ಇಷ್ಟಲಿಂಗ ಪೂಜೆಯಿಂದ ಏಕಾಗ್ರತೆ ಸಾಧ್ಯ
ಅಥಣಿ ಚಂಚಲವಾದ ಮನಸ್ಸನ್ನು ಇಷ್ಟಲಿಂಗ ಪೂಜೆಯ ಮೂಲಕ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಇಷ್ಟಲಿಂಗ ಪೂಜೆ ಮಾಡಿಕೊಳ್ಳುವುದರಿಂದ ಏಕಾಗ್ರತೆ ಪ್ರಾಪ್ತಿಯಾಗುತ್ತದೆ. ಬಸವಾದಿ ಶರಣರು ಅರಿವೇ ಗುರು ಎಂದು ಹೇಳಿದ್ದಾರೆಂದು ಸವದಿ- ಇಳಕಲ್ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಸಾಯಿ ನಗರದಲ್ಲಿ ಬಸವ ಉದ್ಯಾನವನದಲ್ಲಿ ಜರುಗಿದ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಾ ಮನುಷ್ಯ ಎಷ್ಟೇ ಉನ್ನತ ಪದವಿ ಹೊಂದಿದರು ಅರಿವು ಎಂಬುದು ಇರಬೇಕು. ಎಲ್ಲ ಸಂಪತ್ತುಗಳಲ್ಲಿ ಆರೋಗ್ಯವೇ ಶ್ರೇಷ್ಠವಾದದ್ದು. ಆರೋಗ್ಯ ಹಾಗೂ ಆರ್ಥಿಕ ಹಿತದೃಷ್ಟಿಯಿಂದ ದುಶ್ಚಟಗಳಿಗೆ ಬಲಿಯಾಗಬೇಡಿ ಎಂದು ಅವರು ಹೇಳಿದ್ದಾರೆ.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಜನವಾಡ ಅಲ್ಲಮಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ಇಂದಿನ ಒತ್ತಡ ಜೀವನದಲ್ಲಿ ಮನಸ್ಸನ್ನು ಹಗುರವಾಗಿಟ್ಟುಕೊಳ್ಳಬೇಕು. ಒಳ್ಳೆಯದಕ್ಕೂ ಕೆಟ್ಟದಕ್ಕೂ ಮನಸ್ಸೇ ಮುಖ್ಯ ಕಾರಣವಾಗುತ್ತದೆ. ಮನಸ್ಸು ಗೆದ್ದವರು ಎಲ್ಲವನ್ನೂ ಗೆದ್ದಂತೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅಭಿಯಂತರ ರಾಜಶೇಖರ ಟೋಪಿಗಿ, ಬಸಪ್ಪ ಬಳವಾಡ, ಶಂಕರ ಮಟ್ಟೆಪ್ಪನವರ, ಸಂಗಣ್ಣ ಗೂಗವಾಡ, ಅಶೋಕ ಡಾಬಳ್ಳಿ, ಲಾಯಪ್ಪ ಮಾಳಶೆಟ್ಟಿ, ಮಚೇಂದ್ರ ಭೋಸಲೆ, ಸಿದರಾಯ ಪುಟಾಣಿ, ರಾಜು ಬಿಸುಗುಪ್ಪಿ, ಡಾ. ಸುರೇಶ ಬಂಡಗಾರ, ಡಾ. ಸುರೇಶ ಮೈಗೂರ, ಬಸಗೊಂಡ ಕಾರಜಣಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೆಂಪಟ್ಟಿ ಹಾಗೂ ದೇಸಾಯಿ ಸಂಗೀತ ಬಳಗ ವಚನ ಪ್ರಾರ್ಥನೆ ಮಾಡಿದರು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು



