ಬೆಳಗಾವಿ : ಸರ್ಕಾರ ಮಾಡದ ಕೆಲಸವನ್ನು ಮಠಗಳು ಮಾಡುತ್ತಿವೆ. ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿ ಜ್ಞಾನ ದಾಸೋಹ ನೀಡುತ್ತಿವೆ. ಈ ಜಗತ್ತು, ಸಂತೃಪ್ತಿ, ಸಮಾಧಾನದಿಂದ ಇರಬೇಕು ಎಂಬ ಮುಂದಾಲೋಚನೆ ಮಠಗಳು ಶ್ರಮಿಸುತ್ತಿವೆ. ಈ ದಿಶೆಯಲ್ಲಿ ಬಿಳ್ಳೂರ ಮಠದ ಶ್ರೀಗಳು ನಡೆಯುತ್ತಿದ್ದಾರೆ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಶ್ಲಾಘಿಸಿದರು.
ಮಹಾರಾಷ್ಟ್ರದ ಜತ್ತ ತಾಲೂಕಿನ ಬಿಳ್ಳೂರ ಗ್ರಾಮದಲ್ಲಿ ಶ್ರೀ ಗುರುಬಸವ ಮಹಾಸ್ವಾಮಿಗಳ ವಿರಕ್ತಮಠದ ನೂತನ ಪೀಠಾಧಿಪತಿಗಳಾದ ಶ್ರೀ ಈಶಪ್ರಸಾದ ಮಹಾಸ್ವಾಮಿಗಳ ಚರ ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಠಗಳ ಜೊತೆಯಾಗಿಯೇ ಗಡಿ ಅಭಿವೃದ್ಧಿ ಪ್ರಾಧಿಕಾರವೂ ಕೂಡ ಸದಾಕಾಲ ಗಡಿನಾಡಿನ ಕನ್ನಡಿಗರು, ಕನ್ನಡ ಶಾಲೆಗಳ ಉಳಿವಿಗೆ ಯಾವತ್ತೂ ಸಿದ್ದವಿದೆ ಎಂದು ಭರವಸೆ ನೀಡಿದರು.
ಶ್ರಾವಣ ಮಾಸದಲ್ಲಿ ಇದೊಂದು ಅದ್ದೂರಿ ಕಾರ್ಯಕ್ರಮವಾಗಿದೆ. ಮಠದಲ್ಲಿ ಧರ್ಮ ಸಂಸ್ಕಾರಯುತ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಜಗಜ್ಯೋತಿ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದರು. ಅದೇ ಮಾರ್ಗದಲ್ಲಿ ನಾವು ನಡೆಯಬೇಕು ಎಂದು ಕರೆ ನೀಡಿದರು.
ಸ್ವಾಮೀಜಿಗಳು, ಹಿರಿಯರು ತಮ್ಮ ದೂರದೃಷ್ಟಿಯಿಂದ ಮಠಗಳನ್ನು ಕಟ್ಟಿದ್ದಾರೆ. ಅವುಗಳಲ್ಲಿ ಅನ್ನ ಜೊತೆಗೆಯೇ ಜ್ಞಾನ ದಾಸೋಹದ ಧಾರೆ ಎರೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ನಾವು ವಿದ್ಯಾವಂತರಾದವರೆ ಇಂದಿನ ದಿನಗಳಲ್ಲಿ ಶ್ರೀಮಂತರಿದ್ದಂತೆ. ಇದರ ಬಗ್ಗೆ ಎಲ್ಲ ಮಹಿಳೆಯರು ಗಮನ ಹರಿಸಬೇಕು. ತಮ್ಮ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು. ಭೂಮಿ ಇದ್ದವರು, ವ್ಯಾಪಾರಸ್ಥರು ಶ್ರೀಮಂತಿಕೆ ಹೊಂದಿದವರಲ್ಲ, ಬದಲಿಗೆ ವಿದ್ಯೆಯಿರುವವರು ಮಾತ್ರ ಶ್ರೀಮಂತರು ಎಂದು ಸೋಮಣ್ಣ ಬೇವಿನಮರದ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯದ ಆರು ರಾಜ್ಯಗಳ ಗಡಿಗಳಲ್ಲಿ ಕನ್ನಡದ ಭವನಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಕಾಸರಗೋಡು, ಅಕ್ಕಲಕೋಟ, ಗೋವಾ ಸೇರಿದಂತೆ ಗಡಿ ಭಾಗದ ಜಿಲ್ಲೆಗಳಲ್ಲಿ ಕನ್ನಡ ಕಾಯಕಗಳು ನಡೆಯುತ್ತಿವೆ. ಗಡಿಭಾಗದ ಕನ್ನಡ ಶಾಲೆಗಳ ಮೂಲ ಸೌಕರ್ಯ, ಶಿಕ್ಷಕರ ಸಮಸ್ಯೆಗಳು ಹಾಗೂ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಧಿಕಾರ ಶ್ರಮಿಸುತ್ತಿದೆ ಎಂದು ಹೇಳಿದರು.
ಅಲ್ಲದೆ ಬಿಳ್ಳೂರ ಗ್ರಾಮದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶಾಲೆ ಹಾಗೂ ಮಠಕ್ಕೆ 30 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ. ಮುಂಬರುವ ಅಕ್ಟೋಬರ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಮಹಾರಾಷ್ಟ್ರದ ಅಕ್ಕಲಕೋಟೆಯಲ್ಲಿ ಕನ್ನಡ ಭವನದ ಉದ್ಘಾಟನೆಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವೀಸ್ ಅವರು ಆಗಮಿಸಲಿದ್ದಾರೆ ಎಂದು ಬೇವಿನಮರದ ಘೋಷಿಸಿದರು.
ಈ ವೇಳೆ ನೂತನ ಪೀಠಾಧಿಪತಿಗಳಾದ ಶ್ರೀ ಈಶಪ್ರಸಾದ ಮಹಾಸ್ವಾಮಿಗಳು, ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ನದಿ ಇಂಗಳಗಾಂವದ ಸಿದ್ದಲಿಂಗ ಮಹಾಸ್ವಾಮೀಜಿ, ಸಿದ್ದಾರೂಢ ಮಠ ಬುರಣಾಪೂರದ ಮಾತೋಶ್ರೀ ಯೋಗೇಶ್ವರಿ ಮಾತಾಜಿ, ಖ್ಯಾತ ಉಪನ್ಯಾಸಕ ಅಶೋಕ್ ಹಂಚಲಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.