ತೀರ್ಥಹಳ್ಳಿ:ತೀರ್ಥಹಳ್ಳಿ ತಾಲೂಕಿನ ಗುಮ್ಮನಮಕ್ಕಿ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು. ಈ ಭಾಗದ ಪ್ರಸಿದ್ಧ ಐದೂರು ದೇವತೆಗಳ ಸಮಾಗಮಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು ಪುನೀತರಾದರು.ಮಾಳೂರು ಗಾಳಿಮಾರಮ್ಮ, ಸಮಕಾನಿ ದುರ್ಗಾಪರಮೇಶ್ವರಿ, ಆಲಬಳ್ಳಿ ಚಾಮುಂಡೇಶ್ವರಿ, ಗುತ್ತಿ ಎಡೇಹಳ್ಳಿ ಗುತ್ಯಮ್ಮ ಹಾಗೂ ಸೋಮವಾರಸಂತೆ ದುರ್ಗಾಪರಮೇಶ್ವರಿ ಅಮ್ಮನವರು ಮತ್ತು ಕುಮಾರಸ್ವಾಮಿ ದೇವರುಗಳ ಪಲ್ಲಕ್ಕಿಗಳು ವಾಲಗ, ವಾದ್ಯ ಹಾಗೂ ಡೋಲುಗಳ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ಸಮಾಗಮಗೊಂಡ ದೃಶ್ಯ ಭಕ್ತರ ಗಮನ ಸೆಳೆಯಿತು. ವಿವಿಧ ಸೀಮೆಗಳಲ್ಲಿ ನೆಲೆಸಿರುವ ಈ ದೇವಿಯರು ವರ್ಷಕ್ಕೊಮ್ಮೆ ತಮ್ಮ ತವರು ಮನೆಯಂತಿರುವ ಗುಮ್ಮನಮಕ್ಕಿಯಲ್ಲಿ ಒಟ್ಟಿಗೆ ಸೇರಿ, ಭಕ್ತರ ಇಷ್ಟಾರ್ಥಗಳನ್ನು ಪೂರೈಸಿ ಮರಳಿ ತಮ್ಮ ಸೀಮೆಗಳಿಗೆ ತೆರಳುತ್ತಾರೆ ಎಂಬುದು ಇಲ್ಲಿನ ವಿಶೇಷ ನಂಬಿಕೆಯಾಗಿದೆ.
ಜಾತ್ರೆಯ ಅಂಗವಾಗಿ ಮೈದಾನದಲ್ಲಿ ಆಟಿಕೆಗಳ ಮಳಿಗೆಗಳು ಹಾಗೂ ವಿವಿಧ ಖಾದ್ಯಗಳ ಸ್ಟಾಲ್ಗಳು ತುಂಬಿಕೊಂಡಿದ್ದವು . ಸಂಜೆ ವೇಳೆಗೆ ಹೆದ್ದೂರಿನಲ್ಲಿ ಹೊಸಹಳ್ಳಿ ಸೋಮವಾರ ಗುತ್ಯಮ್ಮ ದೇವಿಯ ಅದ್ದೂರಿ ತೆಪ್ಪೋತ್ಸವ ಕಾರ್ಯಕ್ರಮ ನಡೆಯಿತು. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ತೆಪ್ಪದಲ್ಲಿ ದೇವಿಯ ಮೆರವಣಿಗೆಯನ್ನು ಕೊರೆಯುವ ಚಳಿಯ ನಡುವೆಯೂ ನೂರಾರು ಭಕ್ತರು ಕಣ್ತುಂಬಿಕೊಂಡರು. ಇದೇ ಸಂದರ್ಭದಲ್ಲಿ ಸಮಕಾನಿ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ವತಿಯಿಂದ ಬೆಜ್ಜವಳ್ಳಿಯ ಅಂತ್ರೊಳ್ಳಿ ಕೆರೆ ಬಳಿ ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಿಡಿಮದ್ದು ಪ್ರದರ್ಶನ ಜನಮನ ಗೆದ್ದಿತು.

ಜಾತ್ರಾ ಸಮಿತಿಯ ವತಿಯಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಅವಧೂತ ವಿನಯ್ ಗುರೂಜಿ ಅವರು ಆಗಮಿಸಿ ದರ್ಶನ ಪಡೆದದ್ದು ವಿಶೇಷವಾಗಿತ್ತು.



