“ಕಾಯಕ ಗ್ರಾಮ” ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ
“ಕಾಯಕ ಗ್ರಾಮ” ಬನ್ನೂರಗೆ ಭೇಟಿ ನೀಡಿ ಪರಿಶೀಲಿಸಿದ ಜಿಪಂ ಸಿಇಓ ರಾಹುಲ್ ಶಿಂಧೆ
ಮಾನ್ಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ ರವರ ಅಧ್ಯಕ್ಷತೆಯಲ್ಲಿ ರಾಮದುರ್ಗ ತಾಲೂಕಿನ ಬನ್ನೂರ ಗ್ರಾಮದ ಗ್ರಾಪಂ ಕಾರ್ಯಾಲಯದ ಆವರಣದಲ್ಲಿ ಇಂದು “ಕಾಯಕ ಗ್ರಾಮ” ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಸಭೆಯಲ್ಲಿ ಮಾತನಾಡಿದ ಮಾನ್ಯರು, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ ಹಾಗೂ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಇ-ಆಡಳಿತ ವಿಭಾಗವು ಸಿದ್ಧಪಡಿಸಿರುವ Gram Panchayat Performance Ranking ನಲ್ಲಿ ಹಿಂದುಳಿದಿರುವ ಗ್ರಾಮ ಪಂಚಾಯತಿಗಳನ್ನು ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ರಾಜ್ಯಮಟ್ಟದ ಅಧಿಕಾರಿಗಳು ಆಯ್ಕೆ ಮಾಡಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಟಾನ, ಗ್ರಾಮ ಪಂಚಾಯತಿ ಕಾರ್ಯನಿರ್ವಹಣೆ, ನಿಯಮಿತವಾಗಿ ವಿವಿಧ ಸಭೆಗಳ ಆಯೋಜನೆ ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು “ಕಾಯಕ ಗ್ರಾಮ” ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ 15 ದಿನದೊಳಗಾಗಿ ಗ್ರಾಮಸಭೆಯನ್ನು ಆಯೋಜಿಸಿ, ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಯಾವ ಯಾವ ಯೋಜನೆ ರೂಪಿಸಬೇಕೆಂದು ತೀರ್ಮಾನಿಸಿ ನಿರ್ಣಯ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಮಾನ್ಯರು ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು ಹಾಗೂ ಅಗತ್ಯ ಯೋಜನೆ ರೂಪಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಭರವಸೆ ನೀಡಿದರು.
ಬನ್ನೂರು ಗ್ರಾಪಂ ವ್ಯಾಪ್ತಿಯ ಎನ್.ಆರ್.ಎಲ್.ಎಮ್. ಯೋಜನೆಯ ಸ್ವಸಹಾಯ ಸಂಘದ ಮಹಿಳೆಯರು ತಮ್ಮ ಕೈಯ್ಯಿಂದಲೇ ಸಿದ್ಧಪಡಿಸಿರುವ ವಿವಿಧ ಬಟ್ಟೆಗಳು ಹಾಗೂ ವಸ್ತುಗಳನ್ನು ಮಾನ್ಯರು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ವಿವಿಧೆಡೆ ಭೇಟಿ; ಮಕ್ಕಳೊಂದಿಗೆ ಭೋಜನ ಸವಿದ ಸಿಇಓ
ಮಾನ್ಯರು ಗ್ರಾಮದ ಸ.ಹಿ.ಪ್ರಾ. ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಮಕ್ಕಳೊಂದಿಗೆ ಕುಳಿತು ಮಧ್ಯಾಹ್ನದ ಬಿಸಿಯೂಟವನ್ನು ಸವಿದರು. ಮಕ್ಕಳು ಸಿಇಓ ರವರೊಂದಿಗೆ ಭೋಜನ ಸವಿದು ಸಂತಸಪಟ್ಟರು.
ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳ ಹಾಜರಾತಿಯ ಬಗ್ಗೆ ಮಾಹಿತಿ ಪಡೆದರು. ಮಕ್ಕಳಿಗೆ ನೀಡಲಾಗುತ್ತಿರುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿದರು. ಜೆಜೆಎಮ್ ಕಾಮಗಾರಿಯನ್ನು ಪರಿಶೀಲನೆ ಮಾಡಿದರು. ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸುವಂತೆ ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು. ಗ್ರಾಪಂ ಕಾರ್ಯಾಲಯಕ್ಕೆ ಭೇಟಿ ನೀಡಿ, ಸಿಬ್ಬಂದಿಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.
ಗ್ರಾಮ ಪಂಚಾಯತ ಅಧ್ಯಕ್ಷರು ಶ್ರೀಮತಿ ಲಕ್ಷ್ಮಿ ವಾಲೆಶ್ ಪೂಜಾರ ಉಪಾಧ್ಯಕ್ಷರು ರಾಜನ್ ಗಂಗಾಧರ ನಾಗನೂರು ಮಾನ್ಯ ಜಿಪಂ ಯೋಜನಾ ನಿರ್ದೇಶಕರಾದ (ಡಿ.ಆರ್.ಡಿ.ಎ.) ಶ್ರೀ ರವಿ ಬಂಗಾರೆಪ್ಪನವರ್, ಮಾನ್ಯ ಉಪಕಾರ್ಯದರ್ಶಿಗಳಾದ (ಆಡಳಿತ) ಶ್ರೀ ಬಸವರಾಜ ಹೆಗ್ಗನಾಯಕ್, ಮಾನ್ಯ ಉಪಕಾರ್ಯದರ್ಶಿಗಳಾದ ಶ್ರೀ ಬಸವರಾಜ ಅಡವಿಮಠ (ಅಭಿವೃದ್ಧಿ) ಮಾನ್ಯ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಬಸವರಾಜ ಐನಾಪುರ ಹಾಗೂ ಮಾನ್ಯ ಸಹಾಯಕ ನಿರ್ದೇಶಕರು ಸೋಮರಡ್ಡಿ ಹೊಂಗಲ ಹಾಗೂ ಮಾಲತೇಶ್ ದಾಸಪ್ಪನ್ವರ್ ಹಾಗೂ ತಾಲೂಕು ಪಂಚಾಯತ ವ್ಯವಸ್ಥಾಪಕರು ಹನುಮಂತ ಕೊಂತಿಕಲ್ಲ ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿ ವರ್ಗ ಗ್ರಾಮಸ್ತರು ಉಪಸ್ಥಿತರಿದ್ದರು



