ಬೆಳಗಾವಿ : ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ವತಿಯಿಂದ ನೀಡಲಾಗುವ ಉತ್ತಮ ಪ್ರಾಂಶುಪಾಲ ರಾಜ್ಯ ಮಟ್ಟದ ಪ್ರಶಸ್ತಿಗೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆನಂದ ಕೋಳಿ ಆಯ್ಕೆಯಾಗಿದ್ದಾರೆ.
ಶಿಕ್ಷಣ ಇಲಾಖೆಯ ಆಯ್ಕೆ ಸಮಿತಿ ವತಿಯಿಂದ 2 ಜನ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲರು ಹಾಗೂ 8 ಜನ ಉತ್ತಮ ಉಪನ್ಯಾಸಕರನ್ನು ಆಯ್ಕೆಮಾಡಲಾಗಿದೆ. ಅದರಲ್ಲಿ ಆನಂದ ಕೋಳಿ ಅವರನ್ನು ಆಯ್ಕೆ ಮಾಡುವ ಮೂಲಕ ಸರ್ಕಾರ ಅವರ ಶೈಕ್ಷಣಿಕ ಸೇವೆಯನ್ನು ಸ್ಮರಿಸಿದೆ.
2025-26 ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಪ್ರಶಸ್ತಿಯನ್ನು ಸೆಪ್ಟೆಂಬರ್ 5ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಇತರ ಗಣ್ಯರು ಪ್ರಧಾನ ಮಾಡಲಿದ್ದಾರೆ.
ಪ್ರಮುಖವಾಗಿ ಪ್ರಾಂಶುಪಾಲರು, ಉಪನ್ಯಾಸಕರು ತಮ್ಮ ವೃತ್ತಿಯಲ್ಲಿ ಇನ್ನಷ್ಟು ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ಈ ಪ್ರಶಸ್ತಿ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳ ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ರಾಜಿಯಾಗದೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಂಶುಪಾಲರಿಗೆ ಹಾಗೂ ಉಪನ್ಯಾಸಕರಿಗೆ ಪ್ರತಿವರ್ಷದಂತೆ ಈ ಬಾರಿಯೂ ಶಿಕ್ಷಣ ಇಲಾಖೆಯ ನೇಮಕ ಮಾಡಲಾಗಿದ್ದ ರಾಜ್ಯಮಟ್ಟದ ಆಯ್ಕೆ ಸಮಿತಿಯು ಆನಂದ ಕೋಳಿ ಅವರನ್ನು ಆಯ್ಕೆ ಮಾಡುವ ಮೂಲಕ ಅಭಿನಂದಿಸಿದೆ.
ರಾಜ್ಯ ಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಆಯ್ಕೆಯಾಗಿರುವ ಆನಂದ ಕೋಳಿ ಅವರು ಮೂಲತಃ ರಾಯಬಾಗ ತಾಲೂಕಿನ ಇಂಗಳಿ ಗ್ರಾಮದವರಾಗಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ, ರಾಯಚೂರಿನ ದೇವದುರ್ಗ ಹಾಗೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಳತಗಾ, ಕೆರೂರ ಗ್ರಾಮಗಳಲ್ಲಿ 25 ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸುವ ಮೂಲಕ ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕರಾಗಿ ಹೆಸರು ಸಂಪಾದಿಸಿದ್ದಾರೆ.
ಇದಾದ ಬಳಿಕ ಬಡ್ತಿ ಪಡೆದು ಕಳೆದ 7 ವರ್ಷಗಳಿಂದ ಪ್ರಾಚಾರ್ಯರಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮಜಲಟ್ಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸೇವಾವಧಿಯುದ್ದಕ್ಕೂ ನಿರಂತರವಾಗಿ ವಿದ್ಯಾರ್ಥಿಗಳ ಏಳ್ಗೆಗೆ, ಬಡ ಮಕ್ಕಳ ಶಿಕ್ಷಣಕ್ಕಾಗಿ ಮಿಡಿದಿದ್ದಾರೆ. ಬಾಲ್ಯದಿಂದಲೂ ಬಡತನದಲ್ಲಿ ಬೆಳೆದ ಇವರು ಬಡತನದ ನೋವುಗಳನ್ನು ಅನುಭವಿಸಿ ಪೋಷಕರ ಬೆಂಬಲದೊಂದಿಗೆ ಉತ್ತಮ ಶಿಕ್ಷಣ ಪಡೆದು ಉಪನ್ಯಾಸಕ ವೃತ್ತಿಗೆ ಸೇರಿದ್ದಾರೆ. ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವ ಮೂಲಕ ಬದುಕಿನ ಸಾರ್ಥಕ ಹಾಗೂ ನೆಮ್ಮದಿಯ ಕ್ಷಣಗಳಿಗೆ ಆನಂದ ಕೋಳಿ ಅವರು ಸಾಕ್ಷಿಯಾಗಿದ್ದಾರೆ.
ಶಿಕ್ಷಕ ಅಥವಾ ಉಪನ್ಯಾಸಕ ಸಮಾಜದ ಅತ್ಯಂತ ದೊಡ್ಡ ಆಸ್ತಿ. ಏಕೆಂದರೆ ಆತನ ವೃತ್ತಿಪರ ಪ್ರಯತ್ನಗಳು ಭೂಮಿಯ ಭವಿಷ್ಯದ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತವೆ ಎಂಬ ಮಾತಿನಂತೆ ತಮ್ಮ ಜ್ಞಾನದ ವಿನಿಮಯ ಹಾಗೂ ವಿಸ್ತರಣೆಯಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಂಡು ಉತ್ತಮ ಸೇವೆಗೈಯ್ಯುತ್ತಿರುವ ಕಾರಣದಿಂದ ಶಿಕ್ಷಣ ಇಲಾಖೆ ಇವರನ್ನು ಗುರುತಿಸಿ ರಾಜ್ಯ ಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಪರಿಗಣಿಸಿ ಆಯ್ಕೆ ಮಾಡಿದೆ.
ತಮ್ಮ ವಿನಯವಂತಿಕೆ, ಸಾತ್ವಿಕ ಸ್ವಭಾವ ಹಾಗೂ ಪರೋಪಕಾರಿ ಮನೋಭಾವದ ಆನಂದ ಕೋಳಿ ಅವರು ವಿದ್ಯಾರ್ಥಿಗಳ ಹೃದಯದಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಹೆಮ್ಮೆಯ ಪ್ರಿನ್ಸಿಪಾಲ್ ಆಗಿ ರಾಜ್ಯ ಮಟ್ಟದ ಉತ್ತಮ ಸಾಧನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.
ವಿದ್ಯಾರ್ಥಿಗಳ ಪಾಲಿಗೆ ಒಳ್ಳೆಯ ಮಾರ್ಗದರ್ಶಕರಾಗಿ, ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡಿರುವ ಅವರು ವೃತ್ತಿ ಗಾಗಿ ತಮ್ಮ ಜೀವ, ಜೀವನ ಸವೆಸುತ್ತಾ ವಿದ್ಯಾದೇವಿಯ ಸೇವೆ ಸಲ್ಲಿಸುತ್ತಿರುವ ಅಪರೂಪದ ಪ್ರಾಂಶುಪಾಲರಾಗಿದ್ದಾರೆ. ಉತ್ತಮ ಪ್ರಾಂಶುಪಾಲ ಪ್ರಶಸ್ತಿಯಿಂದ ಆನಂದ ಕೋಳಿ ಅವರು ಬೆಳಗಾವಿ ಜಿಲ್ಲೆಯ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಶಿಕ್ಷಣ ಪ್ರೇಮಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಭಾಜನರಾದ ಆನಂದ ಕೋಳಿ ಅವರಿಗೆ ಆರ್ ಎಂಡಿ ಡಿಜಿಟಲ್ ಮೀಡಿಯಾ ಹೃತ್ಪೂರ್ವಕವಾಗಿ ಶುಭಕೋರಿ ಹಾರೈಸಿದೆ.
ಅಲ್ಲದೆ ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು, ಉಪನ್ಯಾಸಕರು ಹಾಗೂ ಕಾಲೇಜು ಆಡಳಿತ ಮಂಡಳಿ ಸೇರಿದಂತೆ ಗ್ರಾಮಸ್ಥರಿಂದ ಕೋಳಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಮುಖ್ಯವಾಗಿ ಗ್ರಾಮೀಣ, ಗಡಿಭಾಗದ ನೂರಾರು ಬಡಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸುವ ನಿಟ್ಟಿನಲ್ಲಿ ನನ್ನ ಸೇವೆ ತೃಪ್ತಿಕರವಾಗಿದೆ. ಶಿಕ್ಷಣ ಇಲಾಖೆ, ಕಾಲೇಜಿನ ಉಪನ್ಯಾಸಕರು, ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರದಿಂದ ನನ್ನ ಈ ಪುಟ್ಟ ಸಾಧನೆ ಸಾಧ್ಯವಾಗಿದೆ. ರಾಜ್ಯ ಮಟ್ಟದಲ್ಲಿಯೇ ನನ್ನ ಸೇವೆ ಗುರುತಿಸಿರುವ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಆನಂದ ಕೋಳಿ ಆರ್ ಎಂಡಿ ಡಿಜಿಟಲ್ ಮೀಡಿಯಾದೊಂದಿಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.