ಸಂಗೀತದ ಮೂಲಕ ಭಗವಂತನ ಸಾಕ್ಷಾತ್ಕಾರ: ಬಸವರಾಜ ಬೊಮ್ಮಾಯಿ ಶ್ಲಾಘನೆ
ಸಮಾಜದಲ್ಲಿ ಪಾಪ-ಪುಣ್ಯಗಳ ತಕ್ಕಡಿ ಮಾಯವಾಗಿ, ಲಾಭ-ನಷ್ಟದ ಲೆಕ್ಕಾಚಾರ ಹೆಚ್ಚಾಗಿದೆ: ಬಸವರಾಜ ಬೊಮ್ಮಾಯಿ ಕಳವಳ
ಗದಗ:ಇಂದಿನ ಆಧುನಿಕ ಹಾಗೂ ವಸ್ತುಪ್ರಧಾನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿದ್ದು, ಪಾಪ-ಪುಣ್ಯಗಳ ತಕ್ಕಡಿ ಮಾಯವಾಗಿ ಎಲ್ಲವನ್ನೂ ಲಾಭ-ನಷ್ಟದ ತಕ್ಕಡಿಯಲ್ಲಿ ತೂಗುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಆಯೋಜಿಸಲಾಗಿದ್ದ ಪಂಡಿತ ಪುಟ್ಟರಾಜ ಗವಾಯಿಗಳವರ 16ನೇ ಪುಣ್ಯಸ್ಮರಣೆ ಹಾಗೂ ಸಂಗೀತ ಸಮಾರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಇಬ್ಬರು ಮಹಾಪುರುಷರು ತಮ್ಮ ಜೀವನದುದ್ದಕ್ಕೂ ಸಾತ್ವಿಕ್ತೆ, ಸದ್ಭಾವನೆ ಹಾಗೂ ಸಾರ್ಥಕತೆಯ ಸಂದೇಶವನ್ನು ಸಾರಿದ್ದಾರೆ. ಅವರ ಪುಣ್ಯಸ್ಮರಣೆ ಮಾಡುವುದು ನಮ್ಮ ಪರಂಪರೆಯಾಗಿದೆ ಎಂದು ಬೊಮ್ಮಾಯಿ ಬಣ್ಣಿಸಿದರು.
ಅಂಧತ್ವದಲ್ಲೂ ಬೆಳಕಿನ ಹಾದಿ: ದೈಹಿಕವಾಗಿ ಅಂಧತ್ವ ಹೊಂದಿದ್ದರೂ, ಜಗತ್ತಿಗೆ ವೈಚಾರಿಕ ಮತ್ತು ಆಧ್ಯಾತ್ಮಿಕ ಬೆಳಕನ್ನು ನೀಡಿದ ಪುಣ್ಯಾತ್ಮರು ಇವರು. ಹೊರನೋಟಕ್ಕೆ ಕಣ್ಣಿಲ್ಲದಿದ್ದರೂ, ಒಳಗಣ್ಣಿನಿಂದ ಬದುಕಿನ ದಿವ್ಯತ್ವವನ್ನು ಹಾಗೂ ಆಧ್ಯಾತ್ಮಿಕ ಸಾಧನೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಪುಣ್ಯಭೂಮಿಯ ಮಹಿಮೆ: ಈ ಪವಿತ್ರ ಆಶ್ರಮವು ಕೇವಲ ಹೆಸರಿನಲ್ಲಿ ಮಾತ್ರವಲ್ಲ, ತನ್ನ ಭಾವದಲ್ಲೂ ಪುಣ್ಯವನ್ನು ಒಳಗೊಂಡಿದೆ. ಇಲ್ಲಿ ಪುಣ್ಯಕ್ಕೆ ಮಾತ್ರ ಸ್ಥಾನವಿದ್ದು, ಬೇರೆ ಯಾವುದಕ್ಕೂ ಜಾಗವಿಲ್ಲ ಎಂದು ಅವರು ಆಶ್ರಮದ ಮಹಿಮೆಯನ್ನು ಸ್ಮರಿಸಿದರು.
”ಭಗವಂತನು ನಮ್ಮೊಳಗೇ ಇದ್ದಾನೆ, ಆದರೆ ನಾವು ಅವನನ್ನು ಹೊರಗಡೆ ಹುಡುಕುತ್ತಿದ್ದೇವೆ. ಭಗವಂತನನ್ನು ಸಂಗೀತದ ಮೂಲಕ ಅತ್ಯಂತ ಸುಲಭವಾಗಿ ಮತ್ತು ಸುಂದರವಾಗಿ ಅಭಿವ್ಯಕ್ತಿಗೊಳಿಸಬಹುದು. ನಾವು ಮಾಡುವ ನಿತ್ಯದ ಕ್ರಿಯೆಗಳಿಗಿಂತ ಸಂಗೀತದ ಮೂಲಕ ಭಗವಂತನ ನಾಮಸ್ಮರಣೆ ಮಾಡಿದಾಗ ಭಕ್ತಿ ರಸವು ಹರಿಯುತ್ತದೆ” ಎಂದು ಬೊಮ್ಮಾಯಿ ಹೇಳಿದರು.
ಪುಟ್ಟರಾಜ ಗವಾಯಿಗಳ ಕೊಡುಗೆ ಅನನ್ಯ: “ಪಂಡಿತ ಪುಟ್ಟರಾಜ ಗವಾಯಿಗಳು ಅತ್ಯಂತ ಸಹಜವಾಗಿ ಭಕ್ತಿ ರಸವನ್ನು ಇಡೀ ಜಗತ್ತಿಗೆ ಉಣಬಡಿಸಿದ್ದಾರೆ. ಅವರ ಒಡನಾಟದಲ್ಲಿ ನಾವೆಲ್ಲರೂ ಕಾಲ ಕಳೆದಿರುವುದು ನಮ್ಮ ಪುಣ್ಯ. ಗವಾಯಿಗಳಿಗೆ ಸಿಕ್ಕ ‘ಪದ್ಮಭೂಷಣ’ ಪ್ರಶಸ್ತಿಯು, ಆ ಪ್ರಶಸ್ತಿಗೆ ಹೆಮ್ಮೆಯನ್ನು ತಂದಿದೆ” ಎಂದು ಗವಾಯಿಗಳ ವ್ಯಕ್ತಿತ್ವವನ್ನು ಕೊಂಡಾಡಿದರು.
ಸಾವಿರಾರು ಮಕ್ಕಳಿಗೆ ಬದುಕು ಕಟ್ಟಿಕೊಟ್ಟ ಮಹನೀಯರು:ಜಗತ್ತಿನಲ್ಲಿ ಸಂಗೀತದ ಮೂಲಕ ಸಾವಿರಾರು ಅಂಧ ಹಾಗೂ ಅಸಹಾಯಕ ಮಕ್ಕಳಿಗೆ ಆಶ್ರಯ ನೀಡಿ, ಅವರ ಬದುಕನ್ನು ಉಜ್ವಲಗೊಳಿಸಿದ ಕೀರ್ತಿ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಸಲ್ಲುತ್ತದೆ. ಅವರ ಈ ಸಾಧನೆ ಮತ್ತು ಸೇವೆ ಇತಿಹಾಸದಲ್ಲಿ ಸದಾ ಅಮರವಾಗಿರುತ್ತದೆ ಎಂದು ಬೊಮ್ಮಾಯಿ ಅವರು ಹರಸಿದರು.
ಸಂಗೀತದ ಮೂಲಕ ಬದುಕು ರೂಪಿಸಿದ ಮಹಾತ್ಮ:
ಯಾವುದೇ ವಿಶ್ವವಿದ್ಯಾಲಯಗಳು ಮಾಡದ ಸಾಧನೆಯನ್ನು ಗವಾಯಿಗಳು ಮಾಡಿದ್ದಾರೆ. ಹಲವು ವಿಶ್ವವಿದ್ಯಾಲಯಗಳಲ್ಲಿ ಸಂಗೀತ ವಿಭಾಗಗಳಿರುತ್ತವೆ, ಆದರೆ ಪುಟ್ಟರಾಜ ಗವಾಯಿಗಳು ಸಂಗೀತವನ್ನೇ ಒಂದು ದೊಡ್ಡ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಿ, ನೂರಾರು ಮಕ್ಕಳಿಗೆ ಬದುಕನ್ನು ಕಟ್ಟಿಕೊಟ್ಟಿದ್ದಾರೆ ಎಂದು ಬೊಮ್ಮಾಯಿ ಶ್ಲಾಘಿಸಿದರು.
ಸಕಾರಾತ್ಮಕ ಶಕ್ತಿಯ ಉಗಮ:
“ಪುಟ್ಟರಾಜ ಗವಾಯಿಗಳ ದರ್ಶನ ಪಡೆದು, ಅವರ ಆಶೀರ್ವಾದ ಪಡೆಯುವ ಭಾಗ್ಯ ನನಗೆ ಹಲವು ಬಾರಿ ಸಿಕ್ಕಿದೆ. ಅವರನ್ನು ಸ್ಪರ್ಶಿಸಿದಾಗಲೆಲ್ಲ ನಮ್ಮೊಳಗಿನ ಎಲ್ಲಾ ನಕಾರಾತ್ಮಕ ಅಂಶಗಳು ದೂರವಾಗಿ, ಒಂದು ಅದ್ಭುತವಾದ ಸಕಾರಾತ್ಮಕ ಶಕ್ತಿ ಮೂಡುತ್ತಿತ್ತು,” ಎಂದು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡರು.
ತಾವು ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗವಾಯಿಗಳ ಬಳಿ ಬಂದಾಗ, ಅವರು ತಮಗೆ ನಮಸ್ಕರಿಸಿ, “ನಿಮ್ಮ ಸರ್ಕಾರ… ನಿಮ್ಮ ಸರ್ಕಾರ…” ಎಂದಿದ್ದರು. ಬಳಿಕ ಚುನಾವಣೆಯ ನಂತರ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದಿತು. ಅವರ ಮಾತುಗಳ ಹಿಂದಿದ್ದ ಶಕ್ತಿ ಅದ್ಭುತವಾಗಿತ್ತು ಎಂದು ಸ್ಮರಿಸಿದರು.
ಶರಣರ ಮರಣದಲ್ಲಿ ನೋಡಿ:
“ಶರಣರನ್ನು ಮರಣದಲ್ಲಿ ನೋಡಿ” ಎಂಬ ನಾಣ್ಣುಡಿಯಂತೆ, ಪುಟ್ಟರಾಜ ಗವಾಯಿಗಳು ಲಿಂಗೈಕ್ಯರಾದಾಗ ನೆರೆದಿದ್ದ ಬೃಹತ್ ಜನಸ್ತೋಮವೇ ಅವರ ಸಾಧನೆಗೆ ಸಾಕ್ಷಿಯಾಗಿತ್ತು. ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಸ್ವಯಂಪ್ರೇರಿತರಾಗಿ ಬಂದು ಅಂತಿಮ ದರ್ಶನ ಪಡೆದಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದು ಭಾವೋದ್ವೇಗದಿಂದ ನುಡಿದರು.
ಗವಾಯಿಗಳು ದೈವಮಾನವರು
ಸ್ವಾಮಿ ವಿವೇಕಾನಂದರ ನುಡಿಗಳನ್ನು ಸ್ಮರಿಸಿದ ಬೊಮ್ಮಾಯಿ, “ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವುದು ಸಾಧಕನ ನಿಜವಾದ ಲಕ್ಷಣ. ಅಂತಹ ಮಹಾನ್ ಸಾಧಕರು ನಮ್ಮ ನಡುವೆ ಬಾಳಿ ಬದುಕಿದ ಪುಟ್ಟರಾಜ ಗವಾಯಿಗಳು. ಮನುಷ್ಯ ತನ್ನ ಗುಣಗಳಿಂದ ಮಾನವನಾಗುತ್ತಾನೆ. ಆದರೆ, ಗವಾಯಿಗಳು ತಮ್ಮ ತಪಸ್ಸು ಮತ್ತು ಸೇವೆಯಿಂದ ‘ದೈವಮಾನವ’ರಾಗಿದ್ದರು. ಕಾಮ, ಕ್ರೋಧ, ಮದ, ಮತ್ಸರಗಳಿಗೆ ಸಿಲುಕುವವನು ಸಾಮಾನ್ಯ ಮನುಷ್ಯ; ಕಾಯ, ಪ್ರೀತಿ, ಧರ್ಮ, ಸತ್ಯದ ಹಾದಿಯಲ್ಲಿ ನಡೆಯುವವನು ಮಾನವ. ಇವೆಲ್ಲವನ್ನೂ ಮೀರಿ ದೈವತ್ವಕ್ಕೇರಿದವರು ಪೂಜ್ಯ ಗವಾಯಿಗಳು,” ಎಂದು ಬಣ್ಣಿಸಿದರು.
ಅಂತಃಕರಣದ ಮಹತ್ವ
”ಜಾಗತೀಕರಣ, ಉದಾರೀಕರಣ ಮತ್ತು ತಾಂತ್ರಿಕತೆಯ ಈ ಯುಗದಲ್ಲಿ ಮನುಷ್ಯ ತನ್ನೊಳಗಿನ ಅಂತಃಕರಣವನ್ನೇ ಮರೆಯುತ್ತಿದ್ದಾನೆ. ಪುಟ್ಟರಾಜ ಗವಾಯಿಗಳ ಇಡೀ ಜೀವನವೇ ಅಂತಃಕರಣದಿಂದ ಕೂಡಿತ್ತು. ಇಂದಿನ ದಿನಗಳಲ್ಲಿ ಒಬ್ಬ ವ್ಯಕ್ತಿಯಲ್ಲಿ ಇರಬೇಕಾದ ಅತ್ಯಂತ ದೊಡ್ಡ ಗುಣವೆಂದರೆ ‘ಉಪಕಾರ ಸ್ಮರಣೆ’. ಆದರೆ, ಪ್ರಸ್ತುತ ಸಮಾಜದಲ್ಲಿ ಇದು ಕಡಿಮೆಯಾಗುತ್ತಿದ್ದು, ಎಲ್ಲದರಲ್ಲೂ ಲಾಭ-ನಷ್ಟದ ಲೆಕ್ಕಾಚಾರವೇ ಮುಂಚೂಣಿಗೆ ಬಂದಿದೆ,” ಎಂದು ಅವರು ವಿಷಾದಿಸಿದರು.
”ಪೂಜ್ಯರ ಸ್ಮರಣೆಯೇ ನಮಗೆ ಪುಣ್ಯ”
”ಮಗುವಾಗಿ ಹುಟ್ಟಿದಾಗ ಪ್ರತಿಯೊಬ್ಬರಲ್ಲೂ ಆತ್ಮದ ಮತ್ತು ಮನಸ್ಸಿನ ಶುದ್ಧತೆ ಇರುತ್ತದೆ. ಆದರೆ, ಬೆಳೆಯುತ್ತಾ ಹೋದಂತೆ ಸಂಸಾರದ ಜಂಜಾಟದಲ್ಲಿ ಅದು ಮರೆಯಾಗುತ್ತದೆ. ಪುಟ್ಟರಾಜ ಗವಾಯಿಗಳಂತಹ ಮಹಾತ್ಮರ ಪುಣ್ಯದ ಫಲವನ್ನು ನಾವು ಸ್ಮರಿಸುತ್ತಾ, ಹಂಚುತ್ತಾ ಹೋದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಅವರ ಸ್ಮರಣೆ ಮತ್ತು ನೆನಪು ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತದೆ,” ಎಂದು ಬೊಮ್ಮಾಯಿ ತಿಳಿಸಿದರು.
ಸ್ಮಾರಕ ಭವನಕ್ಕೆ ಸಂಪೂರ್ಣ ಬೆಂಬಲ
ಗವಾಯಿಗಳ ಸ್ಮಾರಕ ಭವನದ ಕುರಿತು ಪ್ರಸ್ತಾಪಿಸಿದ ಬೊಮ್ಮಾಯಿ ಅವರು, “ಹಿಂದೆ ನಾವು ಸ್ಮಾರಕ ಭವನಕ್ಕಾಗಿ 5 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದೆವು. ಆದರೆ ಆ ಕೆಲಸ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಈ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಂತದಲ್ಲಿ ಸಂಬಂಧಪಟ್ಟ ಎಲ್ಲರೊಂದಿಗೆ ಮಾತನಾಡಿ, ಸೂಕ್ತ ಯೋಜನೆ ರೂಪಿಸಿ, ಅಗತ್ಯವಿರುವ ಸಂಪೂರ್ಣ ನೆರವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ,” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಜಗದ್ಗುರುಗಳು, ವಿವಿಧ ಮಠಾಧೀಶರು ಹಾಗೂ ಅಪಾರ ಸಂಖ್ಯೆಯ ಸಂಗೀತ ಮತ್ತು ಗವಾಯಿಗಳ ಭಕ್ತಾದಿಗಳು ಉಪಸ್ಥಿತರಿದ್ದರು.



