ಸಚಿವ ಸ್ಥಾನಕ್ಕೆ ಶಾಸಕರು ದೆಹಲಿ ದಂಡಯಾತ್ರೆ ವಿಚಾರ ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯೆ, ಪರೋಕ್ಷವಾಗಿ ಸಚಿವ ಸ್ಥಾನ ಆಸೆ ವ್ಯಕ್ತಪಡಿಸಿದ ಶಾಸಕ ಲಕ್ಷ್ಮಣ ಸವದಿ.
ಚಿಕ್ಕೋಡಿ: ಬಹಳಷ್ಟು ಶಾಸಕರು ದೆಹಲಿಗೆ ಹೋಗುತ್ತಿರುವುದು ನನಗೂ ಗೊತ್ತಿದೆ. ಸರ್ಕಾರಕ್ಕೆ ಎರಡೂವರೆ ವರ್ಷ ಆದಮೇಲೆ ಬೇರೆಯವರಿಗೂ ಸಚಿವ ಸ್ಥಾನದ ಅವಕಾಶ ಕೊಡುತ್ತೇವೆ ಎಂದು ಹೈಕಮಾಂಡ್, ಮುಖ್ಯಮಂತ್ರಿಗಳು ಹಾಗೂ ಪಕ್ಷದ ಅಧ್ಯಕ್ಷರು ಹೇಳಿದ್ದರು. ಈಗ ಎರಡೂವರೆ ವರ್ಷ ಆಗಿರುವುದರಿಂದ ಸಂಪುಟ ಪುನರಚನೆ ಮಾಡಬೇಕು ಎಂದು ಶಾಸಕರು ದೆಹಲಿಗೆ ಹೋಗಿ ವರಿಷ್ಠರ ಬಳಿ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಶಾಸಕರು ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮ ಜೊತೆ ಮಾತನಾಡುತ್ತಾ ಅವರು ಇದು ಸಿಎಂ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೂ ಗೊತ್ತಿದೆ ಹಾಗೂ ಅವರ ಒಪ್ಪಿಗೆ ಪಡೆದೇ ಶಾಸಕರು ದೆಹಲಿಗೆ ಹೋಗಿದ್ದಾರೆ ಎಂದರು.
ಸಚಿವ ಸ್ಥಾನದ ರೇಸ್ನಲ್ಲಿ ನಿಮ್ಮ ಹೆಸರೂ ಇದೆ. ಈ ಹಿಂದೆ ಜನವರಿಯಿಂದ ನಮಗೆ ಶುಕ್ರದೆಸೆ ಆರಂಭವಾಗುತ್ತದೆ ಎಂದಿದ್ದಿರಿ, ಆದರೆ ಏಪ್ರಿಲ್ ಬಂದರೂ ಅದು ಆಗಿಲ್ಲವೇ?’ ಎಂದು ಮಾಧ್ಯಮ ಪ್ರಶ್ನೆ ಮಾಡಿದಾಗ ಪ್ರತಿಕ್ರಿಯೆ ನೀಡಿ ಮಾತನಾಡಿ ನಾನು ಮಂತ್ರಿಯಾಗುತ್ತೇನೆ ಎಂದು ಎಲ್ಲಿಯೂ ಹೇಳಿರಲಿಲ್ಲ, ಒಟ್ಟಾರೆ ಶುಕ್ರದೆಸೆ ಬರುತ್ತದೆ ಎಂದಿದ್ದೆ. ಮಂತ್ರಿಯಾಗುತ್ತೇನೆ ಎಂದು ನೀವೇ ಭಾವಿಸಿಕೊಂಡರೆ ಹೇಗೆ? ಉದಾಹರಣೆಗೆ, ವಿಶ್ವಮಟ್ಟದಲ್ಲಿ ಯುದ್ಧ ಆಗಬಹುದು ಎಂದು ನಾವು ಭಾವಿಸುತ್ತೇವೆ, ಆದರೆ ಅದು ಆಗುತ್ತದೆಯೇ? ನಮ್ಮ ಅಥಣಿ ಕ್ಷೇತ್ರಕ್ಕೆ ಇಂದು ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗುತ್ತಿವೆಯಲ್ಲ, ಅದೇ ದೊಡ್ಡ ಶುಕ್ರದೆಸೆ ಎಂದರು.
ನಮ್ಮ ಅಥಣಿ ಕ್ಷೇತ್ರಕ್ಕೆ ನೀರಾವರಿ, ಕುಡಿಯುವ ನೀರು, 24×7 ನೀರು ಪೂರೈಕೆ, ಜಿಲ್ಲಾ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆ ರಸ್ತೆಗಳು, ಕೆರೆ ತುಂಬಿಸುವ ಯೋಜನೆಗಳು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿವೆ. ಕಳೆದ ಬಜೆಟ್ನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಅಥಣಿಗೆ 508 ಕೋಟಿ ರೂ. ವೆಚ್ಚದ ಕೃಷಿ ಕಾಲೇಜು ಮಂಜೂರು ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದು, ಅದನ್ನು ಜನರಿಗೆ ತಲುಪಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇದುವೇ ಒಂದು ರೀತಿಯ ಶುಕ್ರದೆಸೆ ಎಂದರು.
ಮಂತ್ರಿಗಿರಿ ಸಿಗುವ ವಿಚಾರದಲ್ಲಿ, ‘ಒಂದನ್ನು ಪಡೆಯಲು ಮತ್ತೊಂದನ್ನು ಬಿಡಬೇಕಾ?’ ಎಂಬ ಶಾಸಕ ಲಕ್ಷ್ಮಣ ಸವದಿ ಅವರಿಗೆ ಮಾಧ್ಯಮ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿ
“ಬಾರದು ಬಪ್ಪದು, ಬಪ್ಪದು ತಪ್ಪದು. ಹಣೆಬರಹದಲ್ಲಿ ಏನಿರುತ್ತದೆಯೋ ಅದು ಆಗುತ್ತದೆ. ಬರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ, ಹಾಗೆಯೇ ನಮ್ಮ ಕೈತಪ್ಪಿ ಹೋಗುವುದನ್ನು ಎಷ್ಟೇ ಜಗ್ಗಾಡಿದರೂ ಹಿಡಿದಿಡಲು ಸಾಧ್ಯವಿಲ್ಲ. ಮಹಾಭಾರತದಲ್ಲಿ ಶ್ರೀಕೃಷ್ಣ ಒಂದು ಮಾತು ಹೇಳಿದ್ದಾನೆ, ‘ಕರ್ಮ ಕರೋ ಲೇಕಿನ್ ಫಲ ಕಿ ಚಿಂತಾ ಮತ್ ಕರೋ’ (ನಿನ್ನ ಕರ್ಮ ನೀನು ಮಾಡು, ಫಲದ ಬಗ್ಗೆ ಯೋಚಿಸಬೇಡ). ನಾವು ನಮ್ಮ ಪಾಡಿಗೆ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಹೋಗಬೇಕು, ಉಳಿದದ್ದು ಭಗವಂತನ ಇಚ್ಛೆಯಂತೆ ನಡೆಯುತ್ತದೆ ಎಂದರು.



