ಕನ್ನಡ ನಾಡಿನ ಪ್ರಜ್ಞಾವಂತರಲ್ಲಿ ಮನವಿ…
ವಿಶ್ವ ಪಾರಂಪರಿಕ ತಾಣವಾದ ಪಶ್ಚಿಮ ಘಟ್ಟದ “ಆಗುಂಬೆ” ಎಲ್ಲರಿಗೂ ಚಿರಪರಿಚಿತ ಹೆಸರು. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಒಂದಾದ ಇದು “ದಕ್ಷಿಣದ ಚಿರಾಪುಂಜಿ” ಎಂಬ ವಿಶೇಷಣ ಹೊಂದಿತ್ತು. ಆದರೆ ಈಗ ಕೆಲವು ವರ್ಷಗಳಿಂದ ಇಲ್ಲಿ ಮಳೆ ಕಡಿಮೆಯಾಗುತ್ತಿದೆ. ತಾಪಮಾನ ಏರಿಕೆ ಕಂಡುಬರುತ್ತಿದೆ. ಹವಾಗುಣ ಬದಲಾವಣೆಯ ಪರಿಣಾಮಗಳು ನಿಚ್ಚಳವಾಗಿ ಗೋಚರಿಸುತ್ತಿದೆ. ಈ ಮಧ್ಯೆ ಆಗುಂಬೆಗೆ ಅಭಿವೃದ್ಧಿಯ ಕಂಟಕ ಎದುರಾಗಿದೆ.
ಆಗುಂಬೆಯ ಸೂರ್ಯಾಸ್ತ ವೀಕ್ಷಣೆಗೆ ದೇಶ ವಿದೇಶಗಳ ಪ್ರವಾಸಿಗರು ಬಂದರೆ, ದಟ್ಟವಾದ ಮಳೆ ಕಾಡುಗಳು ನಿಸರ್ಗ ಪ್ರಿಯರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಈಗ ಇಂತಹ ಆಗುಂಬೆಯ ಪ್ರಕೃತಿ ಸೌಂದರ್ಯಕ್ಕೆ ಸುರಂಗ ಮಾರ್ಗ ಮತ್ತು ಎರಡು ಲೇನ್ ರಸ್ತೆ ಯ ಕಂಟಕ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಈ ನಾಡಿನ ಪ್ರಜ್ಞಾವಂತ ಜನರು ತಮ್ಮ ಮೌನ ಮುರಿದು ಆಗುಂಬೆ ಉಳಿಸಿ ಎಂದು ಗಟ್ಟಿಯಾಗಿ ಮಾತನಾಡಬೇಕು.
(1) ಪರಿಸರ ವಿಜ್ಞಾನಿಗಳು, ಕಾಳಿಂಗ ಸಂಶೋಧಕರು, ಸಸ್ಯ ಶಾಸ್ತ್ರಜ್ಞರು, ಕಪ್ಪೆ, ಕೀಟ, ಜೇಡ, ಚಿಟ್ಟೆ ಇತ್ಯಾದಿ ಜೀವವೈವಿಧ್ಯ ಅಧ್ಯಯನಕಾರರು, ಭೂಗರ್ಭ ಶಾಸ್ತ್ರಜ್ಞರು, ಭೂವಿಜ್ಞಾನಿಗಳು ತಮ್ಮ ಅಧ್ಯಯನ ವರದಿ, ಸಂಶೋಧನಾ ಪ್ರಬಂಧ, ದತ್ತಾಂಶಗಳನ್ನು ಇಟ್ಟುಕೊಂಡು ಆಗುಂಬೆಯ ಜೀವವೈವಿಧ್ಯದ ಮಹತ್ವದ ಬಗ್ಗೆ ಮಾತನಾಡಬೇಕು, ಬರೆಯಬೇಕು, ಜಾಗೃತಿ ಮೂಡಿಸಬೇಕು. ಅಲ್ಲಿನ ಪರಿಸರ ಎಷ್ಟು ಅಮೂಲ್ಯ, ಅದು ಒದಗಿಸುವ ಸೇವೆಗಳು ಸುತ್ತಮುತ್ತಲಿನ ಪ್ರದೇಶಗಳ ನೀರು, ಆಹಾರ ಭದ್ರತೆ, ಜೀವನೋಪಾಯಕ್ಕೆ ಎಷ್ಟು ಅಗತ್ಯ ಎಂಬುದನ್ನು ಸರ್ಕಾರಕ್ಕೆ, ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಆಗ ಅವರ ಸಂಶೋಧನೆಗಳಿಗೂ ಬೆಲೆ ಬರುತ್ತದೆ. ಇವರೆಲ್ಲ ಜೀವವೈವಿಧ್ಯದ ದನಿಯಾಗಬೇಕಿದೆ.
(2) ಈ ನಾಡಿನ ಸಾಹಿತಿಗಳು, ಬರಹಗಾರರು, ಬುದ್ಧಿ ಜೀವಿಗಳು, ಪ್ರಜ್ಞಾವಂತರು ಅದರಲ್ಲೂ ಮುಖ್ಯವಾಗಿ ಕುವೆಂಪು, ಶಿವರಾಮ ಕಾರಂತ, ತೇಜಸ್ವಿ, ಅನಂತಮೂರ್ತಿಗಳ ಅಭಿಮಾನಿಗಳು, ಒಡನಾಡಿಗಳು, ಅವರ ಹೆಸರಿನಲ್ಲಿ ಪ್ರತಿಷ್ಠಾನ, ಪರಿಷತ್ತು, ಮಂಡಳಿ ಇತ್ಯಾದಿಗಳಲ್ಲಿ ಅಧಿಕಾರ, ಹುದ್ದೆ ಗಿಟ್ಟಿಸಿದರು, ಸಭೆ-ಸಮಾರಂಭ, ಭಾಷಣ, ಹಾರ-ತುರಾಯಿ, ಪ್ರಶಸ್ತಿ ಇತ್ಯಾದಿ ಪಡೆದಿರುವವರು ಆಗುಂಬೆಯ ನೈಸರ್ಗಿಕ ಸೌಂದರ್ಯ ಹಾಳು ಮಾಡಬೇಡಿ ಎಂದು ಸರ್ಕಾರವನ್ನು ಒತ್ತಾಯಿಸಬೇಕು.
(3) ಮೇರು ನಟ ಡಾ. ರಾಜ್ ಕುಮಾರ್ ರವರು “ಆಗುಂಬೆಯ ಪ್ರೇಮ ಸಂಜೆಯ” ಎಂದು ಹಾಡುತ್ತಾ, ನೃತ್ಯ ಮಾಡಿದ್ದಾರೆ. ಹಲವು ಸಿನಿಮಾಗಳ ಚಿತ್ರೀಕರಣ ಆಗುಂಬೆಯಲ್ಲಿ ನಡೆದಿದೆ. ಕನ್ನಡ ಚಿತ್ರೋದ್ಯಮಕ್ಕೆ ಆಗುಂಬೆಯ ನಂಟಿದೆ. ಈಗ ಸಿನಿಮಾ ಕಲಾವಿದರು, ಸೆಲೆಬ್ರಿಟಿಗಳು, ನಟ-ನಟಿಯರು ಚಿತ್ರರಂಗ ಆಗುಂಬೆ ಉಳಿಸಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.
(4) ಆಗುಂಬೆಯ ದಟ್ಟವಾದ ಕಾಡುಗಳು, ಅಲ್ಲಿನ ವಿಶಿಷ್ಟ ಜೀವವೈವಿಧ್ಯ ವನ್ಯಜೀವಿ ಛಾಯಾಗ್ರಾಹಕರು, ಯೂಟ್ಯೂಬ್, Instagram ಕಂಟೆಂಟ್ ಕ್ರಿಯೇಟರ್ಸ್ಗಳನ್ನು ತನ್ನತ್ತ ಸೆಳೆದಿದೆ. ತಮ್ಮ ಕ್ಯಾಮೆರಾಗಳಲ್ಲಿ ಅಲ್ಲಿನ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಕೆಲವರು ಅದರ ವಾಣಿಜ್ಯಿಕ ಲಾಭಗಳನ್ನೂ ಪಡೆದಿದ್ದಾರೆ. ಈಗ ವನ್ಯಜೀವಿ ಛಾಯಾಗ್ರಾಹಕರು, ಸಾಕ್ಷ್ಯಚಿತ್ರ ನಿರ್ಮಾಣ ಮಾಡುವವರು, ಕಂಟೆಂಟ್ ಕ್ರಿಯೇಟರ್ಸ್ ಗಳು ಆಗುಂಬೆ ಮಳೆಕಾಡು ಉಳಿಸಿ ಎಂದು ತಮ್ಮ ಫೋಟೋ, ವಿಡಿಯೋಗಳನ್ನು ಬಳಸಿ ಎಲ್ಲೆಡೆ ಗಟ್ಟಿಯಾಗಿ ಹೇಳಬೇಕು. ಆಗ ಅವರ ತೆಗೆದ ಫೋಟೋಗಳು, ಚಿತ್ರಿಸಿದ ವಿಡಿಯೋಗಳಿಗೆ ಒಂದು ಬೆಲೆ ಬರುತ್ತದೆ.
(5) ಮಲ್ನಾಡ್, ತೀರ್ಥಹಳ್ಳಿ, ಆಗುಂಬೆ, ಶೃಂಗೇರಿ, ಕೊಪ್ಪ, ಹೆಬ್ರಿ, ಕಾರ್ಕಳ ಎಂದು ಊರಿನ ಹೆಸರುಗಳನ್ನು ತಮ್ಮ ನಾಮಧೇಯದೊಂದಿಗೆ ಇಟ್ಟುಕೊಂಡಿರುವವರು; ತಮ್ಮ ಹೆಸರಿನ ಮುಂದೆ ಮಲೆನಾಡಿನ ಊರುಗಳ ಹೆಸರು ಸೇರಿಸಿಕೊಂಡಿರುವವರು; ಇಂಥವುಗಳಿಗೆಲ್ಲಾ ನಿಜವಾಗಿ ಅರ್ಥ ಬರಬೇಕಾದರೆ, ನೀವು ನಿಮ್ಮ ಊರಿಗೆ ತೊಂದರೆ ಆದಾಗ ಕನಿಷ್ಠ ಮಾತನಾಡಬೇಕು. ನಿಮ್ಮ ಊರಿನ ಪರಿಸರವನ್ನು ಕೊಳ್ಳೆ ಹೊಡೆಯಲು ಮುಂದಾಗಿರುವಾಗ ಧ್ವನಿ ಎತ್ತಬೇಕು. ಮಲೆನಾಡಿನ ಪ್ರಕೃತಿ, ಜನರ ಪರ ಮಾತನಾಡಬೇಕು. ಈಗ ಅವೈಜ್ಞಾನಿಕ ಅಭಿವೃದ್ಧಿಯಿಂದ ಆಗುಂಬೆ ಉಳಿಸಿ ಎನ್ನಬೇಕು.
(6) ಪರಿಸರವಾದಿಗಳು, ಪರಿಸರ ಕಾರ್ಯಕರ್ತರು, ವನ್ಯಜೀವಿ ಪ್ರೇಮಿಗಳು, ಪರಿಸರ ಪತ್ರಕರ್ತರು ತಮ್ಮ ತಮ್ಮ ಭಿನ್ನಾಭಿಪ್ರಾಯ ಮರೆತು ಒಕ್ಕೊರಲಿನಿಂದ ಸುರಂಗ ನಿಲ್ಲಿಸಿ – ಆಗುಂಬೆ ಉಳಿಸಿ ಎಂದು ಗಟ್ಟಿಯಾಗಿ ಮಾತನಾಡಬೇಕು.
(7) ಮಲೆನಾಡಿನ ಪತ್ರಕರ್ತರು, ವರದಿಗಾರರು, ಸಂಪಾದಕರು, ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ ಗಳು, ಕಂಟೆಂಟ್ ಕ್ರಿಯೇಟರ್ಸ್ ಗಳು ಯಾವುದೇ ರಾಜಕೀಯ ಒತ್ತಡಗಳಿಗೆ ಒಳಗಾಗದೇ ಮಲೆನಾಡಿನ ಹೆಮ್ಮೆಯಾದ ಆಗುಂಬೆ ಪರಿಸರ ಉಳಿಸಿ ಎಂದು ಗಟ್ಟಿಯಾಗಿ ಹೇಳಬೇಕು.
ಆಗುಂಬೆಯಲ್ಲಿ ಈಗಿರುವ ರಸ್ತೆಯ ಗುಂಡಿಗಳನ್ನು ಮುಚ್ಚಿ, ಹೊಸತಾಗಿ ಟಾರ್ ಹಾಕಿ, ಅದನ್ನು ಪ್ರತಿವರ್ಷ ನಿರ್ವಹಣೆ ಮಾಡಿ. ಜೊತೆಗೆ ರಸ್ತೆ ಮತ್ತು ತಿರುವುಗಳು ತೀರಾ ಕಿರಿದಿರುವ ಜಾಗಗಳಲ್ಲಿ ಸೂಚನಾ ಫಲಕ ಅಳವಡಿಸಿ, ಟ್ರಾಫಿಕ್ ನಿರ್ವಹಣೆಗೆ ಸಿಬ್ಬಂದಿಗಳನ್ನು ನೇಮಿಸಿ, ಇದು ಸುಗಮ ಸಂಚಾರವನ್ನು ಖಾತ್ರಿ ಪಡಿಸುತ್ತದೆ. ಅವೈಜ್ಞಾನಿಕ ಎರಡು ಲೇನ್ ರಸ್ತೆ ಮತ್ತು ಸುರಂಗ ಮಾರ್ಗ ಯೋಜನೆಗಳು ಪರಿಸರವನ್ನು ಧ್ವಂಸಗೊಳಿಸುತ್ತವೆ ಅದನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ಆಗುಂಬೆ ಪರಿಸರಕ್ಕೆ ಮನುಷ್ಯ ಹಸ್ತಕ್ಷೇಪ ಬೇಡ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಈ ನಾಡಿನ ಎಲ್ಲಾ ಪ್ರಜ್ಞಾವಂತರು ಈ ಕೂಡಲೇ ಒತ್ತಾಯಿಸಬೇಕು. ತಡ ಮಾಡಿದರೆ ಅವೈಜ್ಞಾನಿಕ ಅಭಿವೃದ್ಧಿ ಆಗುಂಬೆ ಪರಿಸರವನ್ನು ಆಹುತಿ ತೆಗೆದುಕೊಳ್ಳುತ್ತದೆ.
ಈ ಬರಹವನ್ನು ಓದಿದವರು ದಯವಿಟ್ಟು ಎಲ್ಲೆಡೆ ಶೇರ್ ಮಾಡಿ…
– ನಾಗರಾಜ ಕೂವೆ
#SaveAgumbe
#StopAgumbeTunnelProject



