ಮಾನಸಿಕ ಸದೃಡತೆಗಾಗಿ ಇಷ್ಟಲಿಂಗ ಪೂಜೆ ಮಾಡಿಕೊಳ್ಳಿ
ಸವದಿ ಇಳಕಲ್ ಚಿತ್ತರಗಿ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿ ಅಭಿಮತ
ಅಥಣಿ :
ಇಂದಿನ ದಿನಗಳಲ್ಲಿ ಮಾನಸಿಕ ಸದೃಡತೆಗಾಗಿ ಇಷ್ಟಲಿಂಗ ಪೂಜೆಯನ್ನು ಪ್ರತಿಯೊಬ್ಬರೂ ಮಾಡಿಕೊಳ್ಳಬೇಕು. ಎಷ್ಟೇ ಸಂಪತ್ತು ಗಳಿಸಿದರು ಮಾನಸಿಕ ನೆಮ್ಮದಿ ಅತ್ಯಂತ ಅವಶ್ಯಕವಾಗಿದೆ ಎಂದು ಸವದಿ – ಇಳಕಲ್ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಸವದಿ ಗ್ರಾಮದ ಶ್ರೀ ಸಂಗನ ಬಸವ ಶಿವಯೋಗಿಗಳವರ 84 ನೇ ಹಾಗೂ ಡಾ. ಮಹಾಂತ ಶಿವಯೋಗಿಗಳವರ 8 ನೇ ವರ್ಷದ ಶರಣು ಸಂಸ್ಕೃತಿ ಮಹೋತ್ಸವ ಅಂಗವಾಗಿ ಜರುಗಿದ ಬಸವ ಧರ್ಮ ದರ್ಶನ ಪ್ರವಚನ ಉದ್ಘಾಟನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಾ ಮಹಾ ಮಾನವತವಾದಿ ಬಸವಣ್ಣನವರು ಕರುಣಾ ಮೂರ್ತಿಗಳಾಗಿದ್ದರು. ನುಡಿದಂತೆ ನಡೆದ ಬಸವಣ್ಣನವರ ತತ್ವಗಳು ವಿಶ್ವಮಾನ್ಯತೆ ಹೊಂದಿವೆ ಎಂದು ಅವರು ಹೇಳಿದರು.
ರಬಕವಿಯ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ ಅವರು ಮಾತನಾಡಿ ಪ್ರತಿಯೊಬ್ಬರೂ ಬಸವಾದಿ ಶರಣರು ತೋರಿದ ದಾರಿಯಲ್ಲಿ ಸಾಗಬೇಕು. ಬಸವಾದಿ ಶರಣರ ವಚನಗಳು ಸರ್ವಕಾಲಕ್ಕೂ ತೂಕಬದ್ಧವಾಗಿವೆ. ಶಾಲಾ ಕಾಲೇಜು ಮಕ್ಕಳು ಮೊಬೈಲ್ ಟಿವಿಯೊಂದಿಗೆ ಕಾಲ ಕಳೆಯದೆ ವಚನಗಳ ಅಧ್ಯಯನ ಮಾಡಬೇಕೆಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿಕ್ಷಕ ಶಿವಶಂಕರ ಬಡಿಗೇರ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಗನಗೌಡ ಪಾಟೀಲ, ಈರಣ್ಣ ಅಜೂರ, ಮಲ್ಲಪ್ಪ ಮಲಕಪ್ಪನವರ, ನಿವೃತ್ತ ಶಿಕ್ಷಕ ಕೆ. .ಎಸ್. ಅವರಾದಿ, ಬಸವಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಿದಾನಂದ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ವಕೀಲರಾದ ಸಂಗಣ್ಣ ಗೂಗವಾಡ, ಡಿ. ಬಿ. ಠಕ್ಕನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಕಾಶ ಪಾಟೀಲ ನಿರೂಪಿಸಿ ವಂದಿಸಿದರು. ಶ್ರೀ ಸಂಗನಬಸವ ಪ್ರಾಥಮಿಕ ಶಾಲೆಯ ಮಕ್ಕಳಿಂದ ವಚನ ನೃತ್ಯ ಕಾರ್ಯಕ್ರಮ ಜರುಗಿತು. ಶ್ರೀ ಸಂಗನಬಸವ ಮಠದ ಭಜನಾ ಮಂಡಳಿ ಸದಸ್ಯರು ವಚನ ಸಂಗೀತ ಸೇವೆ ಸಲ್ಲಿಸಿದರು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.



