ಬಿಜೆಪಿ ರಣತಂತ್ರ : ದಾವಣಗೆರೆ ದಕ್ಷಿಣಕ್ಕೆ ಅಚ್ಚರಿ ಅಭ್ಯರ್ಥಿ, ಬಾಗಲಕೋಟೆ ಯಾರಿಗೆ ಟಿಕೆಟ್?..
ಬೆಂಗಳೂರು : ರಾಜ್ಯದಲ್ಲಿ ಸದ್ಯ ಉಪಚುನಾವಣೆಗಳ ಕಾವು ಜೋರಾಗುತ್ತಿದೆ. ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಹಾಲಿ ಶಾಸಕರ ನಿಧನದ ಬಳಿಕ ಎದುರಾಗಿರುವ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಇಂದು ಘೋಷಣೆ ಮಾಡಿದೆ. ಬಾಗಲಕೋಟೆ ಕ್ಷೇತ್ರಕ್ಕೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಟಿಕೆಟ್ ಘೋಷಿಸಿದೆ.
ಪ್ರಮುಖವಾಗಿ ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಚ್ಚರಿಯ ಅಭ್ಯರ್ಥಿಗೆ ಮಣೆ ಹಾಕಿದೆ. ಈ ಮೂಲಕ ದಲಿತರ ಪರ ಎನ್ನುವ ಕಾಂಗ್ರೆಸ್ ಗೆ ನೇರ ಚೆಕ್ ಮೆಟ್ ಇಡುವ ಕೆಲಸ ಮಾಡಿದೆ.
ಬಿಜೆಪಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಘೋಷಿಸಿದೆ. ಈ ಮೂಲಕ ಎಸ್ಟಿ ಸಮುದಾಯದ ಯುವ ನಾಯಕನಿಗೆ ಅವಕಾಶ ನೀಡಿದೆ.
ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿರುವ ಶ್ರೀನಿವಾಸ್ ದಾಸಕರಿಯಪ್ಪ ಮಾಜಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ಜಿ. ಎಂ. ಸಿದ್ದಶ್ವರರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ವಿಚಾರದಲ್ಲಿಯೂ ತುಟಿ ಬಿಚ್ಚಿ ರಲಿಲ್ಲ. ವಿರೋಧವೂ ವ್ಯಕ್ತಪಡಿಸಿರಲಿಲ್ಲ. ಜಿಲ್ಲೆಯಲ್ಲಿನ ರಾಜಕೀಯ ಕಿತ್ತಾಟದಲ್ಲಿ ಎಂಟ್ರಿಯಾಗದೆ ಪಕ್ಷದ ಕೆಲಸ ಮಾಡುತ್ತಿದ್ದ ಶ್ರೀನಿವಾಸಗೆ ಎರಡು ಬಣಗಳ ಜೊತೆ ಉತ್ತಮ ಒಡನಾಟವಿದೆ.
ಶ್ರೀನಿವಾಸ್ ದಾಸಕರಿಯಪ್ಪ ಅವರು 2023ರ ವಿಧಾನಸಭೆ ಚುನಾವಣೆ ವೇಳೆಯೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಭರ್ಜರಿ ಓಡಾಟ ನಡೆಸಿದ್ದರು. ಆದರೆ ಅಂತಿಮವಾಗಿ ಅಜಯ್ ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ಒಲಿದಿತ್ತು. ಸುಮಾರು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದ್ದರು. ಡಾ. ಶಾಮನೂರು ಶಿವಶಂಕರಪ್ಪರು ಭರ್ಜರಿ ಜಯಭೇರಿ ಬಾರಿಸಿದ್ದರು..
ಶ್ರೀನಿವಾಸ್ ದಾಸಕರಿಯಪ್ಪ ಅವರು ದಾಸಕರಿಯಪ್ಪ ಅವರ ಪುತ್ರ. ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದ ಅವರ ತಂದೆ ದಾಸಕರಿಯಪ್ಪ ಅವರು ಜೆಡಿಎಸ್ ನಲ್ಲಿ ಪ್ರಬಲ ನಾಯಕರಾಗಿದ್ದರು.
ಅವರ ಪುತ್ರನಿಗೆ ಮಣೆ ಹಾಕುವ ಮೂಲಕ ಬಿಜೆಪಿಯು ಹೊಸ ದಾಳ ಉರುಳಿಸಿದೆ.
ಡಾ. ಶಾಮನೂರು ಶಿವಶಂಕರಪ್ಪರ ನಿಧನದಿಂದ ತೆರವಾದ ಈ ಕ್ಷೇತ್ರಕ್ಕೆ ಶ್ರೀನಿವಾಸ್ ದಾಸಕರಿಯಪ್ಪ ಅವರು ಬಿಜೆಪಿಯ ಹುರಿಯಾಳಾಗಿದ್ದು, ತೀವ್ರ ಪ್ರಬಲ ಪೈಪೋಟಿ ನೀಡಲು ತಂತ್ರಗಾರಿಕೆ ಆರಂಭಿಸಿದ್ದಾರೆ. ಬಿಜೆಪಿ ಈ ಹಿಂದಿನ ಚುನಾವಣೆಗಳಲ್ಲೂ ಹೊಸ ಮುಖಗಳಿಗೆ ಮಣೆ ಹಾಕುವ ಕೆಲಸ ಮಾಡುತ್ತ ಬಂದಿದೆ. ಹೀಗಾಗಿ ಈ ಬಾರಿಯ ಅಭ್ಯರ್ಥಿ ಆಯ್ಕೆಯು ಕಾಂಗ್ರೆಸ್ ಕಟ್ಟಿ ಹಾಕುವ ರಣತಂತ್ರದ ಭಾಗವಾಗಿಯೇ ವಿಶ್ಲೇಷಿಸಲಾಗುತ್ತಿದೆ.



