ಬಳ್ಳಾರಿ ವಿಮಾನ ನಿಲ್ದಾಣಕ್ಕೆ ನೂತನ ಸ್ಥಳ ಗುರುತು; ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ಹಾರಾಟ!
ಗಂಗಾವತಿ ಶಾಸಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿ ಅವರು ಬಳ್ಳಾರಿ ವಿಮಾನ ನಿಲ್ದಾಣದ ಕುರಿತು ಕೇಳಿದ ಪ್ರಶ್ನೆಗೆ ಸದನದಲ್ಲಿ ನೀಡಿದ ಉತ್ತರ:
ಬಳ್ಳಾರಿ ನಗರದಿಂದ ಸುಮಾರು 19 ಕಿ.ಮೀ ದೂರದಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ಸ್ಥಳ ಗುರುತಿಸುವ ಮೂಲಕ ಬಳ್ಳಾರಿ–ವಿಜಯನಗರ–ಕೊಪ್ಪಳ ಮೂರು ಜಿಲ್ಲೆಗಳ ಸಂಪರ್ಕ ಹಾಗೂ ಅಭಿವೃದ್ಧಿಗೆ ಹೊಸ ದಿಕ್ಕು ಸಿಗಲಿದೆ. ಇದರಿಂದ ಪ್ರವಾಸೋದ್ಯಮ, ಕೈಗಾರಿಕೆ ಮತ್ತು ಹೂಡಿಕೆಗಳಿಗೆ ಮಹತ್ವದ ಮೈಲುಗಲ್ಲಾಗಲಿದೆ.
ಈಗ ಹೊಸದಾಗಿ ಗುರುತಿಸಿರುವ ಸ್ಥಳದಿಂದ ಹೊಸಪೇಟೆಗೆ 33 ಕಿ.ಮೀ., ಹಂಪೆಗೆ 26 ಕಿ.ಮೀ., ಸಂಡೂರಿಗೆ 33 ಕಿ.ಮೀ., ಕೊಪ್ಪಳಕ್ಕೆ 75 ಕಿ.ಮೀ., ಕುರುಗೋಡಿಗೆ 14 ಕಿ.ಮೀ., ತೋರಣಗಲ್ಲಿಗೆ 13 ಕಿ.ಮೀ. ಹಾಗೂ ಸಿರಗುಪ್ಪಕ್ಕೆ 43 ಕಿ.ಮೀ. ದೂರವಾಗಲಿದೆ.
ಈಗ ಗುರುತಿಸಿರುವ ಜಾಗವು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎಷ್ಟರ ಮಟ್ಟಿಗೆ ಸೂಕ್ತವೆಂಬುದನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತೀರ್ಮಾನಿಸಬೇಕಿದೆ. ಇದು ಕಾರ್ಯಸಾಧ್ಯ ಎಂದು ತೀರ್ಮಾನವಾದಲ್ಲಿ ಸಂಬಂಧಿತ ಜಿಲ್ಲೆಗಳ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು.



