ಪುಣ್ಯ ಸಂಪಾದನೆಗೆ ಕಾಯಕ ದಾಸೋಹ ಮಾಡಿರಿ
ಅಥಣಿ : ನಿಷ್ಠಾವಂತ ಕಾಯಕದ ಮೂಲಕ ಸಂಪತ್ತು ಸಂಪಾದಿಸಿರಿ, ನಿಸ್ವಾರ್ಥ ದಾಸೋಹದ ಮೂಲಕ ಸಮಾಜಕ್ಕೆ ಅರ್ಪಣೆ ಮಾಡಿರಿ. ಕಾಯಕ ಹಾಗೂ ದಾಸೋಹ ನಮ್ಮನ್ನು ಪುಣ್ಯದ ಮಾರ್ಗದ ಕಡೆಗೆ ತೆಗೆದುಕೊಂಡು ಹೋಗುವ ಸಾಧನಗಳಾಗಿವೆ ಎಂದು ಜನವಾಡ ಅಲ್ಲಮಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪಟ್ಟಣದ ಸಾಯಿ ನಗರದ ಬಸವ ಉದ್ಯಾನ ವನದಲ್ಲಿ ಬಸವ ಜಯಂತಿ ಅಂಗವಾಗಿ ಜರಗುತ್ತಿರುವ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಾ ಪಾಪಿಯ ಧನ ಪ್ರಾಯಶ್ಚಿತ್ತಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯ ಎಂಬ ಶರಣರ ವಾಣಿ ಅರ್ಥ ಪೂರ್ಣವಾಗಿದೆ. ಪ್ರಾಮಾಣಿಕತೆಯಿಂದ ಬಂದ ಸಂಪತ್ತಿನಲ್ಲಿಯೇ ಪರೋಪಕಾರ ಮಾಡಬೇಕು. ಸತ್ಕಾರ್ಯಗಳಿಗೆ ದಾನ ಮಾಡುವ ಗುಣ ಪ್ರತಿಯೊಬ್ಬರಲ್ಲಿ ಬೆಳೆಯಬೇಕು. ನಿಸ್ವಾರ್ಥದಿಂದ ಸೇವೆ ಮಾಡಿದರೆ ಮುಂದೊಂದು ದಿನ ಗುರು ಹಿರಿಯರ ಅನುಗ್ರಹಕ್ಕೆ ಪಾತ್ರರಾಗಲು ಸಾಧ್ಯವಿದೆ. ಬಸವ ತತ್ವಪಾಲನೆ ಮಾಡುವವರು ನಿರಂತರ ಕಾಯಕ ದಾಸೋಹ ಜೀವಿಗಳಾಗಿ ಬಾಳಿ ಬದುಕಬೇಕೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅಭಿಯಂತರ ರಾಜಶೇಖರ ಟೋಪಿಗಿ, ನ್ಯಾಯವಾದಿ ಶಂಕರ ಮಟ್ಟೆಪ್ಪನವರ, ಬಸಪ್ಪ ಬಳವಾಡ, ಅಶೋಕ ಡಾಬಳ್ಳಿ, ಲಾಯಪ್ಪ ಮಾಳಶೆಟ್ಟಿ, ಮಚೇಂದ್ರ ಭೋಸಲೆ, ಸಿದರಾಯ ಪುಟಾಣಿ, ರಾಜು ಬಿಸುಗುಪ್ಪಿ, ಡಾ. ಸುರೇಶ ಬಂಡಗಾರ, ಯೋಗ ಶಿಕ್ಷಕ ಶ್ರೀಶೈಲ ಪಾಟೀಲ, ಡಾ. ಸುರೇಶ ಮೈಗೂರ, ಭರತ ಕಾಂಬಳೆ, ಬಸಗೊಂಡ ಕಾರಜಣಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೆಂಪಟ್ಟಿ ಹಾಗೂ ದೇಸಾಯಿ ಸಂಗೀತ ಬಳಗ ವಚನ ಪ್ರಾರ್ಥನೆ ಮಾಡಿದರು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ದಾಸೋಹ ಸೇವೆ ಸಲ್ಲಿಸಿದ ವಿವಿಧ ದಾನಿಗಳನ್ನು ಗೌರವಿಸಿ ಸತ್ಕರಿಸಲಾಯಿತು.
ಅಥಣಿ ಪಟ್ಟಣದ ಸಾಯಿ ನಗರದಲ್ಲಿ ಜರುಗಿದ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಜನವಾಡ ಅಲ್ಲಮ ಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.


