*ಅಭಿವೃದ್ಧಿಯ ಪಥದಲ್ಲಿ ದೆಹಲಿ ಬಿಜೆಪಿ: ಹಿನ್ನಡೆಯ ಹಾದಿಯಲ್ಲಿ ಕರ್ನಾಟಕ ಕಾಂಗ್ರೆಸ್:ಭರತ್ ಬೊಮ್ಮಾಯಿ*
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಇಂದು ಜಾಗತಿಕವಾಗಿ ಇವಿ (EV) ಕ್ರಾಂತಿ ಗೆ ಸಜ್ಜಾಗುತ್ತಿದೆ. ಆದರೆ, ಈ ಹೊತ್ತಿನಲ್ಲಿ ಬಿಜೆಪಿ ಆಡಳಿತದ ದೂರದೃಷ್ಟಿ ಮತ್ತು ಕಾಂಗ್ರೆಸ್ ಸರ್ಕಾರದ ಹಿಂದುಳಿದ ರಾಜಕೀಯದ ನಡುವಿನ ವ್ಯತ್ಯಾಸ ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತಿದೆ. ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಆಡಳಿತವು ಪರಿಸರ ಸ್ನೇಹಿ ಭವಿಷ್ಯಕ್ಕೆ ನಾಂದಿ ಹಾಡುತ್ತಿದ್ದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯ ಗಡಿಯಾರವನ್ನು ಹಿಂದಕ್ಕೆ ತಿರುಗಿಸುತ್ತಿದೆ ಎಂದು ಬಿಜೆಪಿ ಯುವ ಮುಖಂಡ ಭರತ್ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಆಡಳಿತವು ಪ್ರೋ-ಡೆವಲಪ್ಮೆಂಟ್ ಆಡಳಿತಕ್ಕೆ ಮಾದರಿಯಾಗಿದೆ. ಸಾರ್ವಜನಿಕರಿಗೆ ನೀಡಿದ್ದ ಭರವಸೆಯಂತೆ ಸುಮಾರು ₹140 ಕೋಟಿಗೂ ಅಧಿಕ ಬಾಕಿ ಇದ್ದ ಇವಿ ಸಬ್ಸಿಡಿಯನ್ನು ಬಿಡುಗಡೆ ಮಾಡುವ ಮೂಲಕ ಸಾಮಾನ್ಯ ಜನರ ಕೈ ಹಿಡಿದಿದೆ. ಅಷ್ಟೇ ಅಲ್ಲದೆ, ನಗರದಾದ್ಯಂತ 7,000 ಹೊಸ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ದೆಹಲಿಯನ್ನು ವಿಶ್ವದ ಇವಿ ರಾಜಧಾನಿಯನ್ನಾಗಿ ರೂಪಿಸಲು ಬಿಜೆಪಿ ಪಣತೊಟ್ಟಿದೆ. ಇದು ಕೇವಲ ಮಾತಲ್ಲ, ಸುಸ್ಥಿರ ಭವಿಷ್ಯದ ಕಡೆಗೆ ಬಿಜೆಪಿ ಇಟ್ಟಿರುವ ಭದ್ರ ಹೆಜ್ಜೆ.
ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ, ಕಾಂಗ್ರೆಸ್ ಆಡಳಿತದ ಕರ್ನಾಟಕ ಇಂದು ಚಿಂತಾಜನಕ ಸ್ಥಿತಿಯಲ್ಲಿದೆ. ಒಂದು ಕಾಲದಲ್ಲಿ ತಂತ್ರಜ್ಞಾನ ಮತ್ತು ನವೀನತೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದ್ದ ರಾಜ್ಯ ಈಗ ಹಿನ್ನಡೆಯ ಹಾದಿಯಲ್ಲಿದೆ. ಇವಿ ವಾಹನಗಳ ಮೇಲಿದ್ದ ರಸ್ತೆ ತೆರಿಗೆ ವಿನಾಯಿತಿಯನ್ನು ರದ್ದುಗೊಳಿಸುವ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಧ್ಯಮ ವರ್ಗದ ಜನರ ಕನಸಿನ ಮೇಲೆ ತಣ್ಣೀರು ಎರಚಿದೆ. ಪರಿಸರ ಉಳಿಸುವ ಇಚ್ಛಾಶಕ್ತಿ ಈ ಸರ್ಕಾರಕ್ಕಿಲ್ಲ ಎಂಬುದು ಇದರಿಂದ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.
ಅವೈಜ್ಞಾನಿಕವಾಗಿ ಜಾರಿಗೆ ತಂದ ಉಚಿತ ಯೋಜನೆಗಳ ಅಬ್ಬರದಲ್ಲಿ ರಾಜ್ಯದ ಖಜಾನೆ ಇಂದು ಖಾಲಿಯಾಗಿದೆ. ಈ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ಕಾಂಗ್ರೆಸ್ ಸರ್ಕಾರ ಈಗ ಜನರ ಮೇಲೆ ತೆರಿಗೆಯ ಭಾರ ಹೇರುತ್ತಿದೆ. ಕಾಂಗ್ರೆಸ್ಗೆ ನಮ್ಮ ಹೆಮ್ಮೆಯ ಸಿಲಿಕಾನ್ ವ್ಯಾಲಿ ಈಗ ಕೇವಲ ಹಣ ಲೂಟಿ ಮಾಡುವ ಸಾಧನವಾಗಿ ಕಾಣಿಸುತ್ತಿದೆ. ದೆಹಲಿಯಲ್ಲಿ ಬಿಜೆಪಿ ಅಡೆತಡೆಗಳನ್ನು ನಿವಾರಿಸಿ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹೊಸ ಹೊಸ ಅಡೆತಡೆಗಳನ್ನು ಸೃಷ್ಟಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ.
- ಬಿಜೆಪಿ ಎಂದರೆ ಅದು ಪ್ರೋತ್ಸಾಹ, ಮೂಲಸೌಕರ್ಯ, ಮತ್ತು ನವೀನತೆ. ಆದರೆ ಕಾಂಗ್ರೆಸ್ ಎಂದರೆ ಅದು ಅತಿಯಾದ ತೆರಿಗೆ, ಭ್ರಷ್ಟಾಚಾರ ಮತ್ತು ಅಭಿವೃದ್ಧಿ ವಿರೋಧಿ ನೀತಿಗಳು. ದೆಹಲಿಯು 21ನೇ ಶತಮಾನದ ವೇಗಕ್ಕೆ ತಕ್ಕಂತೆ ಮುನ್ನುಗ್ಗುತ್ತಿದ್ದರೆ, ಕರ್ನಾಟಕವು ಕಾಂಗ್ರೆಸ್ನ ಹಳೆಯ ಕಾಲದ ರಾಜಕೀಯದಿಂದಾಗಿ ತನ್ನ ದಿಕ್ಕು ಕಳೆದುಕೊಳ್ಳುತ್ತಿದೆ ಎಂದು ತಿಳಿದಿದ್ದಾರೆ.


