ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ!
ಆಲಮಟ್ಟಿಯಿಂದ ನಗರಕ್ಕೆ ನೀರು ತರಲು ನೂತನ ಯೋಜನೆಗೆ ಡಿಪಿಆರ್ ಸಿದ್ಧಪಡಿಸುವಂತೆ ಸೂಚನೆ
ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿಜಯಪುರ ನಗರ ಹಾಗೂ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯ ಕುರಿತು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದೆ.
ಮಳೆಗಾಲ ಆರಂಭವಾಗುವವರೆಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಆಗದಂತೆ ಸಮರ್ಪಕವಾಗಿ ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿರುವೆ. ಚಾಲ್ತಿಯಲ್ಲಿರುವ ಜಲಧಾರೆ ಯೋಜನೆಗಳು, ಕೆರೆಗಳನ್ನು ತುಂಬಿಸುವುದು, ಬಾವಡಿಗಳ ಸ್ವಚ್ಛತೆ ಮುಂತಾದವುಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.
ಬೆಳೆಯುತ್ತಿರುವ ವಿಜಯಪುರ ಮಹಾನಗರದ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು, ಆಲಮಟ್ಟಿಯಿಂದ ನೇರವಾಗಿ ವಿಜಯಪುರ ನಗರಕ್ಕೆ ನೀರು ಪೂರೈಸುವ ಹೊಸ ಯೋಜನೆ ರೂಪಿಸಲು ಅಗತ್ಯದ ಡಿಪಿಆರ್ ಸಿದ್ದಪಡಿಸಲು ಜಿಲ್ಲಾ ಆಡಳಿತಕ್ಕೆ ಸೂಚಿಸಿರುವೆ.
ಸಭೆಯಲ್ಲಿ ಸಂಸದರಾದ ಶ್ರೀ ರಮೇಶ್ ಜಿಗಜಿಣಗಿ, ಶಾಸಕರುಗಳಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್, ಶ್ರೀ ಸಿ.ಎಸ್. ಅಪ್ಪಾಜಿ ನಾಡಗೌಡ, ಶ್ರೀ ವಿಠ್ಠಲ ಕಟಕದೋಂಢ, ಶ್ರೀ ರಾಜುಗೌಡ ಪಾಟೀಲ, ಶ್ರೀ ಅಶೋಕ್ ಮನಗೂಳಿ, ಜಿಲ್ಲಾಧಿಕಾರಿಗಳಾದ ಶ್ರೀ ಆನಂದ್ ಕೆ., ಜಿಪಂ ಸಿಇಒ ಶ್ರೀ ರಿಷಿ ಆನಂದ್, ಎಸ್.ಪಿ. ಶ್ರೀ ಲಕ್ಷ್ಮಣ ನಿಂಬರಗಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


