊಂಡಿದ್ದಾರೆ
ನವದೆಹಲಿ,
“ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ. ನಮ್ಮ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತಾರೆ. ಹೊಸ ಮುಖ, ಜಿಲ್ಲೆ ಹಾಗೂ ಪ್ರಾಂತ್ಯವಾರು ಲೆಕ್ಕಾಚಾರ ಮಾಡಿ ತೀರ್ಮಾನ ಮಾಡುತ್ತಾರೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ನವದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ಶಿವಕುಮಾರ್ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
“ಸಚಿವ ಸಂಪುಟ ವಿಸ್ತರಣೆ ಮಾಡಿ, ಬುಧವಾರ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಮಾಡಲು ರಾಜ್ಯಪಾಲರ ಅನುಮತಿ ಪಡೆಯಲಾಗಿತ್ತು. ಆದರೆ ಮಂಗಳವಾರ ನಿಗದಿಯಾಗಿದ್ದ ಸಭೆ ಕಾರಣಾಂತರಗಳಿಂದ ನಡೆಯಲಿಲ್ಲ. ಇಂದು ನಮ್ಮ ನಾಯಕರು ಪ್ರತಿಭಟನೆ ಮಾಡುತ್ತಿರುವಾಗ ಅವರನ್ನು ಬಂಧಿಸಿದ್ದಾರೆ. ನನ್ನನ್ನು ಪೋಲೀಸರು ಎಳೆದಾಡಲು ಮುಂದಾದಾಗ ರಾಹುಲ್ ಗಾಂಧಿ ಅವರು, ಅವರು ಮುಖ್ಯಮಂತ್ರಿ ಅವರನ್ನು ಮುಟ್ಟಬಾರದು ಎಂದು ತಾಕೀತು ಮಾಡಿದರು. ನಂತರ ನನಗೆ ಮನವಿ ಮಾಡಿದರು, ನಾನು ಪಕ್ಕಕ್ಕೆ ಬಂದೆ” ಎಂದು ವಿವರಿಸಿದರು.
ರಾಹುಲ್ ಗಾಂಧಿ ಅವರು ಸಚಿವ ಸಂಪುಟಕ್ಕೆ ಮಾನದಂಡ ವಿಧಿಸಿರುವ ಬಗ್ಗೆ ಹಾಗೂ ಹೊಸ ಪ್ರಯೋಗದ ಬಗ್ಗೆ ಕೇಳಿದಾಗ, “ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾರಾದರೂ ಮಾಧ್ಯಮಗಳ ಮುಂದೆ ಚರ್ಚೆ ಮಾಡುತ್ತಾರಾ? ಬೋಸರಾಜು ಶಾಸಕರಾಗದಿದ್ದರೂ ಮಂತ್ರಿ ಮಾಡಿಕೊಳ್ಳಲಿಲ್ಲವೇ? ಕೃಷ್ಣ ಅವರ ಸರ್ಕಾರದಲ್ಲಿ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಿಲ್ಲವೇ? ಮಾಧ್ಯಮದವರನ್ನು ಎಂಎಲ್ಸಿ, ಎಂಪಿ ಮಾಡಿಕೊಂಡಿಲ್ಲವೇ?” ಎಂದು ತಿಳಿಸಿದರು.
ಅಚ್ಚರಿ ಅಂಶ ಇದೆಯೇ ಎಂದು ಕೇಳಿದಾಗ, “ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಾಗುವುದಾದರೆ ಏನು ಬೇಕಾದರೂ ಮಾಡಬೇಕಾಗುತ್ತದೆ” ಎಂದು ತಿಳಿಸಿದರು.
ಸಚಿವ ಸಂಪುಟ ವಿಚಾರಕ್ಕೆ ನೀವು ಮತ್ತೆ ದೆಹಲಿಗೆ ಬರುತ್ತೀರಾ ಎಂದು ಕೇಳಿದಾಗ, “ನಮ್ಮ ನಾಯಕರು ನಮ್ಮ ಜೊತೆ ಚರ್ಚೆ ಮಾಡುತ್ತಾರೆ. ಅಭಿಪ್ರಾಯ ಪಡೆಯುತ್ತಾರೆ. ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗಲೂ ಇದೇ ರೀತಿ ಮಾಡಿದ್ದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಹರಿಪ್ರಸಾದ್ ಅವರು ಸೇರಿ ಚರ್ಚೆ ಮಾಡಿದ್ದೇವೆ” ಎಂದರು.
ಸಚಿವ ಸ್ಥಾನ ಖಾಲಿ ಬಿಡಲು ಇಷ್ಟವಿಲ್ಲ
ಬಾಕಿ ಇರುವ ಎಲ್ಲಾ 20 ಸ್ಥಾನ ತುಂಬುತ್ತೀರಾ ಎಂದು ಕೇಳಿದಾಗ, “ನನಗೆ ಗೊತ್ತಿಲ್ಲ. ಎಲ್ಲಾ ಸ್ಥಾನ ತುಂಬಲು ನಾನು ಬಯಸುತ್ತೇನೆ. ಖಾಲಿ ಇಟ್ಟುಕೊಳ್ಳುವುದರಲ್ಲಿ ಅರ್ಥ ಇಲ್ಲ. ಚೀಫ್ ವಿಪ್, ವಿಧಾನ ಪರಿಷತ್ ಸಭಾಪತಿ, ಸ್ಪೀಕರ್ ಸ್ಥಾನಗಳನ್ನೂ ತುಂಬಬೇಕು” ಎಂದರು.
“ನನಗೆ ಇಂದೇ ಅವಕಾಶ ನೀಡಿದರೆ ಇಂದೇ ಪಟ್ಟಿ ಅಂತಿಮಗೊಳಿಸಲು ಸಿದ್ಧ. ಈ ವಿಚಾರ ಮುಂದೂಡಲು ನನಗೂ ಇಷ್ಟವಿಲ್ಲ. ನಾನು ಸೋಮವಾರವೇ ಬರಬೇಕಾಗಿತ್ತು. ಹಾಸನದಲ್ಲಿ ನನ್ನ ಕರ್ತವ್ಯ ಮಾಡಬೇಕಾಗಿತ್ತು. ಹೀಗಾಗಿ ನಾನು ಮಂಗಳವಾರ ದೆಹಲಿಗೆ ಬಂದಿರುವೆ. ಮಂಗಳವಾರ ರಾತ್ರಿ ಸಭೆ ಸೇರುವ ನಿರ್ಧಾರ ಆಗಿತ್ತು. ಆದರೆ ನಮ್ಮ ನಾಯಕರನ್ನು ಬಂಧಿಸಿದ್ದಾರೆ. ಅವರು ಬಂದ ಬಳಿಕ ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು.
ನನಗೆ ಎಲ್ಲರೂ ಒಂದೇ
ಯುವಕರಿಗೆ ಅವಕಾಶ ಸಿಗುವುದೇ ಎಂದು ಕೇಳಿದಾಗ, “ನನಗೆ 136 ಜನ ಶಾಸಕರು, ಪರಿಷತ್ ಸದಸ್ಯರು ಎಲ್ಲರೂ ಒಂದೇ. ಎಲ್ಲರಿಗೂ ಅರ್ಹತೆ ಇದೆ. ನಾನು ಮೊದಲ ಬಾರಿಗೆ ಮಂತ್ರಿಯಾದವನು. ಯುವಕರಿಗೆ ಅವಕಾಶ ನೀಡಬೇಕು ಎಂಬುದು ನನ್ನ ಬಯಕೆ. ದೆಹಲಿ ನಾಯಕರು ನೀಡುವ ಮಾರ್ಗದರ್ಶನದಂತೆ ಕೇಳಬೇಕು” ಎಂದರು.
ವಿದ್ಯಾರ್ಥಿಗಳ ಭಾವನೆಗೆ ಕಾಂಗ್ರೆಸ್ ಸ್ಪಂದಿಸಿದೆ
“ಭಾರತದ ಭವಿಷ್ಯ ಯುವ ವಿದ್ಯಾರ್ಥಿಗಳ ಮೇಲೆ ನಿಂತಿದೆ. 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಷ್ಟಪಟ್ಟು ತಯಾರಿ ಮಾಡಿಕೊಂಡಿರುವಾಗ, ಪ್ರರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಅವರ ಕನಸನ್ನು ನಾಶ ಮಾಡಿದೆ. ಹೀಗಾಗಿ ತಮ್ಮ ನೋವನ್ನು ವ್ಯಕ್ತಪಡಿಸಲು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಾರೆ. ಆದರೆ ಪ್ರತಿಭಟನೆ ಮಾಡುವವರನ್ನು ಯಾವ ದೃಷ್ಟಿಯಲ್ಲಿ ನೋಡಲಾಗುತ್ತಿದೆ ಎಂಬುದು ಮುಖ್ಯ. ಕಾಂಗ್ರೆಸ್ ನಾಯಕರು ವಿದ್ಯಾರ್ಥಿಗಳ ಭಾವನೆಗೆ ಸ್ಪಂದಿಸಿದೆ” ಎಂದು ತಿಳಿಸಿದರು.
ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು; ವಿದ್ಯಾರ್ಥಿಗಳಿಗೆ ನ್ಯಾಯ ಕೊಡಬೇಕು
“ದೇಶದಾದ್ಯಂತ ಯುವಕರು ಸ್ವಯಂ ಪ್ರೇರಿತರಾಗಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದರು. ದೇಶದ ಮುಂದಿನ ಭವಿಷ್ಯದ ಮೇಲೆ ನೀವು ಮಾಡುತ್ತಿರುವ ಹಲ್ಲೆ, ನಿಮ್ಮ ಮಕ್ಕಳ ಮೇಲೆ ಮಾಡುವ ಹಲ್ಲೆಯಲ್ಲವೇ? ಕಾಂಗ್ರೆಸ್ ಪಕ್ಷ ಇದರ ವಿರುದ್ಧ ಧ್ವನಿ ಎತ್ತಿದೆ. ಇದು ಭಾರತದ ಯುವಕರ ಬದುಕಿನ ಪ್ರಶ್ನೆ. ಯುವಕರು, ವಿದ್ಯಾರ್ಥಿಗಳು, ಪೋಷಕರು ಈಗ ಹೋರಾಟ ಮಾಡುತ್ತಿದ್ದಾರೆ. ಮಕ್ಕಳ ಭವಿಷ್ಯ ಉತ್ತಮವಾಗಿರಬೇಕು ಎಂಬುದು ಎಲ್ಲರ ಆಸೆಯಲ್ಲವೇ? ನೀವೆಲ್ಲರೂ ಹೋರಾಟದ ಸ್ವರೂಪ ನೋಡಿದ್ದೀರಿ. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ರಾಹುಲ್ ಗಾಂಧಿ ಅವರು ಹೋರಾಟ ಮಾಡುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಕೂಡ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದೇ ಈ ದೇಶದಲ್ಲಿ ಗಾಂಧಿ ಕುಟುಂಬದ ಶಕ್ತಿ. ನಮ್ಮ ಸಂಸತ್ ಸದಸ್ಯರನ್ನು ಬಂಧಿಸಿರುವುದನ್ನು ಕರ್ನಾಟಕ ರಾಜ್ಯ ಸೇರಿದಂತೆ ಇಡೀ ದೇಶ ಖಂಡಿಸುತ್ತದೆ” ಎಂದರು.
ಪ್ರಾಣಿಗಳಿಗಿಂತ ಕೀಳಾಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ
“ನಿನ್ನೆ ವಿದ್ಯಾರ್ಥಿಗಳ ಮೇಲೆ ನಡೆಸಿರುವ ಲಾಠಿಚಾರ್ಚ್ ಮಾಡಿದ್ದಾರೆ. ಮಾಧ್ಯಮಗಳಿಗೆ ಈ ಹೋರಾಟವನ್ನು ರೆಕಾರ್ಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿಲ್ಲ. ಪ್ರಾಣಿಗಳಿಗಿಂತ ಕೀಳಾಗಿ ನಮ್ಮ ವಿದ್ಯಾರ್ಥಿಗಳಿಗೆ ಹೊಡೆದಿದ್ದಾರೆ. ವಿದ್ಯಾರ್ಥಿಗಳು ತಮ್ಮ ಹಕ್ಕು ಕೇಳಲು ಬಂದಾಗ ಈ ರೀತಿ ಲಾಠಿಯಲ್ಲಿ ಹೊಡೆದಿದ್ದಾರೆ. ಅವರಿಗೆ ಅಪಮಾನ ಮಾಡಿ, ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಆ ವಿದ್ಯಾರ್ಥಿಗಳ ಜೊತೆ ನಿಲ್ಲಲಿದೆ. ನೂರು ಜನ ಸಂಸತ್ ಸದಸ್ಯರನ್ನು ಬಂಧಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಕ್ಕಳ ಭವಿಷ್ಯ ಮುಖ್ಯ. ಕೇಂದ್ರ ಸಚಿವರು ರಾಜೀನಾಮೆ ಕೊಡಲೇಬೇಕು. ಮಕ್ಕಳಿಗೆ ನ್ಯಾಯ ಒದಗಿಸಿಕೊಡಬೇಕು” ಎಂದು ಆಗ್ರಹಿಸಿದರು.
ಮಹಿಳಾ ಸಂಸದರನ್ನು ಅಸಭ್ಯವಾಗಿ ನಡೆಸಿಕೊಂಡಿದ್ದಾರೆ
“ಕೇಂದ್ರ ಮಂತ್ರಿಗಳು ಆಗಮಿಸಿದ್ದರು. ನಮಗೆ ಈ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಿ, ಸಚಿವರ ರಾಜೀನಾಮೆ ಪಡೆಯಿರಿ ಎಂದು ಬೇಡಿಕೆ ಇಟ್ಟಿದ್ದೇವೆ. ನಾವು ಸಭ್ಯ ರೀತಿಯಲ್ಲೇ ಪ್ರತಿಭಟನೆ ಮಾಡಿದ್ದೇವೆ. ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರು. 240 ಸದಸ್ಯರ ನಾಯಕರು. ಅವರನ್ನು ಯಾವ ರೀತಿ ಬಂಧಿಸಿದರು ಎಂದು ನೀವು ನೋಡಿದ್ದೀರಿ. ನಮ್ಮ ಸಂಸದರು ಅಲ್ಲಿಗೆ ಆಗಮಿಸಲು ಅವಕಾಶ ನೀಡದಂತೆ ಬಂಧಿಸಿದ್ದಾರೆ. ನಮ್ಮ ಪ್ರತಿಭಟನೆ ವೇಳೆ ಅದರಲ್ಲೂ ನಮ್ಮ ಮಹಿಳಾ ಸಂಸದರನ್ನು ಅಸಭ್ಯವಾಗಿ ನಡೆಸಿಕೊಂಡಿದ್ದಾರೆ. ಅವರ ಮೇಲೆ ಕೈ ಹಾಕಿ ನಂತರ ಮಹಿಳಾ ಪೋಲೀಸರನ್ನು ಕರೆತಂದು ಕರೆದೋಯ್ದರು. ನಂತರ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಿದ್ದಾರೆ” ಎಂದು ವಿವರಿಸಿದರು.


