ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)
ಮೇ 14 ರಂದು ಧಾರವಾಡದಲ್ಲಿ ಜರುಗಿದ ಎಳ್ಳು ಬೆಳೆಯ ಕ್ಷೇತ್ರೋತ್ಸವ
ಧಾರವಾಡ ಮೇ.15: ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇವರ ಸಹಯೋಗದಲ್ಲಿ ಮೇ 14, 2026 ರಂದು ವಾಲ್ಮಿ ಕ್ಷೇತ್ರದಲ್ಲಿ ಬೆಳೆದ ಎಳ್ಳು ಬೆಳೆಯ ಕ್ಷೇತ್ರೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕ್ಷೇತ್ರೋತ್ಸವ ಉದ್ಘಾಟಿಸಿದ ಧಾರವಾಡ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ನಿರ್ದೇಶಕ ಡಾ. ಗಿರೀಶ ಎನ್. ಮರಡ್ಡಿ ಅವರು ಮಾತನಾಡಿ, ಎಳ್ಳು ಎಣ್ಣೆಕಾಳು ಬೆಳೆಯಾಗಿದ್ದು, ಎಳ್ಳಿನ ಕಾಳುಗಳಲ್ಲಿ ಶೇ. 48 ರಿಂದ ಶೇ. 52 ಗುಣಮಟ್ಟದ ಎಣ್ಣೆ ಅಂಶ ಹೊಂದಿದ್ದು, ಕ್ಯಾಲ್ಸಿಯಂ, ಮ್ಯಾಗ್ನೀಷಿಯಂ, ಪ್ರೋಟೀನ್, ಪೊಟ್ಯಾಷ, ನಾರು ಮುಂತಾದ ಪೋಷಕಾಂಶಗಳನ್ನು ಹೊಂದಿದ್ದು, ಎಳ್ಳು ಆರೋಗ್ಯದಾಯಕ ಮತ್ತು ಉತ್ತಮ ಔಷಧಿ ಗುಣಗಳನ್ನು ಹೊಂದಿದೆ. ಎಳ್ಳಿನ ಹಿಂಡಿಯನ್ನು ದನಕರುಗಳಿಗೆ ಆಹಾರವಾಗಿ ಉಪಯೋಗಿಸಲಾಗುತ್ತದೆ ಎಂದು ತಿಳಿಸಿದರು.
ಅತಿಥಿಗಳಾಗಿದ್ದ ಧಾರವಾಡ ಕೆ.ವಿ.ಕೆ ಮುಖ್ಯಸ್ಥ ಡಾ. ಕೆ. ಪಿ. ಗುಂಡಣ್ಣವರ ಅವರು ಮಾತನಾಡಿ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಬೆಳೆ ಪರಿವರ್ತನೆ ಕ್ರಮ ಅನುಸರಿಸಬೇಕು. ಇದರ ಭಾಗವಾಗಿ ಎಳ್ಳು ಬೆಳೆಯನ್ನು ಬೆಳೆಯುವಂತೆ ಸಲಹೆ ನೀಡಿದರು.
ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಡಾ. ಅನೀಸಾ ಎಂ. ನಿಂಬಾಳ ಅವರು ಮಾತನಾಡಿ, ಎಳ್ಳು ಒಂದು ಪ್ರಮುಖ ಎಣ್ಣೆಕಾಳು ಬೆಳೆಯಾಗಿದ್ದು, ಇದನ್ನು ಎಣ್ಣೆಕಾಳುಗಳ ರಾಣಿ ಎಂದು ಕರೆಯುತ್ತಾರೆ. ಎಳ್ಳು ಬೆಳೆಯನ್ನು ಬೇಸಿಗೆ ಹಾಗೂ ಮುಂಗಾರು ಹಂಗಾಮಿನಲ್ಲಿ ಬೆಳೆಯಬಹುದಾಗಿದ್ದು, ಕೃ.ವಿ.ವಿ. ಧಾರವಾಡದಿಂದ ಡಿ.ಎಸ್.ಎಂ.-4 ಹಾಗೂ ಡಿ.ಎಸ್.-5 ಎಂಬ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಎಳ್ಳು ಬೆಳೆಯ ಬೇಸಾಯ ಕ್ರಮಗಳ ಕುರಿತು ರೈತರಿಗೆ ತಿಳುವಳಿಕೆ ನೀಡಿದರು. ಹಾಗೂ ಕೃ.ವಿ.ವಿ.ದ ವತಿಯಿಂದ ಪ್ರಾತ್ಯಕ್ಷಿಕೆ ಕೈಗೊಳ್ಳಲು ಉಚಿತವಾಗಿ ರೈತರಿಗೆ ಎಳ್ಳು ಬೀಜಗಳನ್ನು ನೀಡಲಾಗುತ್ತಿದ್ದು, ಇದರ ಸೌಲಭ್ಯವನ್ನು ಪಡೆಯುವಂತೆ ಅವರು ತಿಳಿಸಿದರು.
ಕ್ಷೇತ್ರೋತ್ಸವದಲ್ಲಿ ಇಂ. ಬಿ. ವೈ. ಬಂಡಿವಡ್ಡರ, ಇಂ. ಸುಧೀಂದ್ರ ಕೆ. ಎಸ್., ಇಂ. ಕೆ. ಸದಾಶಿವ, ಮತ್ತು ಸುನಂದಾ ಸಿತೋಳೆ, ಡಾ. ಮಾಳವಿಕಾ ಪಾಲ್ಗೊಂಡಿದ್ದರು.
ವಾಲ್ಮಿ ಸಹಾಯಕ ಪ್ರಾಧ್ಯಾಪಕ ನಾಗರಾಜ ತಹಶೀಲ್ದಾರ ಅವರು ಸ್ವಾಗತಿಸಿದರು ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಳ್ಳು ಬೆಳೆಯ ಕ್ಷೇತ್ರೋತ್ಸವದಲ್ಲಿ ದಾವಣಗೆರೆ ತಾಲೂಕಿನ ತ್ಯಾವಣಗಿ ಗ್ರಾಮದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು, ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಜಲ ಸಂಪನ್ಮೂಲ ಇಲಾಖೆಯ ಅಭಿಯಂತರರು, ಸಂಸ್ಥೆಯ ಅಧಿಕಾರಿ, ಸಿಬ್ದಂದಿಗಳು ಹೆಚ್ಚಿನ ಸಂಸ್ಯೆಯಲ್ಲಿ ಭಾಗವಹಿಸಿದ್ದರು.



