Wednesday, July 15, 2026
22.3 C
Belagavi

ಹೆಚ್ಎಂಟಿ ಪುನಶ್ಚೇತನ ಪ್ಯಾಕೇಜ್ ತಡೆಯಲು ರಾಜ್ಯ ಕಾಂಗ್ರೆಸ್ ಸರಕಾರ ಸಂಚು

advertisement

spot_img

ಹೆಚ್ಎಂಟಿ ಪುನಶ್ಚೇತನ ಪ್ಯಾಕೇಜ್ ತಡೆಯಲು ರಾಜ್ಯ ಕಾಂಗ್ರೆಸ್ ಸರಕಾರ ಸಂಚು

ರಾಜ್ಯ ಸರಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

ಭೂಮಿ ಬಿಟ್ಟು ಕೊಡಿ ಎಂದು ನಿವೃತ್ತಿ ಅಂಚಿನಲ್ಲಿದ್ದ ಅರಣ್ಯಾಧಿಕಾರಿಯಿಂದ ಆದೇಶಕ್ಕೆ ಕಿಡಿ

ಸರಕಾರಿ ಸ್ವಾಮ್ಯದ ಉದ್ಯಮಗಳೆಂದರೆ ರಾಜ್ಯ ಸರಕಾರಕ್ಕೆ ಅಲರ್ಜಿ

ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆ ಎಂದಿದ್ದವರ ಕಾಲದಲ್ಲಿ 175 ಎಕರೆ ಹೆಚ್ಎಂಟಿ ಜಾಗ ಗುಳುಂ

175 ಎಕರೆ ನುಂಗಿದವರ ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಕೇಂದ್ರ ಸಚಿವರು

ಮೈಸೂರು 6 ಜುಲೈ 2026

ರಾಷ್ಟ್ರದಲ್ಲಿಯೇ ಪ್ರತಿಷ್ಠಿತ ಕಾರ್ಖಾನೆಯಾಗಿದ್ದ ಹೆಚ್ಎಂಟಿ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲಿಯೇ ರಾಜ್ಯ ಕಾಂಗ್ರೆಸ್ ಸರಕಾರವು ಅರಣ್ಯ ಇಲಾಖೆಯನ್ನು ಚೂ ಬಿಟ್ಟು ಅಡ್ಡಿಪಡಿಸಲು ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಅತ್ಯಂತ ಗಂಭೀರ ಆರೋಪ ಮಾಡಿದರು.

ಕೆಲ ಮಾಧ್ಯಮಗಳಲ್ಲಿ ಹೆಚ್ಎಂಟಿಗೆ ರಾಜ್ಯ ಅರಣ್ಯ ಇಲಾಖೆ ನೋಟಿಸ್ ನೀಡಿ ಭೂಮಿ ತೆರವು ಮಾಡಲು ಗಡುವು ವಿಧಿಸಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ತುರ್ತು ಮಾಧ್ಯಮಗೋಷ್ಠಿ ನಡೆಸಿದ ಕೇಂದ್ರ ಸಚಿವರು; ಈಗಾಗಲೇ ಇದಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ರಾಜ್ಯ ಸರಕಾರವು ಅರಣ್ಯ ಇಲಾಖೆಯ ಮೂಲಕ ಗಡುವು ವಿಧಿಸಿ ನೋಟಿಸ್ ನೀಡಿರುವುದು ನ್ಯಾಯಾಂಗ ನಿಂದನೆ ಹಾಗೂ ಕಾನೂನುಬಾಹಿರ ಕೂಡ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.

ಹೆಚ್ಎಂಟಿ ವಶದಲ್ಲಿರುವ 430 ಎಕರೆ ಜಮೀನು ಅರಣ್ಯ ಪ್ರದೇಶ ಆಗಿರುವುದರಿಂದ ಕೂಡಲೇ ಅಷ್ಟು ಜಾಗವನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಬೇಕು ಎಂದು ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಎನ್.ರವೀಂದ್ರ ಕುಮಾರ್ ಆದೇಶ ನೀಡಿರುವುದು ನ್ಯಾಯಾಂಗ ಕಲಾಪಗಳಿಗೆ ಅಡ್ಡಿಪಡಿಸಿದಂತೆ ಆಗುತ್ತದೆ. ಅಲ್ಲದೆ ಈ ಅಧಿಕಾರಿಗೆ ಅಂತಹ ಆದೇಶ ನೀಡುವ ಅಧಿಕಾರ ವ್ಯಾಪ್ತಿಯು ಇರುವುದಿಲ್ಲ. ಈ ಬಗ್ಗೆ ಹೆಚ್ಎಂಟಿ ನ್ಯಾಯಾಲಯದಲ್ಲಿಯೇ ಪ್ರಶ್ನೆ ಮಾಡುತ್ತದೆ ಎಂದು ಸಚಿವರು ಹೇಳಿದರು.

ಅನೇಕ ವರ್ಷಗಳಿಂದ ನಷ್ಟದ ಸುಳಿಗೆ ಸಿಲುಕಿ ನೆನೆಗುದಿಗೆ ಬಿದ್ದಿದ್ದ ಹೆಚ್‌ಎಂಟಿ ಕಾರ್ಖಾನೆಗೆ ಮರುಜೀವ ನೀಡುವ ಉದ್ದೇಶದಿಂದ ನಾನು ಪ್ರಧಾನ ಮಂತ್ರಿಗಳು ಮತ್ತು ಕೇಂದ್ರದ ಹಣಕಾಸು ಸಚಿವರನ್ನು ಒಪ್ಪಿಸಿ ವಿಶೇಷ ಪ್ಯಾಕೇಜ್ ತರುವ ಬಗ್ಗೆ ಪ್ರಯತ್ನ ಮಾಡುತ್ತಿದ್ದೆ. ಈ ಕಾರ್ಖಾನೆಯು ನಾನು ಸಚಿವನಾಗಿರುವ ಬೃಹತ್ ಕೈಗಾರಿಕೆ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಪ್ಯಾಕೇಜ್ ಘೋಷಣೆ ಹತ್ತಿರದಲ್ಲಿ ಇರುವಾಗಲೇ ರಾಜ್ಯ ಸರಕಾರ ದುರುದ್ದೇಶದಿಂದ ಇಂತಹ ನೋಟಿಸ್ ಕೊಡಿಸಿದೆ ಎಂದು ಸಚಿವ ಕುಮಾರಸ್ವಾಮಿ ಆರೋಪ ಮಾಡಿದರು.

ಈ ಭೂಮಿಯು ಸುಮಾರು ₹15,000 ಕೋಟಿ ಬೆಲೆ ಬಾಳುತ್ತದೆ ಎಂದು ಈ ಅಧಿಕಾರಿ ಮಹಾಶಯ ಆ ಭೂಮಿಗೆ ಬೆಲೆ ಕಟ್ಟಿದ್ದಾರೆ. ಅಂದ ಮೇಲೆ ಈ ಭೂಮಿಯ ಮೇಲೆ ಯಾರದೋ ಕಾಕದೃಷ್ಟಿ ಬಿದ್ದಿರಬೇಕು ಎಂಬುದು ನನ್ನ ಅನುಮಾನ. ಈಗಾಗಲೇ ಹೆಚ್ಎಂಟಿ ಭೂಮಿಯನ್ನು ಇದೇ ಸರಕಾರದ ಕೃಪೆಯಿಂದ ಅನೇಕರು ಕೊಳ್ಳೆ ಹೊಡೆದಿದ್ದಾರೆ. 175 ಎಕರೆ ಭೂಮಿಯು ಯಾವಾಗ ಮಾರಾಟವಾಯಿತು, ಎಲ್ಲಿ ನೋಂದಣಿ ಆಯಿತು ಎನ್ನುವ ಎಲ್ಲಾ ದಾಖಲೆಗಳು ನನ್ನಲ್ಲಿವೆ. ಆ ಜಾಗದಲ್ಲಿ ಯಾರು ಯಾರು ಮನೆ ಕಟ್ಟಿಕೊಂಡಿದ್ದಾರೆ, ಲೂಟಿ ಹೊಡೆದ ಭೂಮಿಯಲ್ಲಿ ಬಹುಮಹಡಿ ಕಟ್ಟಡಗಳು ಎದ್ದು ನಿಂತಿವೆ. ದೊಡ್ಡದೊಡ್ಡ ಅಪಾರ್ಟ್ಮೆಂಟ್’ಗಳು ಬಂದಿವೆ. ಆಗ ಅರಣ್ಯ ಇಲಾಖೆ ನೋಟಿಸ್ ನೀಡಿತ್ತಾ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

2006ರಲ್ಲಿ ನಾನು ಮುಖ್ಯಮಂತ್ರಿ ಆಗುವ ತನಕ ಹೆಚ್ಎಂಟಿ ಭೂಮಿಯ ಲೂಟಿ ನಡೆಯುತ್ತಲೇ ಇತ್ತು. ಯಾವುದೇ ಕಾರಣಕ್ಕೂ ಈ ಭೂಮಿ ಭೂಗಳ್ಳರ ಪಾಲಾಗಬಾರದು ಎಂದು ಆಗಲೇ ಈ ಭೂಮಿಯ ಕ್ರಯಕ್ಕೆ ತಡೆ ಕೊಟ್ಟೆ. ಬೆಂಗಳೂರು ನಗರವನ್ನು ಸಿಂಗಾಪುರ ಮಾಡುತ್ತೇವೆ ಎಂದು ಹೊರಟವರ ಸರಕಾರದಲ್ಲಿ ಯಾವುದೇ ಎಗ್ಗಿಲ್ಲದೆ ಹೆಚ್ಎಂಟಿ ಭೂಮಿಯನ್ನು ರಣಹದ್ದುಗಳಂತೆ ಕಿತ್ತು ತಿನ್ನಲಾಯಿತು ಎಂದು ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಹೆಚ್ಎಂಟಿ ಕಾರ್ಖಾನೆಯ ವಿಶೇಷ ಪ್ಯಾಕೇಜ್ ಕುರಿತಂತೆ ಮುಂದಿನ ವಾರ ಸಭೆ ನಡೆಯಬೇಕಿತ್ತು. ಯಾವುದೇ ಸಂದರ್ಭದಲ್ಲಿ ಪ್ಯಾಕೇಜ್ ಘೋಷಣೆಯಾಗಿ ಬೆಂಗಳೂರು ನಗರಕ್ಕೆ ಕಳಸಪ್ರಾಯವಾಗಿದ್ದ ಈ ಕಾರ್ಖಾನೆಗೆ ಮರುಜೀವ ಕೊಡುವ ನಿರ್ಧಾರ ಹೊರ ಬೀಳುವುದರಲ್ಲಿ ಇತ್ತು. ಆದರೆ ಈ ಅರಣ್ಯಾಧಿಕಾರಿಗೆ ಯಾರಿಂದ ಪ್ರೇರಣೆಯಾಯಿತು ಎಂಬುದು ಗೊತ್ತಿಲ್ಲ. ನಿವೃತ್ತಿಯಾಗುವುದಕ್ಕೆ ಮೊದಲು, ಕೇವಲ 15 ದಿನಗಳ ಮುನ್ನ ಈ ಅಧಿಕಾರಿ ನೋಟಿಸ್ ನೀಡುವ ಹುಂಬತನ ಮೆರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ಇದೆ ಎಂಬ ಕನಿಷ್ಠ ಪರಿಜ್ಞಾನವೂ ಈ ಅಧಿಕಾರಿಗೆ ಬೇಡವೇ? ಅದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಆ ಅಧಿಕಾರಿ ಅನುಭವಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಈ ಅಧಿಕಾರಿ ಯಾರು? ಈತನ ಹಿನ್ನೆಲೆ ಏನು? ಈ ಮನುಷ್ಯ ಯಾವ ಯಾವ ರೀತಿ ಅರಣ್ಯ ಸಂರಕ್ಷಣೆ ಮಾಡಿದ್ದಾರೆ? ಇತರ ಗಾಡ್ ಫಾದರ್ ಯಾರು ಎಂಬ ಎಲ್ಲಾ ಮಾಹಿತಿಯು ನನ್ನಲ್ಲಿ ಇದೆ. ಆದಷ್ಟು ಬೇಗ ಇದೆಲ್ಲವನ್ನು ಹೊರಗೆ ಇಡುತ್ತೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಗುಡುಗಿದರು.

ರಾಜ್ಯ ಸರಕಾರ ಆಡಳಿತ ಮಾಡುವುದನ್ನು ಬಿಟ್ಟು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಕೊಂಡಿದೆ. ಅದಕ್ಕಾಗಿ ಹೆಚ್ಎಂಟಿ ಮೇಲೆ ಅದರ ಕೆಟ್ಟ ಕಣ್ಣು ಬಿದ್ದಂತೆ ಕಾಣುತ್ತಿದೆ. ಕಂಡ ಕಂಡ ಕಡೆ ಸರ್ಕಾರವೇ ಬೇಲಿ ಹಾಕುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಯಾವುದೇ ಕೈಗಾರಿಕೆ ಅಥವಾ ಕಾರ್ಖಾನೆ ಉಳಿಯಬಾರದು ಎನ್ನುವುದು ಈ ಸರಕಾರದ ದುರುದ್ದೇಶವಾಗಿದೆ. ಈಗಾಗಲೇ ಎನ್ಜಿಎಫ್, ಮೈಸೂರು ಪೇಪರ್ ಮಿಲ್ಸ್ ಮುಂತಾದ ಕಾರ್ಖಾನೆಗಳನ್ನು ನುಂಗಿ ನೀರು ಕುಡಿದಾಗಿದೆ. ಈ ಹೆಚ್ಎಂಟಿ ಕಾರ್ಖಾನೆಗೆ ಮರುಜೀವ ಕೊಡಬೇಕೆಂದು ನಾನು ಶತಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿಗೆ ರಾಜ್ಯ ಸರಕಾರ ಈ ಕಾರ್ಖಾನೆಯ ಭೂಮಿಗೂ ಕಣ್ಣು ಹಾಕಿದೆ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು.

ರಾಜ್ಯ ಸರಕಾರವೇ ಇಂತಹ ಕೆಟ್ಟ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದರೆ ಕೈಗಾರಿಕೆಗಳು ಎಲ್ಲಿಂದ ಬರುತ್ತವೆ? ಕೇಂದ್ರ ಸರ್ಕಾರ ರಾಜ್ಯಕ್ಕೆ ಏನೂ ಕೊಡಲಿಲ್ಲ ಎಂದು ಪದೇಪದೇ ಹೇಳುವ ಇವರಿಗೆ ನಾವು ಕೊಡುತ್ತೇವೆ ಎಂದರು ತೆಗೆದುಕೊಳ್ಳುವ ಮನಸ್ಸಿಲ್ಲ ಎಂದ ಅವರು; ಕರ್ನಾಟಕ ಸರಕಾರದ ಈ ಕ್ರಮದಿಂದ ಹೆಚ್ಎಂಟಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಆತಂಕ ಪಡಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಾರ್ಖಾನೆಗೆ ಮರುಜೀವ ಕೊಡುವ ಕೆಲಸ ಮಾಡಿಯೇ ಮಾಡುತ್ತೇವೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾನೂನು ಬಹಿರ ಆದೇಶ ನೀಡುವ ಮೂಲಕ ಅರಣ್ಯ ಇಲಾಖೆ ಹೆಚ್ಎಂಟಿ ಜಾಗದಲ್ಲಿ ಅತಿಕ್ರಮಣ ಮಾಡಲು ಹೊರಟಿದೆ ಎಂದು ಕುಮಾರಸ್ವಾಮಿ ಅವರು ಗುಡುಗಿದರು.

ಕೇಂದ್ರದಲ್ಲಿ ನಾನು ಬೃಹತ್ ಕೈಗಾರಿಕೆ ಸಚಿವನಾದ ಕ್ಷಣದಿಂದಲೇ ರಾಜ್ಯ ಕಾಂಗ್ರೆಸ್ ಸರಕಾರ ಅಡ್ಡಿಪಡಿಸುವುದು ಶುರು ಮಾಡಿತು. ಉಕ್ಕು ಸಚಿವನಾಗಿ ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಗೆ ಶಕ್ತಿ ತುಂಬಲು ಪ್ರಯತ್ನ ಮಾಡುತ್ತಿದ್ದಂತೆಯೇ ಈ ಸರಕಾರ ಕ್ಯಾತೆ ತೆಗೆಯಲು ಶುರು ಮಾಡಿತು. ಅಲ್ಲಿಯೂ ಗಣಿಗಾರಿಕೆ ಮಾಡಲು ನಾನಾ ತೊಂದರೆ ನೀಡುತ್ತಿದೆ. ರಾಜ್ಯ ಸರಕಾರವೇ ಹಣ ಪಡೆದು ಮಂಜೂರು ಮಾಡಿರುವ ಗಣಿಗಳಲ್ಲಿ ಗಣಿಗಾರಿಕೆ ನಡೆಸಲು ಇವರು ಬಿಡುತ್ತಿಲ್ಲ. ಇದರಿಂದ ಪ್ರತಿಷ್ಠಿತ ಕುದುರೆಮುಖ ಉಕ್ಕು ಕಂಪನಿ ಮುಳುಗುವ ಭೀತಿ ಎದುರಿಸುತ್ತಿದೆ ಅಲ್ಲದೆ, ಸಾವಿರಾರು ಕಾರ್ಮಿಕರು ಬೀದಿ ಪಾಲಾಗುವ ಅಪಾಯವಿದೆ. ಇಂತಹ ಪರಿಸ್ಥಿತಿ ಏನಾದರೂ ಸೃಷ್ಟಿಯಾದರೆ ಅದಕ್ಕೆ ರಾಜ್ಯ ಸರಕಾರವೇ ನೇರ ಹೊಣೆ ಆಗುತ್ತದೆ ಎಂದು ಸಚಿವ ಕುಮಾರಸ್ವಾಮಿ ಅವರು ದೂರಿದರು.

ಭಾರತದ ಪ್ರಮುಖ ಉದ್ಯಮವಾಗಿದ್ದ ಎಚ್ಎಂಟಿಯು ಬೆಂಗಳೂರ್ ನಗರವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಕೇರಳದ ಕಾಲಮಸ್ಸೆರಿ, ತೆಲಂಗಾಣದ ಹೈದರಾಬಾದ್, ಹರಿಯಾಣದ ಪಿಂಜೋರಾ ಸೇರಿದಂತೆ ಅನೇಕ ಭಾಗಗಳಲ್ಲಿ ಕಾರ್ಖಾನೆಗಳನ್ನು ಹೊಂದಿದೆ. ಒಂದು ಕಾಲದಲ್ಲಿ ಇಡೀ ದೇಶದಲ್ಲೇ ಪ್ರತಿಷ್ಠಿತ ಮತ್ತು ಲಾಭದಾಯಕ ಉದ್ಯಮವಾಗಿ ನಡೆದ ಹೆಚ್ಎಂಟಿ ಈಗ ಕಷ್ಟದ ಪರಿಸ್ಥಿತಿಯಲ್ಲಿದೆ. ಹಾಗಿದ್ದರೂ ಬಾಹ್ಯಾಕಾಶ, ರಕ್ಷಣೆ, ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಯಂತ್ರಗಳನ್ನು ತಯಾರಿಸಿ ಕೊಡುತ್ತಿದೆ. ಈಗಲೂ ವಿದೇಶಗಳಲ್ಲಿ ಹೆಚ್ಎಂಟಿ ಯಂತ್ರಗಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಹೆಚ್ಎಂಟಿ ವಾಚ್ ಗಳಿಗೆ ಈಗಲೂ ವಿಪರೀತ ಡಿಮಾಂಡ್ ಇದೆ. ಇಂತಹ ಕೈಗಾರಿಕೆಗಳನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುವುದು ಬಿಟ್ಟು ಅವುಗಳ ಅವಸಾನಕ್ಕೆ ರಾಜ್ಯ ಸರಕಾರ ಯತ್ನಿಸುತ್ತಿರುವ ಸರಿಯಲ್ಲ. ಈ ಮಾತನ್ನು ಅತ್ಯಂತ ನೋವಿನಿಂದ ಹೇಳುತ್ತಿದ್ದೇನೆ ಎಂದು ಕೇಂದ್ರ ಸಚಿವರು ಹೇಳಿದರು.

ಬೇರೆ ರಾಜ್ಯಗಳಲ್ಲಿ ಕಾರ್ಖಾನೆ ಕೊಡಿ ಕೊಡಿ ಎಂದು ದುಂಬಾಲು ಬೀಳುತ್ತಾರೆ. ನೆರೆಯ ಆಂಧ್ರ ಪ್ರದೇಶವನ್ನು ನೋಡಿ ನಾವು ಕಲಿಯುವುದು ಬಹಳಷ್ಟಿದೆ. ಅಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಏನೇ ಇದ್ದರೂ ರಾಜ್ಯದ ಅಭಿವೃದ್ಧಿಯೆಂದರೆ ಎಲ್ಲರೂ ಒಂದಾಗುತ್ತಾರೆ. ವಿಶಾಖಪಟ್ಟಣದ ಉಕ್ಕು ಕಾರ್ಖಾನೆಗೆ ವಿಶೇಷ ಪ್ಯಾಕೇಜ್ ನೀಡಿದ ಕಥೆಯನ್ನು ಇವರು ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿ ಆ ರಾಜ್ಯದ ಮುಖ್ಯಮಂತ್ರಿಗಳು ಎಷ್ಟು ಶ್ರಮಪಟ್ಟರು ಎಂಬುದನ್ನು ನಾನು ಬಲ್ಲೆ. ವಿಶೇಷ ಪ್ಯಾಕೇಜ್ ಘೋಷಿಸಿ ವಿಶಾಖಪಟ್ಟಣಕ್ಕೆ ಹೋದಾಗ ಅಲ್ಲಿನ ಜನರು ನನಗೆ ಹಾಲಿನ ಅಭಿಷೇಕ ಮಾಡಿದರು. ಇವರು ಅಭಿಷೇಕ ಮಾಡುವ ಅಗತ್ಯವಿಲ್ಲ. ನನಗೆ ಕೆಲಸ ಮಾಡಲು ಬಿಟ್ಟರೆ ಸಾಕು ಎಂದು ಕುಮಾರಸ್ವಾಮಿ ಅವರು ಹೇಳಿದರು.

ತೆಲಂಗಾಣದಲ್ಲಿ ಇವರದೇ ಪಕ್ಷದ ಮುಖ್ಯಮಂತ್ರಿಗಳು ಇದ್ದಾರೆ. ಹಲವಾರು ಸಲ ನನ್ನನ್ನು ಭೇಟಿಯಾಗಿದ್ದಾರೆ. ಹೆಚ್ಚು ಎಲೆಕ್ಟ್ರಿಕ್ ಬಸ್ಸುಗಳು ಬೇಕೆಂದು ಅವರು ಮನವಿ ಮಾಡಿದ್ದಾರೆ. ಅಲ್ಲದೆ ಆಂಧ್ರ ಪ್ರದೇಶಕ್ಕೆ ಮಂಜೂರು ಮಾಡಿದಂತೆ ಬೃಹತ್ ಉಕ್ಕುಸ್ತಾವರವನ್ನು ನಮಗೂ ಕೊಡಿ ಎಂದು ಕೇಳಿದ್ದಾರೆ. ಇವರಿಗೆ ಗೊತ್ತಿರಲಿ, ಆಂಧ್ರಪ್ರದೇಶದ ಅನಕಾಪಲ್ಲಿಯಲ್ಲಿ ಆರ್ಸೆಲರ್ ಮಿತ್ತಲ್ ಮತ್ತು ನಿಫಾನ್ ಸ್ಟಿಲ್ ಸಂಯೋಗದಲ್ಲಿ ಅತಿ ದೊಡ್ಡ ಗ್ರೀನ್ ಸ್ಟೀಲ್ ಸಾವಿರ ಬಂದಿದೆ. ಆ ಕಾರ್ಖಾನೆಗೆ ಶಂಕುಸ್ಥಾಪನೆ ಮಾಡಲು ನಾನೆ ಬರಬೇಕೆಂದು ಆ ರಾಜ್ಯದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಒತ್ತಾಯ ಮಾಡಿದರು. ಕೇಂದ್ರದಿಂದ ಕೆಲಸ ಮಾಡಿಸಿಕೊಳ್ಳುವ ರೀತಿ ಎಂದರೆ ಅದು. ಅವರಿಂದ ಈ ರಾಜ್ಯದ ಮುಖ್ಯಮಂತ್ರಿ ಮತ್ತು ಅಧಿಕಾರಿಗಳು ಕಲಿಯುವುದು ಸಾಕಷ್ಟಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

ಬೆಂಗಳೂರು ಅಭಿವೃದ್ಧಿ ಸಚಿವರು ಗಿಡ ನೆಡುವುದರಲ್ಲಿ ದುಡ್ಡು ಹೊಡೆಯುತ್ತಿರುವ ಬಗ್ಗೆ ಮಾತನಾಡಿದ್ದರು. ಮೊನ್ನೆ ಮೊನ್ನೆ ಮುಖ್ಯಮಂತ್ರಿಗಳು ದೊಡ್ಡ ಶೋ ಮಾಡಿ 15 ಲಕ್ಷ ಗಿಡಗಳನ್ನು ನೆಟ್ಟಿರುವದಾಗಿ ಭಾರಿ ಪ್ರಚಾರ ಗಿಟ್ಟಿಸಿದರು. ಅಲ್ಲಿ ಹೋಗಿ ನೋಡಿ ಆ ಗಿಡಗಳನ್ನು ಹೇಗೆ ನೆಟ್ಟಿದ್ದಾರೆ ಅಂತ. ಭತ್ತದ ಪೈರು ನೆಟ್ಟ ಹಾಗೆ ಗಿಡಗಳನ್ನು ನೆಟ್ಟಿದ್ದಾರೆ. ಇವರು ಅರಣ್ಯ ಸಂರಕ್ಷಣೆ ಮಾಡುವ ಆಸಾಮಿಗಳು ಎಂದು ಸಚಿವ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡರು

ಲೋಕಸಭೆ ಸದಸ್ಯ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಹಿರಿಯ ಮುಖಂಡ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

Hot this week

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಸಿಎಂ ಡಿ ಕೆ ಶಿವಕುಮಾರ್ ಮನವಿ

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ...

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ...

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ...

Topics

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ...

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ...

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ...

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ ಸಂಧಾನ

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ...

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ...
spot_img

Related Articles

Popular Categories

spot_img