ವಿಜಯಪುರದಲ್ಲಿ ಕ್ರೀಡಾ ಸಂಭ್ರಮ!
ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಭವ್ಯ ಚಾಲನೆ
ವಿಜಯಪುರ ನಗರದ BLDE ಒಳಾಂಗಣ ಕ್ರೀಡಾಂಗಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಇಂದಿನಿಂದ ಮೇ 23ರವರೆಗೆ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಇಂದು ಈ ಕ್ರೀಡೋತ್ಸವಕ್ಕೆ ಭವ್ಯ ಚಾಲನೆ ನೀಡಿ ಮಾತನಾಡಿದೆ.
ಈ ಕ್ರೀಡಾಕೂಟದ ಮೂಲಕ ವಿಜಯಪುರ ನಗರಕ್ಕೆ ಹೊಸ ಕೀರ್ತಿ ಮತ್ತು ಹೊಸ ಗುರುತು ದೊರಕಿದೆ. ಒಂದು ಕಾಲದಲ್ಲಿ ಬರದ ನಾಡು, ಬಿಸಿಲಿನ ಜಿಲ್ಲೆ ಎಂದು ಕರೆಯಲ್ಪಡುತ್ತಿದ್ದ ವಿಜಯಪುರ, 2013ರ ನಂತರ ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿದ್ದು, ಕ್ರೀಡಾ ಚಟುವಟಿಕೆಗಳಿಗೂ ವಿಶೇಷ ಉತ್ತೇಜನ ದೊರಕುತ್ತಿದ್ದು, ಸೈಕಲ್ ವೆಲೋಡ್ರೋಮ್ ಈಗಾಗಲೇ ಸ್ಥಾಪನೆಯಾಗಿದೆ. ಕನಕದಾಸ ಬಡಾವಣೆಯಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಕೂಡ ನಿರ್ಮಿಸಲಾಗಿದೆ.
ಶೀಘ್ರದಲ್ಲೇ ಅತ್ಯಾಧುನಿಕ ಸ್ವಿಮ್ಮಿಂಗ್ ಪೂಲ್ ನಿರ್ಮಾಣವಾಗಲಿದ್ದು, ಮುಂದಿನ ದಿನಗಳಲ್ಲಿ ಬ್ಯಾಸ್ಕೆಟ್ಬಾಲ್ ಟೂರ್ನಮೆಂಟ್ ಕೂಡ ಆಯೋಜಿಸಲಾಗುವುದು. ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ಕ್ರೀಡಾ ಚಟುವಟಿಕೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳು ರೂಪುಗೊಳ್ಳಲು ಉತ್ತಮ ವೇದಿಕೆಯಾಗಲಿವೆ.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ದಿ|| ಎಸ್. ಬಂಗಾರಪ್ಪ ಅವರು ಬ್ಯಾಡ್ಮಿಂಟನ್ ಕ್ರೀಡೆಗೆ ತೋರಿದ್ದ ಅಪಾರ ಆಸಕ್ತಿ ಹಾಗೂ ಅನೇಕ ಯುವಕರಿಗೆ ನೀಡಿದ ಪ್ರೇರಣೆಯನ್ನು ಸ್ಮರಿಸಿದೆ. ಈ ಟೂರ್ನಮೆಂಟ್ ಆಯೋಜಿಸುವಲ್ಲಿ, ಸಂಘಟಿಸುವಲ್ಲಿ ಶ್ರಮಿಸಿದ ಕುಮಾರ ಬಂಗಾರಪ್ಪನವರ ಶ್ರಮ ಅಪಾರ.
ಇಂದಿನ ಕಾರ್ಯಕ್ರಮದಲ್ಲಿ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಶ್ರೀ ಕುಮಾರ ಬಂಗಾರಪ್ಪ, ಶಾಸಕರಾದ ಶ್ರೀ ಬಸನಗೌಡ ಪಾಟೀಲ ಯತ್ನಾಳ, ಶ್ರೀ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿಗಳಾದ ಡಾ. ಆನಂದ್ ಕೆ., ಜಿಪಂ ಸಿಇಒ ಶ್ರೀ ಋಷಿ ಆನಂದ್, ವಿಡಿಎ ಅಧ್ಯಕ್ಷರಾದ ಡಾ. ಗಂಗಾಧರ ಸಂಬಣ್ಣಿ, ಮೇಯರ್ ಎಂ.ಎಸ್. ಕರಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕ್ರೀಡಾಪಟುಗಳು ಉತ್ಸಾಹಭರಿತರಾಗಿ ಪಾಲ್ಗೊಂಡು ಉದ್ಘಾಟನಾ ಸಮಾರಂಭದ ಮೆರಗು ಹೆಚ್ಚಿಸಿದರು.
ಕ್ರೀಡಾ ಮನೋಭಾವ, ಆರೋಗ್ಯಕರ ಸ್ಪರ್ಧೆ ಮತ್ತು ಯುವಶಕ್ತಿಯ ಸಂಯೋಜನೆಯಾದ ಇಂತಹ ಕ್ರೀಡೋತ್ಸವಗಳು ವಿಜಯಪುರವನ್ನು ರಾಜ್ಯದ ಪ್ರಮುಖ ಕ್ರೀಡಾ ಕೇಂದ್ರವನ್ನಾಗಿ ರೂಪಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಲಿವೆ.



