ಪಟಾಕಿ ಸಿಡಿಸಿ ಸಂಭ್ರಮಿಸಿದ ಜನರು – ಕೆರೂರಲ್ಲಿ ಲೋಕಾಯುಕ್ತ ದಾಳಿ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಪೊಲೀಸ್ ಠಾಣೆಯ ಮೇಲೆ ಲೋಕಾಯುಕ್ತ ದಾಳಿ ನಡೆದ ಹಿನ್ನೆಲೆ ಪಿಎಸ್ಐ ಸಿಕ್ಕಿಬಿದ್ದ ಘಟನೆ ಜನರಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದೆ.
ಪಿಎಸ್ಐ ಬಂಧನವಾಗುತ್ತಿದ್ದಂತೆಯೇ ಕೆಲ ಯುವಕರ ಗುಂಪು ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಗಮನ ಸೆಳೆದಿದೆ.
ಈ ಘಟನೆ ಸಾರ್ವಜನಿಕರು ಅಧಿಕಾರಿಯ ವಿರುದ್ಧ ಎಷ್ಟು ಬೇಸತ್ತು ಹೋಗಿದ್ದರೋ ಅನ್ನೋದಕ್ಕೆ ಸಾಕ್ಷಿಯಾಗಿದೆ.ಕೆರೂರ ಠಾಣೆಯ ಪಿಎಸ್ಐ ಭೀಮಪ್ಪ ವಿರುದ್ಧ ಲಂಚ ಹಾಗೂ ದುರ್ವ್ಯವಹಾರದ ಹಲವು ಆರೋಪಗಳು ಕೇಳಿಬಂದಿದ್ದವು. ಸಾರ್ವಜನಿಕರ ವಿರೋಧವೂ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಸುದ್ದಿ ಹರಡುತ್ತಿದ್ದಂತೆಯೇ ಜನರು ತಮ್ಮ ಸಂತೋಷವನ್ನು ಪಟಾಕಿ ಸಿಡಿಸಿ ವ್ಯಕ್ತಪಡಿಸಿದರು.
ಭ್ರಷ್ಟ ಅಧಿಕಾರಿಯೊಬ್ಬನು ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಂತೆಯೇ ಜನರು ಹೀಗೆ ಸಂಭ್ರಮಿಸುವುದು ವಿರಳವಾದರೂ, ಕೆರೂರಿನಲ್ಲಿ ಕಂಡುಬಂದ ಈ ದೃಶ್ಯ ಜನರ ಅಸಮಾಧಾನದ ತೀವ್ರತೆಯನ್ನು ಸ್ಪಷ್ಟಪಡಿಸಿದೆ.




