ಇಂದಿರಾ ಕ್ಯಾಂಟೀನ್ ಯೋಜನೆಯ ಮೇಲ್ವಿಚಾರಣೆ, ಗುಣಮಟ್ಟದ ಪರಿಶೀಲನೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ಸ್ಟೀರಿಂಗ್ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಪೀರು ಎಸ್. ತಳವಾರ ಅವರಿಗೆ ರಾಮದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪೀರು ಎಸ್. ತಳವಾರ ಅವರು, ಶಾಸಕ ಅಶೋಕ ಪಟ್ಟಣವರ ಅವರು ಸೂಚಿಸಿದಂತೆ ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು. ಇಂದಿರಾ ಕ್ಯಾಂಟೀನ್ ಸದಸ್ಯನಾಗಿ ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡುವುದು ತಮ್ಮ ಕರ್ತವ್ಯ ಎಂದು ತಿಳಿಸಿದರು.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಇಂದಿರಾ ಕ್ಯಾಂಟೀನ್ನಲ್ಲಿ ದಿನಕ್ಕೆ 300 ಪ್ಲೇಟ್ ಉಪಹಾರ ಹಾಗೂ ಊಟ ಮಾತ್ರ ಲಭ್ಯವಿದ್ದು, ಈ ಪ್ರಮಾಣವನ್ನು 500 ಪ್ಲೇಟ್ಗೆ ಹೆಚ್ಚಿಸುವ ಕುರಿತು ಶಾಸಕ ಅಶೋಕ ಪಟ್ಟಣವರ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದೇ ಇಂದಿರಾ ಕ್ಯಾಂಟೀನ್ ರಾಜ್ಯ ಮಟ್ಟದ ಸ್ಟೀರಿಂಗ್ ಸಮಿತಿಯ ಇನ್ನೊರ್ವ ಸದಸ್ಯರಾದ ಸತೀಶ ಜೀನಗಾ ಅವರು ಮಾತನಾಡಿ, ಇತ್ತೀಚೆಗೆ ಅಧಿಕಾರ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಒಂದು ವಾರದೊಳಗೆ ಕ್ಯಾಂಟೀನ್ಗೆ ಅಗತ್ಯವಿರುವ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು. ಜೊತೆಗೆ ಉಪಹಾರ ಮತ್ತು ಊಟದ ಮಿತಿಯನ್ನು 300 ರಿಂದ 500 ಪ್ಲೇಟ್ಗೆ ಹೆಚ್ಚಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಇಂದಿರಾ ಕ್ಯಾಂಟೀನ್ ಸದಸ್ಯರು ಉಪಸ್ಥಿತರಿದ್ದರು.



