ಸಿಎಂ ಕುರ್ಚಿ ಜಟಾಪಟಿ – ರಾಹುಲ್ ಪ್ರತ್ಯೇಕ ಭೇಟಿಗೆ ಡಿಕೆಶಿ ಶತಪ್ರಯತ್ನ!
ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಕುರ್ಚಿ ಜಟಾಪಟಿ ತೀವ್ರಗೊಂಡಿದೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹೈಕಮಾಂಡ್ ನಾಯಕರ ಭೇಟಿಗಾಗಿ
ಕಸರತ್ತು ನಡೆಸುತ್ತಿದ್ದಾರೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಪ್ರತ್ಯೇಕ ಭೇಟಿಗೆ ಸತತ ಪ್ರಯತ್ನ ನಡೆಸುತ್ತಿದ್ದರೂ, ಇದುವರೆಗೆ ಹೈಕಮಾಂಡ್ನಿಂದ ಯಾವುದೇ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ನಾಯಕತ್ವ ಬದಲಾವಣೆ ಕುರಿತು ಚರ್ಚಿಸಲು ಡಿಕೆಶಿ ಮುಂದಾಗಿದ್ದರೂ, ರಾಹುಲ್ ಗಾಂಧಿ ಅವರ ಭೇಟಿಗೆ ಕಾಲ ಕೂಡಿಬಂದಿಲ್ಲ ಎಂಬುದು ಕುತೂಹಲ ಮೂಡಿಸಿದೆ.
ರಾಹುಲ್ ಗಾಂಧಿ ಅವರ ಭೇಟಿಗೆ ನೇರವಾಗಿ ಸಮಯ ಸಿಗದ ಹಿನ್ನೆಲೆಯಲ್ಲಿ, ಡಿಸಿಎಂ ಡಿ.ಕೆ. ಶಿವಕುಮಾರ್ ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೂಲಕ ಪ್ರಯತ್ನ ಮುಂದುವರಿಸಿದ್ದಾರೆ. ರಾಜ್ಯ ಕಾಂಗ್ರೆಸ್ನ ನಾಯಕತ್ವ ಗೊಂದಲ ಹಾಗೂ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಸ್ಪಷ್ಟತೆ ಕೋರಲು ಡಿಕೆಶಿ ಸಿದ್ಧತೆ ನಡೆಸಿದ್ದಾರೆ.
ಸಿಎಂ ಹುದ್ದೆಗಾಗಿ ಪಟ್ಟು ಹಿಡಿದಿರುವ ಅವರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದರೂ, ಅಸ್ಸಾಂ ಚುನಾವಣಾ ಸಭೆಯ ಹೊರತಾಗಿ ರಾಹುಲ್ ಅವರೊಂದಿಗೆ ವೈಯಕ್ತಿಕ ಚರ್ಚೆಗೆ ಇನ್ನು ಅವಕಾಶ ಸಿಕ್ಕಿಲ್ಲ. ಈ ಬೆಳವಣಿಗೆಯ ನಡುವೆಯೂ ಮಾಧ್ಯಮಗಳ ಮುಂದೆ ಅಸಮಾಧಾನ ತೋರದ ಡಿಕೆಶಿ, ಇದು ಪಕ್ಷದ ಆಂತರಿಕ ವಿಚಾರ ಎನ್ನುವ ಮೂಲಕ ನಿಗೂಢತೆ ಕಾಯ್ದುಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರ ಭೇಟಿ ಸಾಧ್ಯವಾಗಲಿದೆ ಎಂಬ ವಿಶ್ವಾಸದಲ್ಲಿ ಡಿ.ಕೆ. ಶಿವಕುಮಾರ್ ಇದ್ದಾರೆ. ಅಸ್ಸಾಂ ಚುನಾವಣಾ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಕಾರಣ, ಹೈಕಮಾಂಡ್ ಇಂದು ಮಾತುಕತೆಗೆ ಅವಕಾಶ ನೀಡಬಹುದು ಎಂಬ ನಿರೀಕ್ಷೆ ಬೆಂಬಲಿಗರಲ್ಲಿದೆ.
ಒಟ್ಟಿನಲ್ಲಿ, ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ‘ಕುರ್ಚಿ ಸಮರ’ ದೆಹಲಿ ಅಂಗಳದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಡಿಕೆಶಿ ಬರಿಗೈನಲ್ಲಿ ಬೆಂಗಳೂರಿಗೆ ಮರಳುತ್ತಾರಾ ಅಥವಾ ಹೈಕಮಾಂಡ್ನಿಂದ ಭರವಸೆ ಸಿಗಲಿದೆಯೇ ಎಂಬುದು ಸದ್ಯದ ಕುತೂಹಲ



