ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ ಶಿವಕುಮಾರ್
ಯಾಸಿನ್ ಅವರ ಆತ್ಮಕ್ಕೆ ಶಾಂತಿ ದೊರಕಲಿ
ಬೆಂಗಳೂರು,
“ಮಾಜಿ ಶಾಸಕ ಸಯ್ಯದ್ ಯಾಸಿನ್ ಅವರು ಜನಪ್ರತಿನಿಧಿಯಾಗಿ ಪ್ರಗತಿಪರ ಕೆಲಸಗಳನ್ನು ಮಾಡಿದವರು. ಒಳ್ಳೆಯ ನಾಯಕರಾಗಿ ಸಮಾಜದ ಹಿತಚಿಂತಕರಾಗಿದ್ದರು. ಯಾಸಿನ್ ಅವರ ಮರಣ ಅತ್ಯಂತ ದುಃಖದ ವಿಚಾರ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಸಂತಾಪ ಸೂಚಿಸಿದರು.
ಕೇಂದ್ರದ ಮಾಜಿ ಸಚಿವ ಸಿ ಕೆ ಜಾಫರ್ ಷರೀಫ್ ಅವರ ಅಳಿಯ, ಮಾಜಿ ಶಾಸಕ ಸಯ್ಯದ್ ಯಾಸಿನ್ ಅವರು ಭಾನುವಾರ ನಿಧನರಾಗಿದ್ದು, ಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಪುಲಕೇಶಿನಗರದ ಕೋಲ್ಸ್ ಪಾರ್ಕ್ ನ ನಿವಾಸಕ್ಕೆ ತೆರಳಿ ಯಾಸಿನ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ನಂತರ ಮಾಧ್ಯಮಗಳ ಜತೆ ಮಾತನಾಡಿದರು.
“ಕಾಂಗ್ರೆಸ್ ಪಕ್ಷ ಅವರ ಕೊಡುಗೆಗಳನ್ನು ಗಮನಿಸಿ ಆರು ಬಾರಿ ಟಿಕೆಟ್ ನೀಡಿತ್ತು. ಅವರು ನನ್ನ ಜೊತೆ ಶಾಸಕರಾಗಿದ್ದವರು. ನಾವೆಲ್ಲ ಒಟ್ಟಿಗೆ ರಾಜಕಾರಣ ಮಾಡಿದ್ದೇವೆ. ಶಾಲಾ ವಿದ್ಯಾಭ್ಯಾಸದ ಕಾಲದಿಂದಲೂ ನನಗೆ ಪರಿಚಿತರು. ಎಲ್ಲಾ ವರ್ಗದ ಜನರ ಪರವಾಗಿ ಕೆಲಸ ಮಾಡಿದ್ದರು” ಎಂದರು.
“ಅವರಿಗೆ ಈ ಮಧ್ಯೆ ಸ್ವಲ್ಪ ಆರೋಗ್ಯ ಕೈಕೊಟ್ಟಿತು. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದವರು. ಜಾಫರ್ ಷರೀಫ್ ಅವರ ಕುಟುಂಬದ ಹಿರಿಯ ಸದಸ್ಯನಾಗಿ ಕಿರಿಯರಿಗೆ ಮಾರ್ಗದರ್ಶಕರಾಗಿದ್ದರು. ದೊಡ್ಡ ಪರಂಪರೆ ಹೊಂದಿರುವ ವಂಶ. ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ಹೇಳಲಾಗುವುದು” ಎಂದರು.



