ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿರುವ ಗೋಮಾಳ ಜಮೀನು ಸಂರಕ್ಷಣೆ ಮಾಡಲು ತಾಲೂಕಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿ, ಭಾರತೀಯ ಕಿಸಾನ್ ಸಂಘದ ತಾಲೂಕಾ ಘಟಕದ ನೇತೃತ್ವದಲ್ಲಿ ರೈತ ಮುಖಂಡರು ತಾಲೂಕ ದಂಡಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿರುವ ಗೋಮಾಳ, ಗೈರಾಣ ಜಮೀನುಗಳನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಕೇಳಿ ಬರುತ್ತಿದೆ.
ಆದರೆ ಗೋಮಾಳ ಜಮೀನುಗಳು ಪೂರ್ವಜರ ಕಾಲದಿಂದಲೂ ಗೋವುಗಳು ಮೇಯಲು ಸಹಕಾರಿಯಾಗಿದ್ದವು ಸರಕಾರಿ, ಗೋಮಾಳ, ಗೈರಾಣ ಭೂಮಿಯನ್ನು ಇತರ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುವುದರಿಂದ ಜಾನುವಾರುಗಳು ಮೇಯಲು ಭೂಮಿ ಇಲ್ಲದಂತಾಗಿ ಅವುಗಳ ಸಂಖ್ಯೆ ದಿನೇ ದಿನೇ ಕುಸಿಯುತ್ತಲೇ ಇದೆ. ಸಾವಯವ ಕೃಷಿಗೆ ಗೋವು, ಜಾನುವಾರುಗಳು ಅಗತ್ಯವಿದ್ದು, ಗೋಮಾಳ ಜಮೀನಿನಲ್ಲಿ ಮಳೆಗಾಲದಲ್ಲಿ ಬೆಳೆದ ಮೇವುಗಳನ್ನು ಗೋವುಗಳು ಮೇಯ್ದು ಉತ್ತಮ ಗೊಬ್ಬರ, ಜೀವಾಮೃತಗಳನ್ನು ನೀಡುತ್ತಿದ್ದವು. ಇಂದು ಗೋಮಾಳ ಜಮೀನು ಬೇರೆ ಉದ್ದೇಶಕ್ಕೆ ನೀಡಿದ್ದು, ಜಾನುವಾರುಗಳ ಮೇಯಲು ಇಲ್ಲದಂತಾಗಿದೆ. ಶೀಘ್ರದಲ್ಲಿ ಬೇರೆ ಉದ್ದೇಶಗಳಿಗೆ ನೀಡಲಾದ ಗೋಮಾಳ ಜಮೀನುಗಳನ್ನು ವಾಪಸ್ ಪಡೆಯಬೇಕು. ಜಾನುವಾರುಗಳ ಮೇಯಲು ಭೂಮಿ ದೊರೆಯುವಂತೆ ಕ್ರಮ ತೆಗೆರೆದುಕೊಳ್ಳಬೇಕು. ಅಂತಹ ಗೋಮಾಳದಲ್ಲಿ ಪರಸರ ಸಂರಕ್ಷಣೆಗಾಗಿ ನಮ್ಮ ಸಂಘದಿಂದ ಸಸಿಗಳನ್ನು ನೆಡಲು ಯೋಜನೆ ಹಾಕಿಕೊಳ್ಳುತ್ತಿದೆ ಎಂದು ಅವರು ಮನವಿ ಮೂಲಕ ಆಗ್ರಹಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಗ್ರೇಡ್-2 ತಹಶೀಲ್ದಾರ ಸಂಜಯ ಖಾತೆದಾರ, ತಮ್ಮ ಮನವಿಯನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ಸುರೇಶ ನಂದೆಪ್ಪನವರ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಕೋಣನ್ನವರ, ತಾಲೂಕಾ ಕಾರ್ಯದರ್ಶಿ ಪವನ ಅಂಗಡಿ, ಎಸ್.ಎಸ್. ಹಿರೇಮಠ, ಶಿವನಗೌಡ ಕುಲಕರ್ಣಿ, ಮಹಿಳಾ ಪ್ರತಿನಿಧಿ ಸುಮಿತ್ರಾ ಹಣಮನೇರಿ, ಕಾಳಮ್ಮ ಬಡಿಗೇರ, ನಿಂಗಪ್ಪ ಗುದಗಿ, ಯಲ್ಲಪ್ಪ ಜಾಧವ, ಸಿದ್ದು ಹಂಪಿಹೊಳಿ, ಅಪ್ಪು ಪಾಟೀಲ, ತಿರಕಪ್ಪ ಬಾಡಗಾರ ಸೇರಿದಂತೆ ಮತ್ತಿತರರಿದ್ದರು.





