ಅಕ್ರಮ ಸಂಬಂಧದ ಶಂಕೆ ಮಲಗಿದ್ದಾಗ ಹೆಂಡತಿಯನ್ನ ಕೊಚ್ಚಿ ಕೊಂದ ಗಂಡ
ಅಥಣಿ:- ಕುಡಿತದ ಚಟ ಹಾಗೂ ಪತ್ನಿಯ ಮೇಲಿನ ಸಂಶಯದ ಭೂತಕ್ಕೆ ಬಲಿಯಾದ ಪತಿಯೊಬ್ಬ ತನ್ನ ಹೆಂಡತಿಯನ್ನು ಮಲಗಿದ್ದಲ್ಲೇ ಮಾರಕಾಸ್ತ್ರಗಳಿಂದ ಕಡಿದು ಭೀಕರವಾಗಿ ಹತ್ಯೆಗೈದಿರುವ ಘಟನೆ ತಾಲೂಕಿನ ಕಟಗೇರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಶೋಭಾ ಪರಗೂಂಡ ಸಾರವಾಡ (35) ಕೊಲೆಯಾದ ದುರ್ದೈವಿ. ಈಕೆಯ ಪತಿ ಪರಗೂಂಡ ಸಾರವಾಡನೇ ತನ್ನ ಪತ್ನಿಯನ್ನು ಬರ್ಬರವಾಗಿ ಕೊಂದ ಆರೋಪಿಯಾಗಿದ್ದಾನೆ,ಮೂಲತಃ ಅಥಣಿ ತಾಲೂಕಿನ ಖವಟಗೋಪ್ಪ ಗ್ರಾಮದ ನಿವಾಸಿಗಳಾಗಿರುವ ಈ ದಂಪತಿ, ಪ್ರಸ್ತುತ ಕಟಗೇರಿಯಲ್ಲಿ ನೆಲೆಸಿದ್ದರು.
ಆರೋಪಿ ಪರಗೂಂಡನಿಗೆ ಕುಡಿತದ ಚಟವಿತ್ತು. ದಂಪತಿಗೆ ವಿವಾಹವಾಗಿ 15 ವರ್ಷಗಳೇ ಕಳೆದಿದ್ದರೂ, ಆತ ತನ್ನ ಹೆಂಡತಿಯ ಮೇಲೆ ವಿನಾಕಾರಣ ಸಂಶಯ ಪಡುತ್ತಿದ್ದನು,ಇದೇ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಕಲಹ ಏರ್ಪಡುತ್ತಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ, ಘಟನೆಯ ದಿನ ರಾತ್ರಿ ಶೋಭಾ ಅವರು ಗಾಢ ನಿದ್ರೆಯಲ್ಲಿದ್ದಾಗ, ಆರೋಪಿ ಪತಿಯು ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡ ಶೋಭಾ ಅವರು ರಕ್ತದ ಮಡುವಿನಲ್ಲಿ ಒದ್ದಾಡಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
ಮೃತ ಶೋಭಾ ಅವರು ಕಟಗೇರಿಯ ಆವಜಿಕರ ಮಠದ ಶಾಲೆಯಲ್ಲಿ ಮಕ್ಕಳಿಗೆ ಅಡುಗೆ ಮಾಡುವ ಕೆಲಸ ಮಾಡಿಕೊಂಡು, ತನ್ನ ಸಂಸಾರವನ್ನು ನಿಭಾಯಿಸುತ್ತಿದ್ದರು. ಶಾಲೆಗೆ ಹೋಗುವ ಮಕ್ಕಳಿಗೆ ಪ್ರತಿದಿನ ಅನ್ನ ಬಡಿಸುತ್ತಿದ್ದ ಮಹಿಳೆ ಇಂದು ಹೆಣವಾಗಿರುವುದು ಇಡೀ ಗ್ರಾಮಸ್ಥರು ಮರಗುತಿದ್ದಾರೆ, ದಂಪತಿಗೆ ಇಬ್ಬರು ಮಕ್ಕಳಿದ್ದು, ತಾಯಿಯನ್ನು ಕಳೆದುಕೊಂಡ ಮಕ್ಕಳ ಬದುಕು ಅತಂತ್ರವಾಗಿದೆ .
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಅಥಣಿ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಪತ್ನಿಯ ಹತ್ಯೆಗೈದ ಆರೋಪಿ ಪತಿ ಪರಗೂಂಡ ಸಾರವಾಡನನ್ನು ಪೊಲೀಸರು ಈಗಾಗಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ತನಿಖೆ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಪತಿಯ ಸಂಶಯದ ಬುದ್ಧಿಗೆ ಬಡ ಕುಟುಂಬವೊಂದು ಸಂಪೂರ್ಣವಾಗಿ ಬೀದಿಗೆ ಬಿದ್ದಂತಾಗಿದೆ.



