ನಗರೀಕರಣದಲ್ಲಿ ಗ್ರಾಮೀಣ ಸಂಸ್ಕೃತಿ ಸೊಗಡು ಮುಳುಗಿ ಹೋಗಬಾರದು:ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ: ನಗರೀಕರಣದಲ್ಲಿ ಗ್ರಾಮೀಣ ಸಂಸ್ಕೃತಿ ಸೊಗಡು ಮುಳುಗಿ ಹೋಗಬಾರದು. ಕುಸುಗಲ್ ಗ್ರಾಮದಲ್ಲಿ ಗ್ರಾಮ ದೇವತೆಯ ಪುನರ್ ಸ್ಥಾಪನೆ ಮಾಡುವ ಮೂಲಕ ನಗರೀಕರಣದಲ್ಲಿ ಮುಳುಗದೇ ನಿಮ್ಮತನ ಉಳಿಸಿಕೊಂಡಿರುವುದು ಸಂತಸವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬೆಟ್ಟ ಕುಸುಗಲ್ಲ ಗ್ರಾಮದಲ್ಲಿ ಗ್ರಾಮದೇವತೆಯರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
ಕುಸುಗಲ್ ಗ್ರಾಮ ನಮ್ಮ ತಂದೆ ಎಸ್. ಆರ್. ಬೊಮ್ಮಾಯಿಯವರಿಗೆ ಬಹಳ ಅಚ್ಚು ಮೆಚ್ಚಿನ ಗ್ರಾಮ. ಅವರು ಮೂರು ಬಾರಿ ಇಲ್ಲಿ ಶಾಸಕರಾಗಿ ಆಯ್ಕೆಯಾಗಿ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಸೇವೆ ಮಾಡಲು ಕುಸುಗಲ್ ಗ್ರಾಮದ ಗುರು ಹಿರಿಯರು ಮತ್ತು ಯುವಕರ ಬಹಳ ದೊಡ್ಡ ಆಶೀರ್ವಾದ ಇತ್ತು. 1978 ರಿಂದ 89 ರ ವರೆಗೆ ಅವರು ಈ ಕ್ಷೇತವನ್ನು ಪ್ರತಿನಿಧಿಸಿದ್ದರು. ಇಲ್ಲಿ ಎಲ್ಲರೂ ಅವರಿಗೆ ಪರಿಚಿತರು. ಊರಿನ ಕೆಲವರು ಚುನಾವಣೆ ಸಂದರ್ಭದಲ್ಲಿ ವಿರೋಧ ಮಾಡಿದರೂ ಊರಿನ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದರು. ಇನ್ನೊಂದು ಕಾರಣ ವೈ.ಬಿ. ಬಸನಗೌಡರು ನಮ್ಮ ತಂದೆ ಒಟೊಟ್ಟಿಗೆ ಬೆಳೆದವರು. ಅವರು ಡಿಸಿಸಿ ಬ್ಯಾಂಕ್ ಚೇರಮನ್. ಸೊಸೈಟಿ ಚೇರಮನ್ ಆಗಿದ್ದವರು. ನಾವೆಲ್ಲ ಸಣ್ಣವರಿದ್ದಾಗ ನಮ್ಮ ತಂದೆ ಇಲ್ಲಿಗೆ ಕರೆದುಕೊಂಡು ಬರುತ್ತಿದ್ದರು. ಇಲ್ಲಿ ಶಾಸಕರಾಗುವ ಮುಂಚೆ ಕುಂದಗೋಳ ತಾಲೂಕಿನ ಶಾಸಕರಾಗಿದ್ದರು. 1967 ರಿಂದ ಈ ಊರಿನ ಸಂಪರ್ಕ ಇತ್ತು. ಹೀಗಾಗಿ ಇಲ್ಲಿಗೆ ಬಂದಾಗ ನನಗೆ ಭಾವನಾತ್ಮಕ ಮಾತುಗಳು ಬರುತ್ತವೆ ಎಂದರು.
ಈ ಊರಿನ ಜನರು ಶ್ರಮಜೀವಿಗಳು ಅಲ್ಲ ಸಂಖ್ಯಾತರು, ಎಸ್ಸಿ, ಎಸ್ಟಿ, ಲಿಂಗಾಯತರು ಎಲ್ಲರೂ ಇದ್ದಾರೆ. ನಗರೀಕರಣದ ಭರದಲ್ಲಿ ಕುಸುಗಲ್ ತನ್ನತನ ಕಳೆದುಕೊಳ್ಳಬಾರದು. ಒಂದು ಗ್ರಾಮದಲ್ಲಿ ಆತ್ಮೀಯವಾದ ಸಂಬಂಧ, ಮಾವ ಅಳಿಯ, ಸೋದರ ಸಂಬಂಧ, ಅಕ್ಕ ತಂಗಿಯರ ಸಂಬಂಧ ಬಹಳ ಚೆನ್ನಾಗಿರುತ್ತದೆ. ಈ ಸಂಸ್ಕೃತಿ ಸೊಗಡು ನಗರೀಕರಣದಲ್ಲಿ ಮುಳುಗಿ ಹೋಗಬಾರದು. ಕುಸುಗಲ್ ಗ್ರಾಮ ಆ ನಗರೀಕರಣದಲ್ಲಿ ಮುಳುಗಿಲ್ಲ ಅನ್ನುವುದು ಗಾಮ ದೇವತೆಯ ಪುನರ್ ಸ್ಥಾಪನೆ ಮಾಡುವ ಮೂಲಕ ನಿಮ್ಮತನ ಉಳಿಸಿಕೊಂಡಿರುವುದು ಸಂತಸವಾಗಿದೆ ಎಂದರು.
ಈ ಊರಿನಲ್ಲಿ ನೀರಿನ ಸಮಸ್ಯೆ ಬಹಳ ಇತ್ತು. ಕುಸುಗಲ್ ಕೆರೆಗೆ ಎಷ್ಟೆ ಮಳೆ ಬಂದರೂ ನೀರು ನಿಲ್ಲುತ್ತಿರಲಿಲ್ಲ. ಈಗ ನೀರು ನಿಲ್ಲುತ್ತಿದೆ. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಕುಸುಗಲ್, ಬ್ಯಾಹಟ್ಟಿ, ಅಣ್ಣಿಗೇರಿ ಗ್ರಾಮಗಳಿಗೆ ಮಲಪ್ರಭದಿಂದ ನೀರು ತರಲು ಅನುಕೂಲವಾಯಿತು. ಆ ಸಂದರ್ಭದಲ್ಲಿ ಒಳ್ಳೆಯ ಕೆಲಸ ಆಗಿದೆ. ಕುಸುಗಲ್ ಗ್ರಾಮದಲ್ಲಿ ಆದಷ್ಟು ಬೇಗ ಪಿಯುಸಿ ಕಾಲೇಜು ಮಾಡಲು ಶಾಸಕ ಕೋನರೆಡ್ಡಿ ಅವರಿಗೆ ಹೇಳುತ್ತೇನೆ. ಅಗತ್ಯ ಬಿದ್ದರೆ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿಯಾದರೂ ಪಿಯುಸಿ ಕಾಲೇಜು ಆರಂಭಿಸಿ ನಂತರ ಡಿಗ್ರಿ ಕಾಲೇಜು ತರುವ ಭರವಸೆ ನೀಡಿದರು.
ಒಂದು ಕಾಲದಲ್ಲಿ ಭೂಮಿ ಇದ್ದವರು ಜಗತ್ತು ಆಳುತ್ತಿದ್ದರು. ಅಲೆಕ್ಸಾಂಡರ್ ಜಗತ್ತು ಗೆಲ್ಲಲು ಯುದ್ಧ ಮಾಡಿದ. ಆ ಮೇಲೆ ಯಾರ ಬಳಿ ದುಡ್ಡಿತ್ತು ಅವರು ಜಗತ್ತು ಆಳಿದರು. ಇಂಗ್ಲೀಷರು 130 ದೇಶ ಆಳಿದರು. 21 ನೇ ಶತಮಾನ ಯಾರ ಬಳಿ ಜ್ಞಾನ ಇದೆ ಅವರು ಜಗತ್ತಿನ ಅತ್ಯಂತ ದೊಡ್ಡ ಶ್ರೀಮಂತರಾಗಿದ್ದಾರೆ. ಅಮೇರಿಕಾದಂತ ದೇಶವನ್ನು ಸಂಪೂರ್ಣ ನಿಯಂತ್ರಣ ಮಾಡುವ ಶಕ್ತಿ ಮೂರು ನಾಲ್ಕು ಜನರಿಗೆ ಬಂದಿದೆ. ಭೂಮಿಗೆ ಬೆಲೆ ಬಂದಿರಬಹುದು. ಅದು ಶಾಸ್ವತವಾಗಿರುವುದಿಲ್ಲ. ಹತ್ತು ವರ್ಷದಿಂದ ಬಂಗಾರ, ಭೂಮಿಯ ಬೆಲೆ ಹೆಚ್ಚಾಗಿದೆ. ಆದರೆ, ಅದು ಬಹಳ ದಿನ ಉಳಿಯುವುದಿಲ್ಲ. ಭೂಮಿ ತೆಗೆದುಕೊಂಡರೂ ಮಕ್ಕಳಿಗೆ ವಿದ್ಯೆ ನೀಡುವುದನ್ನು ಮರೆಯಬೇಡಿ, ಕುಸುಗಲ್ ಮಕ್ಕಳಿಗೆ ವಿದ್ಯೆ ನೀಡಿದರೆ ಅವರು ಜಗತ್ತಿನಲ್ಲಿ ಒಳ್ಳೆಯ ಹೆಸರು ಮಾಡುತ್ತಾರೆ. ನನ್ನನ್ನು ನೆನಪಿಟ್ಟು ಕರೆಯಿಸಿದ್ದಕ್ಕೆ ಧನ್ಯವಾದಗಳು, ನನ್ನ ಕೊನೆ ಉಸಿರಿರುವವರೆಗೂ ಈ ಊರಿನ ಜೊತೆಗೆ ಸಂಬಂಧ ಇರುತ್ತದೆ. ಸದಾ ನಿಮ್ಮ ಸೇವೆಗೆ ನಾನು ನಿಮ್ಮ ಜೊತೆಗೆ ಇರುತ್ತೇನೆ ಎಂದು ಹೇಳಿದರು.



