ಬೇಸಿಗೆ ರಜೆಯಲ್ಲಿ ಹೆಚ್ಚಾದ ಅಪ್ರಾಪ್ತರ ವಾಹನ ಚಾಲನೆ, ವಿಶೇಷ ಕಾರ್ಯಾಚರಣೆ ಕೈಗೊಳ್ಳುವಂತೆ ಡಿಜಿಪಿಗೆ ಪತ್ರ
ಬೆಂಗಳೂರು: ಮಾ15, ಮೋಟಾರ್ ವಾಹನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯಡಿ 18 ವರ್ಷಗಳೊಗಿನ ಮಕ್ಕಳು ವಾಹನ ಚಲಾಯಿಸುವುದು ದಂಡನೀಯ ಮತ್ತು ಶಿಕ್ಷಾರ್ಹ ಅಪರಾಧವಾಗಿದ್ದರೂ ಶಾಲಾ ಕಾಲೇಜ್ ಗಳಿಗೆ ಬೇಸಿಗೆ ರಜೆ ನೀಡಿದ ಪ್ರಯುಕ್ತ ಅಪ್ರಾಪ್ತರ ವಾಹನ ಚಾಲನೆ ಹೆಚ್ಚಾಗಿದ್ದು ಅಪಘಾತಗಳು ಸಂಭವಿಸುವ ಮುಂಚಿತವಾಗಿ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಕೈಗೊಂಡು ವಿಶೇಷ ಕಾರ್ಯಾಚರಣೆ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಡಿಜಿಪಿರವರಿಗೆ ಪತ್ರ ಬರೆದಿದ್ದಾರೆ!
ಪ್ರಸ್ತುತ ರಾಜ್ಯದ ಶಾಲಾ ಕಾಲೇಜ್ ಗಳು ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ನೀಡಲಾಗಿದ್ದು ಅಪ್ರಾಪ್ತರು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲಾ ರೀತಿಯ ರಸ್ತೆಗಳಲ್ಲಿ ಮತ್ತು ನಿರ್ಜನ ಪ್ರದೇಶ, ಖಾಲಿ ಲೇಔಟ್ ಗಳಲ್ಲಿ ವೀಲಿಂಗ್, ಟ್ರಿಪಲ್ ರೈಡಿಂಗ್ ಮಾಡುವುದು, ಪೋಷಕರನ್ನು ಹಾಗೂ ಸ್ನೇಹಿತರನ್ನು ಕೂಡಿಸಿಕೊಂಡು ಅಜಾಗರೂಕತೆಯಿಂದ ವಾಹನಗಳನ್ನು ಅಡ್ಡದಿಡ್ಡಿಯಾಗಿ ಚಲಾಯಿಸುತ್ತಿರುವುದು ವ್ಯಾಪಕವಾಗಿ ಕಂಡು ಬಂದಿರುತ್ತದೆ, ಸದರಿ ಅಪ್ರಾಪ್ತರಿಗೆ ಸಂಚಾರಿ ನಿಯಮಗಳು, ಕಾನೂನುಗಳ ಬಗ್ಗೆ, ವಾಹನ ಚಾಲನೆಯಿಂದ ತಮಗೆ ಮತ್ತು ಸಾರ್ವಜನಿಕರಿಗಾಗುವ ಅನಾಹುತಗಳ ಬಗ್ಗೆ ಯಾವುದೇ ಅರಿವಿಲ್ಲದೆ ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸುತ್ತಿದ್ದು ಕೆಲವು ಅಪ್ರಾಪ್ತರು ಮಾಡುವ ತಪ್ಪಿಗೆ ಪೋಷಕರು ಸಂಕಷ್ಟ ಎದುರಿಸುವಂತಾದರೇ, ಕೆಲವು ಪೋಷಕರು ಕಾನೂನಿನ ಅರಿವಿದ್ದರೂ ಮಕ್ಕಳ ಮೇಲಿನ ಪ್ರೀತಿ, ವ್ಯಾಮೋಹದಿಂದ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ತರಬೇತಿ ನೀಡುತ್ತಿರುವುದು ಮತ್ತು ಹಿಂಬದಿ ಸೀಟ್ನಲ್ಲಿ ಕುಳಿತುಕೊಂಡು ಸಾರ್ವಜನಿಕ ರಸ್ತೆಗಳಲ್ಲಿ ಮಕ್ಕಳಿಗೆ ವಾಹನ ಚಲಾಯಿಸಲು ಪ್ರೇರಪಿಸುತ್ತಿರುವುದು ಆತಂಕಕಾರಿಯಾಗಿರುತ್ತದೆ, ಇಂತಹ ಅಪ್ರಾಪ್ತ ಮಕ್ಕಳಿಂದ ಇತರ ಸವಾರರಿಗೆ ಸಾರ್ವಜನಿಕರಿಗೆ ತೊಂದರೆಯಾಗಿ ಖಂಡಿಸುವವರಿಗೆ ಪೋಷಕರುಗಳು ಅಪ್ರಾಪ್ತ ಮಕ್ಕಳನ್ನು ಪರವಾಗಿಸಿಕೊಂಡು ದೌರ್ಜನ್ಯ, ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸಾರ್ವಜನಿಕ ವಲಯದಲ್ಲಿ ಪ್ರತಿನಿತ್ಯ ನಡೆಯುತ್ತಿರುವುದು ಕಂಡು ಬರುತ್ತಿರುತ್ತವೆ, 2021ರಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಆಟೋಗೆ ಡಿಕ್ಕಿಹೊಡೆದಿದ್ದರಿಂದ ಪ್ರಾಧ್ಯಪಕರೊಬ್ಬ ಮೃತಪಟ್ಟ ಪ್ರಕರಣದಲ್ಲಿ ವಾಹನ ಮಾಲೀಕನಿಂದ 1.41 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ನೀಡಲು ಗಂಗಾವತಿಯ ಹಿರಿಯ ಸಿವಿಲ್ ನ್ಯಾಯಾಲವು ಆದೇಶಿಸಿರುತ್ತದೆ, ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ 15 ವರ್ಷದ ಇರ್ವ ಬಾಲಕರು ವಾಹನಗಳ ಸ್ಟಂಟ್ ಮತ್ತು ಕ್ರಾಶ್ ಮಾಡುವಾಗ ವಾಹನಗಳು ಪರಸ್ಪರ ಡಿಕ್ಕಿಯಾದ್ದರಿಂದ ಒರ್ವ ಬಾಲಕ ಮೃತಪಟ್ಟಿದ್ದು ಮತ್ತೋರ್ವ ಬಾಲಕ ಹಾಗೂ ಆತನ ತಂದೆಯ ವಿರುದ್ದ ಪ್ರಕರಣ ದಾಖಲಾಗಿದ್ದು ನ್ಯಾಯಾಂಗ ಬಂಧನಕ್ಕೊಳಗಾಗಿರುತ್ತಾರೆ. ತುಮಕೂರಿನ ಗುಬ್ಬಿಯಲ್ಲಿ ಅಪ್ರಾಪ್ತ ಮಗನಿಗೆ ಚಲಾಯಿಸಲು ಬೈಕ್ ನೀಡಿದ್ದರಿಂದ ತಂದೆಗೆ ಒಂದು ದಿನ ಜೈಲು ಶಿಕ್ಷೆ ಮತ್ತು 30 ಸಾವಿರ ರೂಪಾಯಿ ದಂಡವನ್ನು ನ್ಯಾಯಾಲವು ವಿಧಿಸಿದ್ದು ಸೇರಿ ನಿರಂತರ ಇಂತಹ ಪ್ರಕರಣಗಳ ವಿರುದ್ಧ ನ್ಯಾಯಾಲಯಗಳು ಗರಿಷ್ಟ ಪ್ರಮಾಣದ ದಂಡವನ್ನು ವಿಧಿಸುತ್ತಿರುತ್ತದೆ, ಆದಾಗ್ಯೂ ಅಪ್ರಾಪ್ತ ಬಾಲಕರು ವಾಹನ ಚಲಾಯಿಸಿದರೆ ಮತ್ತು ಬಾಲಕನಿಗೆ, ವಾಹನ ನೀಡಿದ ಮಾಲೀಕರಿಗೆ, ಪೋಷಕರಿಗೆ ಗರಿಷ್ಟ ಮಟ್ಟದ ದಂಡ ಹಾಗೂ ಜೈಲು ಶಿಕ್ಷೆಯಿದ್ದರೂ ಅಜಾಗರೂಕ ಮತ್ತು ಉದಾಸೀನ ತೋರುತ್ತಿರುತ್ತಾರೆ,
ಪ್ರಸ್ತುತ ಬೇಸಿಗೆ ರಜೆ ಪ್ರಯುಕ್ತ ಅಪ್ರಾಪ್ತರು ವಾಹನಗಳನ್ನು ಹೆಚ್ಚಾಗಿ ಚಲಾಯಿಸುತ್ತಿದ್ದು ತ್ವರಿತವಾಗಿ ರಾಜ್ಯದಲ್ಲಿ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡು ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಎಫ್ ಎಂ, ರೇಡಿಯೋ, ಸ್ಥಳೀಯ ಹಾಗೂ ಇತರೆ ಟಿವಿ ಮಾಧ್ಯಮಗಳಲ್ಲಿ, ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಿ ಪರಿಣಾಮಕಾರಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಘಟಕಾಧಿಕಾರಿಗಳಿಗೆ/ಪೊಲೀಸ್ ಠಾಣೆಗಳಿಗೆ ಸೂಕ್ತ ಆದೇಶ/ನಿರ್ದೇಶನ ನೀಡುವಂತೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಪತ್ರ ಬರೆದಿದ್ದಾರೆ



