ಚಿಕ್ಕೋಡಿ: ನಾಯಿಗೆ ಹೆದರಿ ಬೈಕ್ ಸವಾರ ಒರ್ವ ಅಪಘಾತದಲ್ಲಿ ಮೃತಪಟ್ಟ ವಿಲಕ್ಷಣ ಘಟನೆ ಸಂಭವಿಸಿದೆ. ಕಳೆದ ಹದಿನೈದನೇ ತಾರೀಖು ಈ ಅಪಘಾತ ಸಂಭವಿಸಿ ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನಿವಾಸಿ ವಿಶ್ವನಾಥ್ ಶಿರೋಳ (44) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಅಥಣಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ವಿವರ: ಸಂಕ್ರಾಂತಿ ಹಬ್ಬದ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಕರಿ ಆಚರಣೆ ಮಾಡುವುದು ವಾಡಿಕೆ, ಕರಿ ಮುಗಿಸಿಕೊಂಡು ಕುಂಬಾರ ಗಲ್ಲಿಯ ಮಾರ್ಗವಾಗಿ ಮನೆಗೆ ಹಿಂತಿರುಗುವಾಗ, ಬೀದಿ ನಾಯಿ ಒಂದು ಬೈಕ್ ಹಿಂಬಾಲಿಸುತ್ತಿದ್ದಂತೆ ಬೈಕ್ ಸವಾರ ನಾಯಿಂದ ರಕ್ಷಿಸಿಕೊಳ್ಳೋಕೆ ಅತಿ ವೇಗವಾಗಿ ಬೈಕ್ ಚಲಾವಣೆ ಮಾಡುತ್ತಿದ್ದಂತೆ, ಚಿಕ್ಕ ಕಾಲು ದಾರಿಯಲ್ಲಿ ತಿರುವು ಬರುತ್ತಿದ್ದಂತೆ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ನೇರವಾಗಿ ಮನೆ ಗೋಡೆಗೆ ಹೊಡೆದು (ಅಪಘಾತ) ಸ್ಥಳದಲ್ಲೇ ಮೃತಪಟ್ಟ ದೃಶ್ಯ ಸ್ಥಳೀಯರ ಮನೆಯ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದೆ.
ಸಾಮಾನ್ಯವಾಗಿ ಮನೆ ಗೋಡೆಗೆ ಗುದ್ಧಿಸಿ ಅಪಘಾತ ಸಂಭವಿಸಿ ಮೃತಪಟ್ಟಿದ್ದಾನೆ ಎಂದು ತಿಳಿಯಲಾಗಿತ್ತು, ಆದರೆ ಇವತ್ತು ಸಿಸಿ ಕ್ಯಾಮೆರಾ ದೃಶ್ಯಗಳನ್ನು ನೋಡುತ್ತಾ ಕುಳಿತಿದ್ದಾಗ, ಈ ಅಪಘಾತಕ್ಕೆ ಕಾರಣ ಏನೆಂಬುದು ತಿಳಿದು ಬಂದಿದೆ. ಅಥಣಿ ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದ್ದು ಶಾಲೆ ಮಕ್ಕಳು ಬೈಕ್ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಅಥಣಿ ಪುರಸಭೆ ಅಧಿಕಾರಿಗಳ ವಿರುದ್ಧ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



