ಬಸವ ತತ್ವಕ್ಕೆ ಮಹಾಂತ ಶಿವಯೋಗಿಗಳ ಕೊಡುಗೆ ಅಪಾರ
ಬಸವ ತತ್ವಗಳನ್ನು ಚಾಚು ತಪ್ಪದೆ ಪರಿಪಾಲಿಸಿ ಸರ್ವರನ್ನು ಒಂದೇ ಸೂರಿನ ಅಡಿ ಸೆರೆಹಿಡಿದು ಭಾವೈಕ್ಯತೆ ಮೂಡಿಸಿದ ಕೀರ್ತಿ ಲಿಂ. ಡಾ. ಮಹಾಂತ ಶಿವಯೋಗಿಗಳವರಿಗೆ ಸಲ್ಲುತ್ತದೆಂದು ಮಾಜಿ ಶಾಸಕ ಶಹಜಾನ ಡೊಂಗರಗಾಂವ ಹೇಳಿದರು.
ಸಮೀಪದ ಸವದಿ ಗ್ರಾಮದಲ್ಲಿ ಶುಕ್ರವಾರ ಜರುಗಿದ ಶರಣ ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಾ ಸರ್ವರನ್ನು ಸಮಭಾವದಿಂದ ಕಾಣುವ ಸವದಿಮಠದ ಸಂಸ್ಕೃತಿ ಎಲ್ಲರಿಗೂ ಮಾದರಿಯಾಗಿದೆ. ಲಿಂ. ಡಾ. ಮಹಾಂತ ಶಿವಯೋಗಿಗಳು ಎಲ್ಲರಿಗೂ ದಾರಿದೀಪ ವಾಗಿದ್ದಾರೆಂದು ಅವರು ಹೇಳಿದರು.
ಗಂಗಾವತಿಯ ಸಾಹಿತಿ ರಾಜಶೇಖರ ನಾರನಾಳ ಮಾತನಾಡಿ ಬಸವ ತತ್ವಗಳ ತಳಹದಿಯ ಮೇಲೆ ಸಾಗುವವರು ಎಂದಿಗೂ ದಾರಿ ತಪ್ಪುವುದಿಲ್ಲ. ಬಸವ ತತ್ವಗಳು ಸರ್ವಕಾಲಕ್ಕೂ ಸಲ್ಲುವಂತಾಗಿವೆ ಎಂದು ಅವರು ಹೇಳಿದರು. ಸವದಿ-ಇಲಕಲ್ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿರೂರದ ಡಾ. ಬಸವಲಿಂಗ ಸ್ವಾಮೀಜಿ, ನಿಪ್ಪಾಣಿಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಜಮಖಂಡಿಯ ಸಾಹಿತಿ ಬಸವರಾಜ ಯಡಹಳ್ಳಿ, ಹೆಸ್ಕಾಂ ಇಲಾಖೆಯ ಅಭಿಯಂತರ ಎಸ್. ಎ. ಪಾರ್ಥನಳ್ಳಿ, ಬಳವಂತರಾವ ಪತ್ತಾರ, ಸಿ. ಎಚ್. ನಾರನಾಳ, ಕಲಾವಿದ ಶೇಖಪ್ಪ ರೂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಾಜ್ಯಮಟ್ಟದ ಶ್ರೀ ಮಹಾಂತ ಸಂಗೀತ ಪ್ರಶಸ್ತಿಯನ್ನು ಬುದನೂರಿನ ಅಂಧ ತಬಲಾ ಕಲಾವಿದ ಶೇಖಪ್ಪ ರೂಗಿ ಅವರಿಗೆ ನೀಡಲಾಯಿತು. ಜಮಖಂಡಿಯ ಕಲಾವಿದೆ ಸರಸ್ವತಿ ಸಬರದ ಸಂಗೀತ ಸೇವೆ ಸಲ್ಲಿಸಿದರು.
ಸವದಿ ಗ್ರಾಮದ ಶರಣ ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಶ್ರೀ ಮಹಾಂತ ಸಂಗೀತ ಪ್ರಶಸ್ತಿಯನ್ನು ಬುದನೂರಿನ ಅಂಧ ತಬಲಾ ಕಲಾವಿದ ಶೇಖಪ್ಪ ರೂಗಿ ದಂಪತಿಗಳಿಗೆ ನೀಡಲಾಯಿತು. ಸವದಿ ಇಲಕಲ್ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿ, ಡಾ. ಬಸವಲಿಂಗ ಸ್ವಾಮೀಜಿ ಇತರರು ಇದ್ದರು.



