ಕರ್ನಾಟಕವನ್ನು “ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ಕ್ಯಾಪಿಟಲ್” ಆಗಿಸುವತ್ತ ಮಹತ್ವದ ಚರ್ಚೆ
ಬೆಂಗಳೂರಿನ IKF ಕಚೇರಿಯಲ್ಲಿ ಈ ದಿನ ಏರೋಸ್ಪೇಸ್ ಮತ್ತು ಡಿಫೆನ್ಸ್ ವಿಷನ್ ಗ್ರೂಪ್ ಸದಸ್ಯರೊಂದಿಗೆ ಮಹತ್ವದ ಸಭೆ ನಡೆಸಲಾಯಿತು.
ರಾಜ್ಯವನ್ನು ಜಾಗತಿಕ ಏರೋಸ್ಪೇಸ್ ಹಾಗೂ ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಮತ್ತಷ್ಟು ಬಲಪಡಿಸುವ ದಿಸೆಯಲ್ಲಿ ಈ ಸಭೆ ಮಹತ್ವದ ಮೈಲಿಗಲ್ಲಾಗಿದೆ. ಕರ್ನಾಟಕವನ್ನು “ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ಕ್ಯಾಪಿಟಲ್ ಆಫ್ ಇಂಡಿಯಾ” ಆಗಿ ಹೊರಹೊಮ್ಮಿಸುವ ಕುರಿತಾಗಿ ಪ್ರಮುಖ ಚರ್ಚೆ ನಡೆಯಿತು.
ರಾಜ್ಯದಲ್ಲಿ ಎರಡು ಕಡೆ ಡಿಫೆನ್ಸ್ ಕಾರಿಡಾರ್ ಸ್ಥಾಪನೆಗಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಹುಬ್ಬಳ್ಳಿ- ಬೆಳಗಾವಿ- ವಿಜಯಪುರ- ಹಾಗೂ ದಕ್ಷಿಣ ಕರ್ನಾಟಕದ ಬೆಂಗಳೂರು ಉತ್ತರ -ಚಿಕ್ಕಬಳ್ಳಾಪುರ- ಕೋಲಾರ ಭಾಗದಲ್ಲಿ ಡಿಫೆನ್ಸ್ ಕಾರಿಡರ್ ಸ್ಥಾಪನೆಯಾದಲ್ಲಿ ರಾಜ್ಯದ ಆರ್ಥಿಕತೆಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು. ಬೆಂಗಳೂರು, ಮೈಸೂರು ಕಾರಿಡಾರ್ ಘೋಷಣೆ ಮಾಡಿ ಎನ್ನುವ ಮನವಿಯನ್ನು ಉದ್ಯಮಿಗಳು ವ್ಯಕ್ತಪಡಿಸಿದರು.
ಇದಲ್ಲದೆ, ರಾಜ್ಯದ ವಿವಿಧೆಡೆ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಭೂಮಿ ಒದಗಿಸಲು ಬದ್ಧತೆ ವ್ಯಕ್ತಪಡಿಸಿದೆ. ಇದರಿಂದ “ಬಿಯಾಂಡ್ ಬೆಂಗಳೂರು” ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ ಎಂಬ ಅಂಶವೂ ಸೇರಿದಂತೆ ಹಲವು ಮಹತ್ವದ ಸಂಗತಿಗಳ ಕುರಿತು ಚರ್ಚಿಸಲಾಯಿತು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಎಸ್. ಸೆಲ್ವಕುಮಾರ್, ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ, ಉದ್ಯಮಿಗಳಾದ ಸೆಂಟ್ರಂ ಎಲೆಕ್ಟ್ರಾನಿಕ್ಸ್ ನ ಶ್ರೀ ಅಪ್ಪಾರಾವ್ ವೆಂಕಟ ಮಲ್ಲವರಪು, ಹನಿವೆಲ್ ನ ಶ್ರೀ ಜೀವಿಶ್ ಗುರುಮೂರ್ತಿ, ಸ್ಯಾಫ್ರಾನ್ ನ ಶ್ರೀ ಜೆ.ಎಸ್. ಗವಣಕರ್, AIAನ ಡಾ. ಎಸ್. ದ್ವಾರಕಾನಾಥ್ ಸೇರಿದಂತೆ ಏರೋ ಸ್ಪೇಸ್ & ಡಿಫೆನ್ಸ್ ವಿಷನ್ ಗ್ರೂಪ್ ನ ಹಲವು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.





