ಸವದಿ ಕಣಕಣದಲ್ಲೂ ಬಸವ ತತ್ವ ತುಂಬಿದೆ
ನಂದೇಶ್ವರ ಬಸವ ಕೇಂದ್ರ ಸವದಿ ಗ್ರಾಮದ ಕಣಕಣದಲ್ಲೂ ಬಸವ ತತ್ವ ಪಸರಿಸಿದೆ. ಗ್ರಾಮದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಬಸವ ತತ್ವಗಳನ್ನು ಅನುಸರಿಸುತ್ತಿರುವುದು ಎಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿದೆ ಎಂದು ಹಿರಿಯ ಮುಖಂಡ ಗಜಾನನ ಮಂಗಸೂಳಿ ಹೇಳಿದರು.
ಸಮೀಪದ ಸವದಿ ಗ್ರಾಮದಲ್ಲಿ ಶನಿವಾರ ಜರುಗಿದ ಶರಣ ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಾ ಲಿಂ. ಡಾ. ಮಹಾಂತ ಶಿವಯೋಗಿಗಳವರನ್ನು ಪಡೆದ ಸವದಿ ಗ್ರಾಮದ ಭಕ್ತರು ಭಾಗ್ಯವಂತರು. ಸವದಿಯಲ್ಲಿ ಜರಗುವ ಶರಣ ತತ್ವದ ಕಾರ್ಯಕ್ರಮಗಳು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತಿವೆ ಎಂದು ಅವರು ಹೇಳಿದರು.
ಆಧ್ಯಾತ್ಮಿಕ ಚಿಂತಕ ಶ್ರೀ ಶಶಿಕಾಂತ ಗುರೂಜಿ ಮಾತನಾಡಿ ಹಿರಿಯರು ತಮ್ಮ ಮನೆಯ ಮಕ್ಕಳನ್ನು ಬೇರೆಯವರಿಗೆ ಪರಿಚಯಿಸುವಾಗ ಸರಕಾರಿ ನೌಕರಿ ಮಾಡುವವರನ್ನು ಪರಿಚಯಿಸುವುದರ ಜೊತೆಗೆ ಮನೆಯಲ್ಲಿ ವ್ಯವಸಾಯ ಮಾಡುವ ದೇಶಕ್ಕೆ ಅನ್ನ ನೀಡುವ ರೈತ ಮಗನನ್ನು ಇತರರಿಗೆ ಪರಿಚಯಿಸಬೇಕು. ರೈತರ ನಿತ್ಯ ಮಾಡುವ ಕಾಯಕವನ್ನು ಉದ್ದೇಶಿಸಿಯೇ ಬಸವಣ್ಣನವರು ಕಾಯಕವೇ ಕೈಲಾಸವೆಂದು 12 ನೆಯ ಶತಮಾನದಲ್ಲಿ ಹೇಳಿದ್ದಾರೆಂದು ಅವರು ಹೇಳಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸವದಿ – ಇಲಕಲ್ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿರೂರದ ಡಾ. ಬಸವಲಿಂಗ ಸ್ವಾಮೀಜಿ, ಸಿದ್ದಯ್ಯಕೋಟೆಯ ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಗುರುಬಸವ ಸ್ವಾಮೀಜಿ, ಶರಣ ಸಾಹಿತಿ ಸಿದ್ದಣ್ಣ ಲಂಗೋಟಿ, ಸಂಖದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಜಮಖಂಡಿಯ ಶ್ರೀ ಆನಂದ ದೇವರು, ಸಾಹಿತಿ ದೇವೇಂದ್ರ ಬಿಸ್ವಾಗರ, ಧಾರವಾಡದ ಡಾ. ಶಕ್ತಿ ಪಾಟೀಲ, ಅಪ್ಪುಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನೂರು ಜನ ರೈತ ದಂಪತಿಗಳನ್ನು ಶ್ರೀಮಠದಿಂದ ಗೌರವಿಸಿ ಸತ್ಕರಿಸಲಾಯಿತು.
ಸವದಿ ಗ್ರಾಮದ ಶ್ರೀ ಸಂಗನಬಸವ ಮಠದ ಶರಣ ಸಂಸ್ಕೃತಿ ಮಹೋತ್ಸವದಲ್ಲಿ ಹಿರಿಯ ಮುಖಂಡ ಗಜಾನನ ಮಂಗಸೂಳಿ ಹಾಗೂ ಹಿರಿಯ ಸಾಹಿತಿ ದೇವೇಂದ್ರ ಬಿಸ್ವಾಗರ ಅವರನ್ನು ಗೌರವಿಸಿ ಸತ್ಕರಿಸಿದ ಸವದಿ – ಇಲಕಲ್ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿ.
Trending Now


