ಬೆಂಗಳೂರು ನಗರ ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಇಂದು ಒಂದು ಮಹತ್ವದ ದಿನ.
ದೇಶದಲ್ಲೇ ಮೊದಲ ಬಾರಿಗೆ 112 ತುರ್ತು ಸ್ಪಂದನಾ ವ್ಯವಸ್ಥೆಯಲ್ಲಿ (ERSS) ಕೃತಕ ಬುದ್ಧಿಮತ್ತೆ ಆಧಾರಿತ ಬಹುಭಾಷಾ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಈ ಅತ್ಯಾಧುನಿಕ ಸೇವೆಗೆ ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಇಂದು ಅಧಿಕೃತವಾಗಿ ಚಾಲನೆ ನೀಡಿದರು.
ಅಂತರಾಷ್ಟ್ರೀಯ ನಗರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಭಾಷಾ ಅಡೆತಡೆಗಳು ತುರ್ತು ಸಂದರ್ಭದ ಸಹಾಯಕ್ಕೆ ಅಡ್ಡಿಯಾಗಬಾರದು ಎನ್ನುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ವ್ಯವಸ್ಥೆಯ ಮೂಲಕ ನಾಗರಿಕರು ಕನ್ನಡ ಸೇರಿದಂತೆ ದೇಶದ ವಿವಿಧ ರಾಜ್ಯಗಳ 7 ಭಾಷೆಗಳಲ್ಲಿ ಹಾಗೂ ವಿದೇಶಿಗರಿಗಾಗಿ ಸ್ಪ್ಯಾನಿಷ್, ಫ್ರೆಂಚ್ ಮತ್ತು ಅರೇಬಿಕ್ ಭಾಷೆಗಳಲ್ಲಿ ತುರ್ತು ನೆರವು ಪಡೆಯಬಹುದು. ಕರೆ ಸ್ವಯಂಚಾಲಿತವಾಗಿ ಅನುವಾದಗೊಳ್ಳುವ ಈ ವ್ಯವಸ್ಥೆಯು ಅತ್ಯಂತ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದ್ದು, ಪ್ರತಿಯೊಬ್ಬ ನಾಗರಿಕನ ಸುರಕ್ಷತೆ ಮತ್ತು ವಿಶ್ವಾಸವನ್ನು ಮತ್ತಷ್ಟು ಬಲಪಡಿಸಲಿದೆ.
ಸುರಕ್ಷಿತ ಮತ್ತು ಡಿಜಿಟಲ್ ಕರ್ನಾಟಕದತ್ತ ರಾಜ್ಯ ಪೊಲೀಸ್ ಇಲಾಖೆಯು ಇಟ್ಟಿರುವ ಈ ದಿಟ್ಟ ಹೆಜ್ಜೆಯು ಇಡೀ ದೇಶಕ್ಕೆ ಮಾದರಿಯಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಂ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



