ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ: ಬಸವರಾಜ ಬೊಮ್ಮಾಯಿ
ಬಾಗಲಕೋಟೆಯ ಜನರು ರಾಜ್ಯದಲ್ಲಿ ಬದಲಾವಣೆಗೆ ಕಾರಣೀಭೂತರಾಗಿ: ಬಸವರಾಜ ಬೊಮ್ಮಾಯಿ
ಬಾಗಲಕೋಟೆ: ಮುಖ್ಯಮಂತ್ರಿಗಳು ಈ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ. ಸಿದ್ದರಾಮಯ್ಯ ಅತ್ಯಂತ ಕಷ್ಟದಲ್ಲಿ ಇದ್ದಾಗ ಅವರ ಕೈಯನ್ನು ಹಿಡಿದವರು ಬಾಗಲಕೋಟೆಯ ಬಾದಾಮಿ ಜನರು. ಕಷ್ಟ ಕಾಲದಲ್ಲಿ ಕೈ ಹಿಡಿಬೇಕಾದರೆ ಬಾದಾಮಿ ಬೇಕಾಗಿತ್ತು. ಈಗ ಮುಖ್ಯಮಂತ್ರಿ ಆದ ಮೇಲೆ ಬಾದಾಮಿ, ಬಾಗಲಕೋಟೆ ಬೇಕಾಗಿಲ್ಲ. ಇಂತವರಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಾಗಲಕೋಟೆಯ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ಬಾಗಲಕೋಟೆ ಜಿಲ್ಲೆಯ ರಾಂಪೂರ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚನೆಯ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಕರ್ನಾಟಕದಾದ್ಯಂತ ಬದಲಾವಣೆಯ ಗಾಳಿ ಬೀಸುತ್ತಿದೆ. ಬದಲಾವಣೆಯನ್ನು ಜನರು ಬಯಸುತ್ತಿದ್ದಾರೆ. ಬದಲಾವಣೆಯ ಸೂಚನೆ ಕೊಡುವ ಮೊದಲ ಅವಕಾಶ ಬಾಗಲಕೋಟೆ ಜನರಿಗಿದೆ. ಇಡೀ ಬಾಗಲಕೋಟೆ ಮುಳುಗಿದ ಸಂದರ್ಭದಲ್ಲಿ ಯುಕೆಪಿ ಮೊದಲನೆ ಹಂತ, ಎರಡನೇ ಹಂತದಲ್ಲಿ ಹಣ ಕೊಟ್ಟಿದ್ದು ಕಾಂಗ್ರೆಸ್ಸೇತರ ಸರ್ಕಾರ ಅದು ಜನತಾದಳ ದೇವೇಗೌಡರು ಇದ್ದಾಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ಎಂದು ಹೇಳಿದರು.
2009 ರಲ್ಲಿ ಬಾಗಲಕೋಟೆ ನವ ನಿರ್ಮಾಣಕ್ಕೆ 700 ಕೋಟಿ ರೂ ಗಳನ್ನು ನಮ್ಮ ಸರ್ಕಾರ ಕೊಟ್ಟಿದೆ. ನಾನು ಸಿಎಂ ಇದ್ದಾಗ 2022 ರಲ್ಲಿ 2300 ಕೋಟ ರೂ. ಬಾಗಲಕೋಟೆ ಅಭಿವೃದ್ಧಿ ಗೆ ಕೊಟ್ಡಿದ್ದೇನೆ. ಗ್ರಾಮಿಣ ಪ್ರದೇಶದ ಅಭಿವೃದ್ಧಿಗಾಗಿ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಪ್ರತಿಯೊಂದು ಗ್ರಾಮದ ಅಭಿವೃದ್ಧಿ ಆಗಿದೆ. ಕಳೆದ ಮೂರು ವರ್ಷದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ಸಿಎಂಗೆ ಒಂದು ಹಳ್ಳಿಗೆ ಚುನಾವಣಾ ಪ್ರಚಾರಕ್ಕೆ ಹಾಕಿದ್ದರು. ಅಲ್ಲಿ ರಸ್ತೆ ಸರಿ ಇಲ್ಲ ಅಂತ ಜನ ಬೈಯುತ್ತಾರೆ ಅಂತ ಪ್ರಚಾರಕ್ಕೆ ಹೋಗಿಲ್ಲ. ಮುಖ್ಯಮಂತ್ರಿ ಗಳು ಹೋಗುತ್ತಿರುವ ಪರಿಸ್ಥಿತಿ ಇವತ್ತಿನ ರಸ್ತೆಗಳ ಪರಿಸ್ಥಿತಿ ಇದೆ.
ಮುಖ್ಯಮಂತ್ರಿ ಗಳು ಈ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ. ಸಿದ್ದರಾಮಯ್ಯ ಅತ್ಯಂತ ಕಷ್ಟದಲ್ಲಿ ಇದ್ದಾಗ ಅವರ ಕೈಯನ್ನು ಹಿಡಿದವರು ಬಾಗಲಕೋಟೆಯ ಬಾದಾಮಿ ಜನರು. ಚಾಮುಂಡೇಶ್ವರಿಯಲ್ಲಿ ಮುಖ್ಯಮಂತ್ರಿ ಆಗಿ ಮೂವತ್ತು ಸಾವಿರ ಮತಗಳಿಂದ ಸಿದ್ದರಾಮಯ್ಯ ಸೋತಿದ್ದಾರೆ. ಆದರೆ ಬಾದಾಮಿಯ ಜನ ಅವರ ಕೈ ಹಿಡಿದರು. ಹೀಗಾಗಿ ಅವರ ರಾಜಕೀಯ ಮುಂದುವರೆಯಿತು. ಆದರೆ, ಇವರು ಅಲ್ಲಿ ಯಾವುದೇ ರೀತಿಯ ಕೆಲಸ ಮಾಡಲಿಲ್ಲ. ಇಲ್ಲಿ ಬಂದು ನೋಡಲಿಲ್ಲ. ಕೆರೂರು ಏತ ನೀರಾವರಿ ಯೋಜನೆಯನ್ನು ನಾವು ಮಾಡಬೇಕಾಯಿತು. ಗೋವಿಂದ ಕಾರಜೋಳ ನೀರಾವರಿ ಸಚಿವರಿದ್ದರು ನಾನು ಸಿಎಂ ಇದ್ದಾಗ 700 ಕೋಟಿ ಕೊಟ್ಟು ಏತ ನೀರಾವರಿ ಯೊಜನೆ ಮಾಡಿ ಸಿದ್ದರಾಮಯ್ಯ ಅವರನ್ನು ಕರೆದು ಅಡಿಗಲ್ಲು ಹಾಕಿಸಿದೆವು ಎಂದು ಹೇಳಿದರು.
ಯುಕೆಪಿಗೆ ಕಾಂಗ್ರೆಸ್ ನಿಂದ ದ್ರೋಹ
ಈ ಬಾರಿ ಚುನಾವಣೆಯಲ್ಲಿ ಬಾಗಲಕೊಟೆಯಲ್ಲಿ ಯಾಕೆ ನಿಲ್ಲುತ್ತಿಲ್ಲ ಅಂತ ಪತ್ರಕರ್ತರು ಕೇಳಿದರೆ ಅವರು, ಬಾದಾಮಿ ಬಹಳ ದೂರ ಇದೆ ಅಲ್ಲಿಗೆ ಹೋಗಲು ಆಗುವುದಿಲ್ಲ ಅಂತ ಹೇಳಿದರು. ಕಷ್ಟ ಕಾಲದಲ್ಲಿ ಕೈ ಹಿಡಿಬೇಕಾದರೆ ಬಾದಾಮಿ ಬೇಕಾಗಿತ್ತು. ಈಗ ಮುಖ್ಯಮಂತ್ರಿ ಆದ ಮೇಲೆ ಬಾದಾಮಿ ಬಾಗಲಕೋಟೆ ಬೇಕಾಗಿಲ್ಲ. ಇಂತವರಿಗೆ ತಕ್ಕ ಪಾಠವನ್ನು ಕಲಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಯಾರಾದ್ರೂ ದ್ರೋಹ ಮಾಡಿದ್ದರೆ ಅದು ಕಾಂಗ್ರೆಸ್. ಇಷ್ಡು ದೊಡ್ಡ ಮೊತ್ತ ಖರ್ಚು ಮಾಡುವ ಪರಿಸ್ಥಿತಿ ಬಂದಿದ್ದರೆ. ಯೋಜನೆಯ ವೆಚ್ಚ ಹೆಚ್ಚಾಗಲು ನೇರವಾಗಿ ಕಾಂಗ್ರೆಸ್ ಸರ್ಕಾರ ಕಾರಣ. ಬಚಾವತ್ ಆಯೋಗದ ತೀರ್ಪು ಜಾರಿ ಮಾಡಲು 14 ವರ್ಷ ತೆಗೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬದಲಾವಣೆಗೆ ಕಾರಣಿಭೂತರಾಗಿ
ಮಹಿಳೆಯರ ಸುರಕ್ಷತೆಗೆ ರಾಜ್ಯ ಸರ್ಕಾರ ಗ್ಯಾರೆಂಟಿ ಕೊಡುತ್ತೀರಾ, ನಮ್ಮ ತಾಯಂದಿರಿಗೆ ಸುರಕ್ಷತೆಯಿಲ್ಲ. ಹೆಣ್ಣು ಮಕ್ಕಳು ಹೊರಗಡೆ ಹೋದರೆ ಸುರಕ್ಷಿತವಾಗಿ ಬರುತ್ತಾರೆ ಎನ್ನುವ ಭರವಸೆ ಇಲ್ಲ. ಯಾವ ರಾಜ್ಯದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತ ಇರುವುದಿಲ್ಲ ಅದೊಂದು ಸರ್ಕಾರ ಅಲ್ಲ.
ಇದೊಂದು ಪಾಪರ್ ಸರ್ಕಾರ ಸಿದ್ದರಾಮಯ್ಯ ಪಾಪರ್ ಸರ್ಕಾರದ ಮುಖ್ಯಸ್ಥ. ಇವರು ಅಧಿಕಾರದಿಂದ ಹೋದ ಮೇಲೆ ಇವರು ಎಷ್ಟು ಸಾಲ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ.
ಈಗ ಬದಲಾವಣೆ ಆಗಬೇಕಿದೆ. ವೀರಣ್ಣ ಚರಂತಿಮಠ ಅವರಿಗೆ ಮತ ಹಾಕಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರ ತಂದು ಬದಲಾವಣೆಗೆ ಕಾರಣೀಭೂತರಾಗಬೇಕೆಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿರವರು, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ, ಕೆಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಲೋಕಸಭಾ ಸದಸ್ಯರಾದ ಪಿ.ಸಿ ಗದ್ದಿಗೌಡ್ರ, ಗೋವಿಂದ ಕಾರಜೋಳ, ಅಭ್ಯರ್ಥಿಗಳಾದ ವೀರಣ್ಣ ಚರಂತಿಮಠ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



