ಬಾಗಲಕೋಟೆ ಉಪಚುನಾವಣೆಯಲ್ಲಿ ಕೊಟ್ಟ ಭರವಸೆ : ಬೆನಕಟ್ಟಿ ಕೆರೆ ಅಭಿವೃದ್ಧಿಗೆ ಮೊದಲ ಹೆಜ್ಜೆ!
ಬಾಗಲಕೋಟೆಯ ಬೆನಕಟ್ಟಿ ಗ್ರಾಮವು ಒಂದು ಆದರ್ಶ ಗ್ರಾಮವಾಗಿದೆ. ಚುನಾವಣೆಯ ವೇಳೆಯಲ್ಲಿ ಮಾತ್ರ ಪರಸ್ಪರ ಭಿನ್ನಾಭಿಪ್ರಾಯಗಳು ಕಂಡುಬಂದರೂ, ನಂತರ ಗ್ರಾಮದ ಅಭಿವೃದ್ಧಿಯ ಬಗ್ಗೆ ಒಗ್ಗಟ್ಟಿನಿಂದ ಚಿಂತಿಸುವ ಜಾಗೃತ ಜನರನ್ನು ಇಲ್ಲಿ ಕಾಣಬಹುದು.
ಸ್ವಚ್ಛತೆ, ಸೌಂದರ್ಯ ಹಾಗೂ ಸಾಮಾಜಿಕ ಜವಾಬ್ದಾರಿಯಿಂದ ಈ ಗ್ರಾಮ ವಿಶೇಷವಾಗಿದೆ. ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಉಮೇಶ್ ಹೆಚ್. ಮೇಟಿ ಅವರ ಪರವಾಗಿ ಪ್ರಚಾರ ಕಾರ್ಯಕ್ಕೆ ತೆರಳಿದಾಗ ನನಗಾದ ಅನುಭವವಿದು.
ಗ್ರಾಮದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಮುಂಭಾಗದಲ್ಲಿರುವ ಕೆರೆಯನ್ನು ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಕೋರಿದ್ದರು. “ಈ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಿ, ನಿಮ್ಮ ಕೆಲಸ ಮಾಡಿಸಿಕೊಡುವ ಜವಾಬ್ದಾರಿ ನನ್ನದು” ಎಂದು ಭರವಸೆ ನೀಡಿದ್ದೆ.
ಎಂದಿಗೂ ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ದೊರೆತಿಲ್ಲ. ಆದರೆ ಈ ಉಪಚುನಾವಣೆಯಲ್ಲಿ ಈ ಭಾಗದಲ್ಲಿ ನಮ್ಮ ಪಕ್ಷಕ್ಕೆ ಅತ್ಯಧಿಕ ಮತಗಳು ಬಂದಿವೆ. ಅಭ್ಯರ್ಥಿ ಶ್ರೀ ಉಮೇಶ್ ಹೆಚ್.ಮೇಟಿ ಅವರು ಐತಿಹಾಸಿಕ ವಿಜಯ ಸಾಧಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆನಕಟ್ಟಿ ಗ್ರಾಮಸ್ಥರು ವಿಜಯಪುರದ ನಮ್ಮ ನಿವಾಸಕ್ಕೆ ಆಗಮಿಸಿ, ಚುನಾವಣೆಯ ವೇಳೆ ನಾನು ನೀಡಿದ್ದ ಭರವಸೆಯನ್ನು ಪ್ರಸ್ತಾಪಿಸಿ ಗ್ರಾಮದ ಕೆರೆಯನ್ನು ಅಭಿವೃದ್ಧಿಪಡಿಸಲು ಕೋರಿದರು. ಈ ಕುರಿತು ಸಣ್ಣ ನೀರಾವರಿ ಸಚಿವರಾದ ಶ್ರೀ ಎನ್. ಎಸ್. ಬೋಸರಾಜು ಅವರೊಂದಿಗೆ ಮಾತನಾಡಿ, ಬೆನಕಟ್ಟಿ ಕೆರೆ ಅಭಿವೃದ್ಧಿಯ ಭರವಸೆ ಈಡೇರಿಸಲು ಶ್ರಮಿಸುವುದಾಗಿ ತಿಳಿಸಿದ್ದೇನೆ.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ವಿವಾಹ, ವಿವಾಹ ವಾರ್ಷಿಕೋತ್ಸವ, ಸೀಮಂತ, ಮಕ್ಕಳ ಹುಟ್ಟಹಬ್ಬ, ಉಟ್ಟದಟ್ಟಿ (ನಾಮಕರಣ-ತೊಟ್ಟಿಲು ಶಾಸ್ತ್ರ), ಜನ್ಮದಿನೋತ್ಸವ ಮುಂತಾದ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಿಸದೆ, ಸಾಂಪ್ರದಾಯಿಕವಾಗಿ, ಸರಳವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಲು ಯುವಕರು ಮುಂದಾಗಿರುವುದಾಗಿ ತಿಳಿಸಿದರು. ಗ್ರಾಮದ ಯುವಕರ ಈ ನಿರ್ಧಾರ ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದ್ದು, ಎಲ್ಲರಿಗೂ ಮಾದರಿಯಾಗಿದೆ.
ಜನರ ವಿಶ್ವಾಸ, ಯುವಕರ ಜಾಗೃತಿ ಮತ್ತು ಅಭಿವೃದ್ಧಿಯ ಸಂಕಲ್ಪ ಒಂದಾದಾಗ ಗ್ರಾಮಗಳು ಮಾದರಿ ಸಮಾಜಗಳಾಗಿ ರೂಪುಗೊಳ್ಳುತ್ತವೆ ಎಂಬುದಕ್ಕೆ ಬೆನಕಟ್ಟಿ ಉತ್ತಮ ಉದಾಹರಣೆ.
#ಬಾಗಲಕೋಟೆಉಪಚುನಾವಣೆ



