ಇವರಿಗೆ ಹೇಳೋರಿಲ್ಲ, ಕೇಳೋರಿಲ್ಲ, ಖಂಡ್ರೆ ಸಾಹೇಬ್ರೇ ನೀವಾದ್ರೂ ಅಥಣಿ ಈ ಅಧಿಕಾರಿಗಳ ಅಂಧಾ ದರ್ಬಾರ್ ಗೆ ಮುಕ್ತಿ ನೀಡಿ..!
ಅಥಣಿಯ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಎಲ್ಲ ವಿಭಾಗಗಳಿಗೆ ಆಗಬೇಕಿದೆ ದೊಡ್ಡ ಮೇಜರ್ ಸರ್ಜರಿ..!
ಬೆಳಗಾವಿ : ವರ್ಗಾವಣೆಯಾಗಿ ಒಂದು ವರ್ಷವಾದರೂ ಸಹ ಮೂಲ ಸ್ಥಾನಕ್ಕೆ ತೆರಳದೆ ಇಬ್ಬರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲೇ ಅಭಿಯಂತರರು ಉಳಿದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಜಿಲ್ಲೆಯ ಅಥಣಿ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸೇರಿದ ಇಬ್ಬರು ಅಭಿಯಂತರರು (ಇಂಜಿನಿಯರ್) ಕಳೆದ 2025ರ ಮೇ 25ರಂದು ವರ್ಗಾವಣೆಯಾಗಿದೆ ಎಂಬ ಮಾಹಿತಿ ಇದ್ದರೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೂಲತಃ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿದ್ದ ಮಂಜುನಾಥ ಹಾಗೂ ರಾಹುಲ್ ಎಂಬ ಅಭಿಯಂತರರು ಮೂಲ ಇಲಾಖೆಗೆ ಮರಳದಿರುವುದರಿಂದ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ. ಮುಖ್ಯವಾಗಿ ಈ ಇಲಾಖೆಯಲ್ಲಿ ಇಡೀ ಉಪವಿಭಾಗದಲ್ಲೇ ಇಬ್ಬರೇ ಇಂಜಿನಿಯರ್ ಗಳಿದ್ದು, ಆದರೂ ಇವರಿಗೆ ಎರಡೆರಡು ಇಲಾಖೆಗಳ ಜವಾಬ್ದಾರಿ ನೀಡಿರುವ ಕಾರಣ ಕುಡಿಯುವ ನೀರಿನ ವಿಚಾರದಲ್ಲಿ ಉಲ್ಬಣಗೊಳ್ಳುವ ಸಮಸ್ಯೆಗಳು ಹಾಗೂ ಕಾಮಗಾರಿಗಳ ಮೇಲ್ವಿಚಾರಣೆ, ಗುಣಮಟ್ಟ ನಿಯಂತ್ರಣ, ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗದಿರುವುದು ಸೇರಿದಂತೆ ಸಾಕಷ್ಟು ಸಮಸ್ಯೆಗಳು ಎದುರಾಗಿವೆ.
ಬಹು ಮುಖ್ಯವಾಗಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯ ಕಾರಣ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇಂತಹ ಕಠಿಣ ಸಮಯದಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ ಈ ಅಧಿಕಾರಿಗಳು ಹೆಚ್ಚಿನ ಆಸಕ್ತಿ ಹಾಗೂ ಮುತುವರ್ಜಿ ವಹಿಸಬೇಕಾಗಿದೆ.
ವಾಸ್ತವವಾಗಿ ಸಾರ್ವಜನಿಕರು ಈ ಸಮಸ್ಯೆ ಬಗ್ಗೆ ದೂರು ನೀಡಿದಾಗ ಎರಡೆರಡು ಇಲಾಖೆಗಳ ಕೆಲಸ ಮಾಡಬೇಕು, ತುಂಬಾ ಒತ್ತಡವಿದೆ. ಅವುಗಳ ಕಡೆಗೆ ಸಮಯ ಹೇಗೆ ನೀಡೋದು ಎಂಬ ರೆಡಿಮೇಡ್ ಉತ್ತರಗಳಷ್ಪೇ ಹೊರಬರುತ್ತಿವೆ.
ಮೂಲ ಸೌಕರ್ಯಗಳಲ್ಲಿ ಒಂದಾಗಿರುವ ಕುಡಿಯುವ ನೀರಿನ ವಿಚಾರದಲ್ಲಿನ ತೊಂದರೆ ಅಡೆತಡೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರೂಗಳೂ ಸಹ ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ.
ಜನರ ಹಿತಾಸಕ್ತಿಯ ವಿರುದ್ಧದ ನಡೆಗೆ ಹೆಚ್ಚಾದ ಆಕ್ರೋಶ..!
ಜನರ ಜೀವನಾಡಿಯಾದ ಕುಡಿಯುವ ನೀರನ್ನು ಪೊರೈಸುವ ನಿಟ್ಟಿನಲ್ಲಿ ಅಥಣಿ ಉಪವಿಭಾಗದಲ್ಲಿ ಕೋಟ್ಯಂತರ ರೂಪಾಯಿ ಕಾಮಗಾರಿಗಳೂ ಚಾಲ್ತಿಯಲ್ಲಿವೆ. ಇಷ್ಟೆಲ್ಲ ಇದ್ದರೂ ಅಭಿಯಂತರ ಅಧಿಕಾರಿಗಳು ಬೇರೆ ಕೆಲಸಗಳಲ್ಲಿ ತೊಡಗಿರುವುದು ಸಾರ್ವಜನಿಕ ಹಿತಾಸಕ್ತಿಯ ವಿರುದ್ಧದ ಸಂಗತಿ ಎಂಬ ಆಕ್ರೋಶ ವ್ಯಕ್ತವಾಗಿದೆ. ಒಂದು ವರ್ಷವಾದರೂ ಅವರು ಅಲ್ಲಿಯೇ ಉಳಿಯಲು ಯಾವ ಪ್ರಭಾವಿಗಳ ಕೈವಾಡವಿದೆ ಎಂಬುವುದು ಕೂಡ ಸದ್ಯದ ಪ್ರಶ್ನೆಯಾಗಿದೆ.
ಈಗಾಗಲೇ ತಾಲೂಕಿನ ಹಲವಾರು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಶುದ್ಧ ಕುಡಿಯುವ ನೀರು ಘಟಕಗಳು ಕೆಟ್ಟು ನಿಂತಿದ್ದು, ಕೆಲವು ಸಂಪೂರ್ಣ ಸ್ಥಗಿತಗೊಂಡಿದ್ದು, ಇನ್ನೂ ಕೆಲವು ದುರಸ್ತಿಗಾಗಿ ದಾರಿ ಕಾಯುತ್ತಿವೆ. ಪರಿಸ್ಥಿತಿ ಹೀಗಿರುವಾಗ ಸಾರ್ವಜನಿಕರು, ಹಳ್ಳಿಗಳ ಜನರು ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಜಿಡ್ಡು ಹಿಡಿದ ಈ ವ್ಯವಸ್ಥೆಯಲ್ಲಿ ಯಾವುದೂ ಬದಲಾವಣೆಯಾಗದಿರುವುದು ವಾಸ್ತವತೆಯ ಕನ್ನಡಿಯಾಗಿದೆ.
ಅಧಿಕಾರಿಗಳು ಒಂದೇ ಸ್ಥಳದಲ್ಲಿ ಹಲವು ವರ್ಷ ಬಿಡಾರ ಹೂಡಲು ಯಾರು ಕಾರಣ..?
ತಾಲೂಕಿನಲ್ಲಿ ಬಹುತೇಕ ಇಲಾಖೆ ಅಧಿಕಾರಿಗಳು ವರ್ಗಾವಣೆಯಾಗದೆ ಆಯಕಟ್ಟಿನ ಜಾಗದಲ್ಲಿ ಉಳಿದುಕೊಂಡಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಬೇಕಾದರೆ, ಸರ್ಕಾರದ ಮೇಲೆ ಜನರ ನಂಬಿಕೆ ಹೆಚ್ಚಬೇಕಾದರೆ ಕಾಲಕಾಲಕ್ಕೆ ಅಧಿಕಾರಿಗಳ ವರ್ಗಾವಣೆಯಾಗಿ ವ್ಯವಸ್ಥೆ ಸ್ವಚ್ಚ ವಾಗಬೇಕು. ಆದರೆ ಇಲ್ಲಿ ಅದ್ಯಾವುದಕ್ಕೂ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ ಎಂಬುವುದಕ್ಕೆ ಇದೇ ಸಾಕ್ಷಿ.
ಅಥಣಿಯ ಕೆಲ ಅಧಿಕಾರಿಗಳು ಅನೇಕ ವರ್ಷಗಳಿಂದ ಒಂದೇ ಕಡೆ ಬೇರೂರಿದ್ದು, ಹೇಳೋರು ಕೇಳೋರು ಯಾರೂ ಇಲ್ಲ. ತಮಗೆ ತಾವೇ ಬೇಕಾದಂತೆ ನಿಯಮಗಳನ್ನು ರೂಪಿಸಿ ಜನರ ಸಂಕಷ್ಟಗಳನ್ನು ಬದಿಗೊತ್ತಿ ಸರ್ಕಾರದ ಆದೇಶಕ್ಕೂ ಬೆಲೆ ನೀಡದ ದುರಂತ ಸ್ಥಿತಿ ನಿರ್ಮಾಣವಾಗಿದೆ ಎಂಬ ಬೇಸರದ ಮಾತುಗಳು ಕೇಳಿ ಬರುತ್ತಿವೆ.
ಈ ಅಧಿಕಾರಿಗಳ ವರ್ಗಾವಣೆಯಾದರೂ ಸಹ ಅಲ್ಲೇ ಕಾರ್ಯ ನಿರ್ವಹಿಸಲು ಯಾರು ಪ್ರೇರಣೆ? ಇನ್ಯಾರು ಕಾರಣ ಎನ್ನುವುದನ್ನು ಪತ್ತೆ ಹಚ್ಚಿ ತಮಗೆ ತಾವೇ ರೂಲ್ಸ್ ಮಾಡಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುವುದು ತಾಲೂಕಿನ ಜನರ ಒತ್ತಾಯವಾಗಿದೆ. ಇನ್ನೂ ಈ ಅಧಿಕಾರಿಗಳು ಈ ಕೂಡಲೇ ಮೂಲ ಇಲಾಖೆಗೆ ಮರಳಿ, ಜನರ ಕುಡಿಯುವ ನೀರಿನ ಸಮಸ್ಯೆಗಳ ಬಗೆಹರಿಸಲು ಮುಂದಾಗುವಂತೆ ನೋಡಿಕೊಳ್ಳಬೇಕಿದೆ.
ಇನ್ನಾದರೂ ಜನರ ಸಂಕಷ್ಟ ಹಾಗೂ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ನೂತನ ಸಚಿವ ಈಶ್ವರ್ ಖಂಡ್ರೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಸಹ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಂಡು ಜನರಿಗೆ ಕುಡಿಯುವ ನೀರಿನ ವಿಚಾರದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಬೇಕಿದೆ.



