ಕೊಟ್ಟಲಗಿ ಸರಕಾರಿ ಶಾಲೆಯ ಪ್ರಗತಿ ಸ್ಮಾರ್ಟ್ ಕ್ಲಾಸ್ ಪ್ರಾರಂಭ
ಬೆಳಗಾವಿ: ಇತ್ತೀಚೆಗೆ ಹೊಸದೊಂದು ಶಕೆ ಪ್ರಾರಂಭವಾಗಿದೆ ಅದುವೇ ಸರಕಾರಿ ಶಾಲೆಗಳತ್ತ ಪಾಲಕ ಪೋಷಕರ ಚಿತ್ತ ಎಲ್ಲ ವರ್ಗದ ಜನರೂ ಅಂದರೆ ಬಡವರಿಂದ ಹಿಡಿದು ಶ್ರೀಮಂತರು ಎಂಬ ಲೋಕರೂಢಿಗರು ಇಂದು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸುತ್ತಿದ್ದಾರೆ.
ಯಾಕೆಂದರೆ ಸರಕಾರಿ ಶಾಲೆಗಳು ಕೂಡಾ ಇಂದು ಖಾಸಗಿ ಶಾಲೆಗಳು ಹೊಂದಿರುವಂತಹ ಇತ್ತೀಚಿನ ತಂತ್ರಜ್ಞಾನ ಆಧಾರಿತ ವಿಶಿಷ್ಟವಾದಂತಹ ಬೋಧನೆಯಲ್ಲಿ ತೊಡಗಿಕೊಂಡು ವಿದ್ಯಾರ್ಥಿಗಳ ಕಲಿಕಾ ಪ್ರಗತಿಯಲ್ಲಿ ಮೇಲುಗೈಯನ್ನು ಸಾಧಿಸುತ್ತಿವೆ. ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ಗೋಚರವಾಗುವುದು ಸರಕಾರಿ ಶಾಲೆಯ ಮಕ್ಕಳಿಗಾಗಿ ಮನ ಮಿಡಿಯುವ ಕೆಲವೇ ಕೆಲವು ಸಂಸ್ಥೆಗಳ ಮತ್ತು ವಿಶಿಷ್ಟ ಉತ್ತಮ ಮನಸ್ಸುವುಳ್ಳ ವ್ಯಕ್ತಿಗಳ ಪಾತ್ರ ಮಹತ್ವದ್ದಾಗಿದೆ.
ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆ ಉತ್ತಮವಾಗಲಿ ಎಂಬ ಉದ್ದೇಶದಿಂದ “ಮುಂಬೈನ ಶೇಠ ತಾಪಿದಾಸ ಮತ್ತು ತುಳಸಿ ದಾಸ ಹಾಗೂ ವ್ರಜದಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ಮಾರ್ಟ್ ಬೋರ್ಡ್ ನ್ನು ವಿತರಿಸಲಾಯಿತು.
ಇದಕ್ಕೆ ಕಾರಣೀಭೂತರಾದ ಕೈಗಾ ಅಣುವಿದ್ಯುತ್ ಸ್ಥಾವರದ ನಿವೃತ್ತ ವಿಜ್ಞಾನಿಗಳಾದ ವಿಶ್ವನಾಥ್ ಸಿಂದಗಿ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಇಂದಿನ ದಿನಗಳಲ್ಲಿ ಕಲಿಕೆಯಲ್ಲಿ ತಂತ್ರಜ್ಞಾನದ ಪಾತ್ರ ಅಪಾರ ಹಾಗೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದರ ಉಪಯೋಗ ಮಾಡಿಕೊಂಡು ಕಲಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಬೇಕೆಂದು ಹಾಗೂ ಮಕ್ಕಳಿಗೆ ಮಾನವೀಯ ಮೌಲ್ಯಗಳ ಅವಶ್ಯಕತೆಯ ಕುರಿತು ಮಾತನಾಡಿದರು.
ಸಮಸ್ತ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗದಿಂದ ವಿಶ್ವನಾಥ್ ಸಿಂದಗಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನ ಗುರುಗಳಾದ ಶ್ರೀ ಎ. ಬಿ.ಪಾಟೀಲ ಸರ್ ಹಿರಿಯ ಶಿಕ್ಷಕರಾದ ಶ್ರೀ.ಆರ್.ಬಿ.ಪಾಟೀಲ,ಎಚ್.ಜಿ. ಕಾಂಬಳೆ ಹಾಗೂ ಸಂಗಮೇಶ ಬಿರಾದಾರ, ಸಂತೋಷ ಕಾಂಬಳೆ.ಸಂಗಮೇಶ ಹತ್ತರಕಿಹಾಳ ಶಿಕ್ಷಕರು ಅದೇ ರೀತಿ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ಶೈಲ ಕುಂಬಾರ ಮತ್ತು ಗ್ರಾಮದ ಜನತೆಯು ಭಾಗವಹಿಸಿದ್ದರು.



