ಧ್ವಜಗಳ ತೆರವುಗೊಳಿಸಲು ಆಗ್ರಹಿಸಿ ಸಾಮೂಹಿಕ ಸಂಘಟನೆಗಳ ಒಕ್ಕೂಟ ಸುದ್ದಿಗೋಷ್ಠಿ
ಸುರಪುರ:ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿನ ಭೂಮಿಗಾಗಿ ದಲಿತ ಸಾಮೂಹಿಕ ಸಂಘಟನೆಗಳು ಪ್ರಭು ಕಾಲೇಜ್ ಮೈದಾನದಲ್ಲಿ ಹಾಕಲಾಗಿರುವ ಧ್ವಜಗಳ ತೆರವು ಕುರಿತು ನ್ಯಾಯಾಲಯ ನೀಡಿರುವ ಆದೇಶವನ್ನು ಪಾಲಿಸಬೇಕು ಅದನ್ನು ವಿರೋಧಿಸುವುದು ಸರಿಯಲ್ಲ ಎಂದು ಸಾಮೂಹಿಕ ಸಂಘಟನೆಗಳ ಒಕ್ಕೂಟದ ಮುಖಂಡ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಮಹಾತ್ಮ ಗಾಂಧಿ ವೃತದಲ್ಲಿನ ಧರಣಿ ಸ್ಥಳದಲ್ಲಿ ಗುರುವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈಗಾಗಲೇ ತಹಶೀಲ್ದಾರರು ಸಾಮೂಹಿಕ ಸಂಘಟನೆಗಳ ಒಕ್ಕೂಟದ ಮುಖಂಡರೊಂದಿಗೆ ಸಭೆ ನಡೆಸಿದಾಗ ನಾವು ನ್ಯಾಯಾಲಯದ ಆದೇಶದಂತೆ ಹಾಕಿರುವ ಧ್ವಜಗಳನ್ನು ತೆರವುಗೊಳಿಸಲು ಸಿದ್ಧರಿದ್ದೇವೆ ಮೊದಲು ದಲಿತ ಸಂಘಟನೆಗಳಿಂದ ಹಾಕಲಾಗಿರುವ ಧ್ವಜಗಳನ್ನು ತೆರವುಗೊಳಿಸುವಂತೆ ತಿಳಿಸಿದ್ದೇವೆ.
ಇಂದು ತಹಸಿಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಲಿತ ಸಂಘಟನೆಗಳ ಮುಖಂಡರು ಧ್ವಜಗಳನ್ನು ತೆರವುಗೊಳಿಸುವುದಿಲ್ಲ ಎಂದು ಹೇಳಿದ್ದು ಅಧಿಕಾರಿಗಳು ಮತ್ತು ನ್ಯಾಯಾಲಯದ ಆದೇಶಕ್ಕೂ ವಿರೋಧ ವ್ಯಕ್ತಪಡಿಸಿರುವುದು ಸರಿಯಾದ ನಡೆಯಲ್ಲ. ಆದರಿಂದ ನಾವು ಈಗಾಗಲೇ ಪ್ರಭು ಕಾಲೇಜ್ ಮೈದಾನದ ಬಳಿಯಲ್ಲಿನ ಅಂಗಡಿಗಳ ಬೀಗ ತೆರೆಯುವಂತೆ, ಜಿಲ್ಲಾಧಿಕಾರಿಗಳು ಭೂಮಿ ಹಂಚಿಕೆ ಮಾಡಿ ಹೊರಡಿಸಿದ ಆದೇಶ ರದ್ದುಗೊಳಿಸುವಂತೆ ಹಾಗೂ ಪ್ರಭು ಕಾಲೇಜ್ ಮೈದಾನದಲ್ಲಿ ಹಾಕಲಾಗಿರುವ ಧ್ವಜಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸುರಪುರ ಬಂದ್ ಮಾಡಿ ನಂತರ ನಿರಂತರ ಧರಣಿಯನ್ನು ನಡೆಸಿದ್ದೆವು. ನಮ್ಮ ಮನವಿಯಂತೆ ಈಗಾಗಲೇ ಎರಡು ಬೇಡಿಕೆಗಳು ಈಡೇರಿದ್ದು ಧ್ವಜಗಳ ತೆರವುಗೊಳಿಸಲು ಅಧಿಕಾರಿಗಳು ನಾಲ್ಕು ದಿನಗಳ ಸಮಯಾವಕಾಶ ತೆಗೆದುಕೊಂಡಿದ್ದರಿಂದ ನಾವು ಕೂಡ ಒಪ್ಪಿಕೊಂಡಿದ್ದೆವು ಆದರೆ ಶನಿವಾರ ಧ್ವಜಗಳನ್ನು ತೆರವುಗೊಳಿಸದಿದ್ದಲ್ಲಿ ನಮ್ಮ ಧರಣಿ ಉಗ್ರ ಸ್ವರೂಪ ಪಡೆಯಲಿದ್ದು ಹೆದ್ದಾರಿಯನ್ನು ತಡೆದು ಪ್ರತಿಭಟನೆಯನ್ನು ನಡೆಸಲಿದ್ದೇವೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಮೇಶ ದೊರೆ ಅಲ್ದಾಳ, ಭೀಮನಗೌಡ ಹೆಮನೂರ, ಹಣಮಂತ ಕಟ್ಟಿಮನಿ, ಶಿವ ಮೋನಯ್ಯ ನಾಯಕ, ಚಂದ್ರು ಎಲಿಗಾರ, ವೆಂಕಟೇಶ ಬೇಟೆಗಾರ, ರಾಘವೇಂದ್ರ ಕುಲಕರ್ಣಿ, ದೇವೇಂದ್ರಪ್ಪ ಮಾಲಿಪಾಟೀಲ, ಮಲ್ಲು ದಂಡಿನ್, ವಿನಾಯಕ ಕರಡಕಲ್, ಗಂಗಾಧರ ನಾಯಕ,ಶರಣು ನಾಯಕ, ರಂಗನಾಥ ನಾಯಕ, ಭೀಮು ನಾಯಕ ಮಲ್ಲಿಬಾವಿ, ಮಲ್ಲಪ್ಪ ಹುಬ್ಬಳ್ಳಿ, ಬಸವರಾಜ ಕೋನ್ಹಾಳ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




